ಆರ್ಥಿಕ ಪರಿಸ್ಥಿತಿ ವಿಷಯಾಂತರಕ್ಕೆ ಸಿಎಎ: ಉಗ್ರಪ್ಪ ಆರೋಪ
Team Udayavani, Dec 27, 2019, 9:20 PM IST
ಬೆಂಗಳೂರು: ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಮುಚ್ಚಿಡಲು ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ಆರ್ಸಿ ತಂತ್ರ ಅನುಸರಿಸುತ್ತಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ನಾಯಕರು ದೇಶದ ಒಂದು ಲಕ್ಷ ಕೋಟಿ ರಕ್ಷಣಾ ವೆಚ್ಚವನ್ನೂ ಕಡಿತಮಾಡಿದ್ದಾರೆ. ಆರ್ಥಿಕ ದುಃಸ್ಥಿತಿ ಮರೆಮಾಚಲು ಸಿಎಎ, ಎನ್ ಆರ್ ಸಿ ಜಾರಿಗೆ ತಂದಿದ್ದಾರೆ ಎಂದು ಬಿಜೆಪಿ ವಿರುದ್ಧ ಉಗ್ರಪ್ಪ ವಾಗ್ಧಾಳಿ ನಡೆಸಿದರು.
ದೇಶ ಬಿಜೆಪಿ ಮುಕ್ತವಾಗಲಿದೆ ಎಂಬುದನ್ನು ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರೇ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಆಸ್ತಿ ನಷ್ಟ ಕಾನೂನು ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಉಗ್ರಪ್ಪ ಇದನ್ನು ಈಗಾಗಲೇ ಇದನ್ನ ಸುಪ್ರೀಂ,ಹೈಕೋರ್ಟ್ ತಂದಿದೆ. ಇದನ್ನೇ ಬಿಜೆಪಿಗರು ತಾವು ಜಾರಿಗೆ ತಂದಿದ್ದು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಆಸ್ತಿ ನಷ್ಟ ಮಾಡಿದರೆ ಜಾರಿಗೆ ತರಲಿ, ತೊಂದರೆಯಿಲ್ಲ. ಹೊಸದಾಗಿ ತರುತ್ತಿದ್ದೇವೆ ಎಂದು ಹೇಳುವುದರಲ್ಲೇನಿದೆ ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ನಾಯಕರು ಪ್ರಧಾನಿ ಮೋದಿ ಕಿವಿ ಹಿಂಡಬೇಕು.ಅವರ ಕಿವಿ ಹಿಂಡಿದ್ದರೆ ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರಲಿಲ್ಲ.
ಇದಕ್ಕೆ ನೇರ ಹೊಣೆ ಬಿಜೆಪಿ. ಮಂಗಳೂರು ಘಟನೆಗೆ ಬಿಜೆಪಿಯವರೇ ನೇರ ಕಾರಣ. ಗಲಭೆಗೆ ಕುಮ್ಮಕ್ಕು ನೀಡಿ ಘರ್ಷಣೆ ಮಾಡಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲೇ ಈ ಘಟನೆ ನಡೆಯುತ್ತಿವೆ. ಇದನ್ನು ಗಮನಿಸಿದರೆ ಆರ್ಥಿಕ ಹಿನ್ನಡೆ ಮುಚ್ಚಿಕೊಳ್ಳಲು ಈ ಪ್ರಯತ್ನ ಎಂದನಿಸುತ್ತಿದೆ.
ಗಲಾಟೆ, ಗಲಭೆ ಎಬ್ಬಿಸಿ ವಿಷಯಾಂತರ ಮಾಡುತ್ತಿದ್ದಾರೆ. ಜನರನ್ನು ಸಾಯಿಸಿ ಗಮನ ಬೇರೆಡೆ ಸೆಳೆಯುವ ಪ್ರಯತ್ನ ನಡೆದಿದೆ. ಡಿ 20ರಂದು ಗೋಲಿಬಾರ್ ಆದರೆ 22ಕ್ಕೆ ಯಡಿಯೂರಪ್ಪ ಮಂಗಳೂರಿಗೆ ಭೇಟಿ ಕೊಡುತ್ತಾರೆ. ಅಧಿಕಾರಿಗಳ ಜೊತೆ ಚರ್ಚಿಸಿ ಮೃತ ಕುಟುಂಬಕ್ಕೆ ಹತ್ತು ಲಕ್ಷ ರೂ. ಘೋಷಣೆಯಾಗುತ್ತದೆ. ಡಿ 24ರಂದು ಗಲಾಟೆಯ ದೃಶ್ಯಗಳನ್ನು ಬಿಡುಗಡೆ ಮಾಡಿಸಿ ನಂತರ ಪರಿಹಾರವನ್ನು ವಾಪಸ್ ಪಡೆಯುತ್ತಾರೆ ಎಂದರೇನರ್ಥ. ಪಿಎಫ್ ಐ ಮೂಲಕ ಬಿಜೆಪಿಯವರೇ ಗಲಭೆ ಸೃಷ್ಟಿಸಿದ್ದಾರೆಂದು ಉಗ್ರಪ್ಪ ಆರೋಪಿಸಿದರು.