ವಿಜಯಪುರ: ಕಾಂಗ್ರೆಸ್ ಮುಖಂಡೆಯ ಶವ ಬ್ರಿಡ್ಜ್ ಕೆಳಗೆ ಪತ್ತೆ
Team Udayavani, May 17, 2019, 2:16 PM IST
ವಿಜಯಪುರ : ಇಲ್ಲಿ ಕಾಂಗ್ರೆಸ್ ಮುಖಂಡೆಯೊಬ್ಬರು ಕೊಲ್ಹಾರ ಪಟ್ಟಣದ ಕೃಷ್ಣಾ ನದಿಗೆ ಅಡ್ಡಲಾಗಿರುವ ಬ್ರಿಡ್ಜ್ ಕೆಳಗೆ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ರೇಷ್ಮಾ ಪಡೆಕನೂರು ಶವವಾಗಿ ಪತ್ತೆಯಾಗಿದ್ದು, ಅವರನ್ನು ಹತ್ಯೆಗೈದು ಎಸೆಯಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸೊಲ್ಲಾಪುರದ ಎಂಐಎಂ ಮುಖಂಡರೊಬ್ಬರೊಂದಿಗೆ ಗುರುವಾರ ರಾತ್ರಿ ರೇಷ್ಮಾ ತೆರಳಿದ್ದರು ಎಂದು ತಿಳಿದು ಬಂದಿದೆ.
ಬಲಗೈಗೆ ಎರಡು ಮಚ್ಚಿನ ಏಟುಗಳು ಕಂಡು ಬಂದಿದ್ದು , ಮುಖಕ್ಕೆ ಗುದ್ದಿರುವ ಗಾಯಗಳು ಕಂಡು ಬಂದಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಾತುಕತೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ರೇಷ್ಮಾ 2014 ರ ವಿಧಾನಸಭಾ ಚುನಾವಣೆಯಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ನಿಂದ ಕಣಕ್ಕಿಳಿದು ಸೋಲು ಅನುಭವಿಸಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಕೊಲ್ಹಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಮುಂದುವರಿಸಿದ್ದಾರೆ.