ಶಾ ಆದೇಶದಿಂದ ಫೋನ್ ಟ್ಯಾಪಿಂಗ್ ತನಿಖೆ ಸಿಬಿಐಗೆ, ನನ್ನ ಸಲಹೆಯಿಂದ ಅಲ್ಲ: ಸಿದ್ದರಾಮಯ್ಯ
Team Udayavani, Aug 19, 2019, 10:47 AM IST
ಹುಬ್ಬಳ್ಳಿ: ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಾಗ ನನ್ನನ್ನು ಯಾರೂ ಸಂಪರ್ಕ ಮಾಡಲಿಲ್ಲ. ಸಿದ್ದರಾಮಯ್ಯನವರ ಸಲಹೆ ಮೇರೆಗೆ ಫೋನ್ ಕದ್ದಾಲಿಕೆ ಸಿಬಿಐಗೆ ವಹಿಸಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅವರು ನನ್ನ ಸಂಪರ್ಕ ಮಾಡಿಲ್ಲಾ. ನೂರಕ್ಕೆ ನೂರರಷ್ಟು ಸುಳ್ಳು. ಪೋನ್ ಟ್ಯಾಪಿಂಗ್ ಬಗ್ಗೆ ನಾನು ಸಲಹೆ ಕೊಟ್ಟಿಲ್ಲಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಸಿಬಿಐ ಮೇಲೆ ವಾಕರಿಕೆ ಇತ್ತು. ಈಗ ಇದ್ದಕ್ಕಿದ್ದಂತೆ ಸಿಬಿಐ ಮೇಲೆ ವ್ಯಾಮೋಹ ಬಂದಿದೆ. ಬಿಜೆಪಿಯವರು ಸಿಬಿಐಯನ್ನ ದುರ್ಬಳಕೆ ಮಾಡಲು ಹೊರಟಿದ್ದಾರೆ. ನನ್ನ ಸಲಹೆಯ ಮೇರೆಗೆ ಪೋನ್ ಟ್ಯಾಪಿಂಗ್ ಸಿಬಿಐಗೆ ವಹಿಸಿಲ್ಲಾ ಬದಲಿಗೆ ಮಿಸ್ಟರ್ ಅಮೀತ್ ಶಾ ಆದೇಶ ಮೇರೆಗೆ ಸಿಬಿಐಗೆ ಕೊಟ್ಟಿದ್ದಾರೆ ಎಂದರು.
ಪ್ರವಾಹ ಬಂದು 15 ಕಳೆದ್ರೂ ಕೇಂದ್ರದಿಂದ ಒಂದು ನೈಯಾಪೈಸೆ ಬಂದಿಲ್ಲಾ. ಯಡಿಯೂರಪ್ಪ ಪಿಎಮ್ ಭೇಟಿಯಾಗಿ ಬಂದಿದ್ದಾರೆ, ಪಿಎಂ ಹಣ ಕೋಡ್ತಾರೆ ಅಂತಾ ಎಲ್ಲಿ ಆದ್ರೂ ಹೇಳಿದ್ದಾರಾ? ಎಷ್ಟು ನಷ್ಟ ಆಗಿದೆ ಎಂದು ಕೇಂದ್ರಕ್ಕೆ ಮುಖ್ಯಮಂತ್ರಿಗಳು ಇನ್ನೂ ಮಾಹಿತಿ ಕೊಟ್ಟಿಲ್ಲಾ. ನನ್ನ ಮಾಹಿತಿ ಪ್ರಕಾರ 1 ಲಕ್ಷ ಕೋಟಿ ಪ್ರವಾಹಕ್ಕೆ ಹಾನಿಯಾಗಿದೆ. ಇವರಿಗೆ ಏನೂ ರೋಗ ಹಣ ಕೊಡಲಿಕ್ಕೆ ಎಂದು ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರದ ಸಂಪುಟದ ಬಗ್ಗೆ ಮಾತನಾಡಿದ ಮಾಜಿ ಸಿಎಂ, ಮಂತ್ರಿ ಮಂಡಲ ಇಲ್ಲದೇ ಇಷ್ಟು ದಿನ ಸರ್ಕಾರ ಇಲ್ಲದ್ದು ಮೊದಲು ಬಾರಿ. ಯಡಿಯೂರಪ್ಪನವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನ ನೋಡಿದ್ರೆ ಗಢಗಢ ನಡಗುತ್ತಾರೆ. ಯಡಿಯೂರಪ್ಪ ಅಮಿತ್ ಶಾ ಮರ್ಜಿಯಲ್ಲಿದ್ದಾರೆ. ಅವರು ಒಪ್ಪಿಗೆ ಕೊಟ್ಟ ಮೇಲೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.