ವಿಜಯಪುರ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ
Team Udayavani, Jan 16, 2021, 1:31 PM IST
ವಿಜಯಪುರ: ಕೋವಿಡ್-19 ಸೋಂಕು ರೋಗ ನಿಗ್ರಹಕ್ಕಾಗಿ ಮೊಟ್ಟ ಮೊದಲು ಲಸಿಕೆ ನೀಡುವ ಅಭಿಯಾನ ಶನಿವಾರ ವಿಜಯಪುರ ಜಿಲ್ಲೆಯಲ್ಲೂ ಆರಂಭಗೊಂಡಿದೆ.
ವಿಜಯಪುರ ಜಿಲ್ಲಾಡಳಿತ ಸಕಲ ಸಿದ್ಧತೆಯೊಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭಿಸಿದೆ.ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆ ಸೇರಿಂದತೆ ಇತರೆ ಐದು ಕಡೆಗಳಲ್ಲಿ ಕೋವಿಡ್-19 ಲಸಿಕೆ ನೀಡಲು ಲಸಿಕಾ ಕೇಂದ್ರದಲ್ಲಿ ಆಧಾರ್ ವೆರಿಫಿಕೇಶನ್ ಕೊಠಡಿ, ಲಸಿಕಾ ಕೊಠಡಿ ಹಾಗೂ ಅಬ್ಸರ್ವೇಷನ್ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಸರ್ಕಾರದ ನಿರ್ದೇಶನದಂತೆ ಮೊದಲ ಹಂತದಲ್ಲಿ ನಿಗದಿತ ಅರ್ಹ ಫಲಾನುಭವಿಗಳಿಗೆ (ಆರೋಗ್ಯ ಕಾರ್ಯಕರ್ತರಿಗೆ) ಲಸಿಕೆ ನೀಡಲು ಲಸಿಕಾ ಸಿಬ್ಬಂದಿಗಳ ಸರ್ವ ರೀತಿಯಲ್ಲಿ ಸನದ್ದಗೊಂಡಿದ್ದು , ದೇಶದಲ್ಲಿ ಲಸಿಕಾ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡುತ್ತಲೇ ವಿಜಯಪುರ ಜಿಲ್ಲೆಯಲ್ಲೂ ಕೋವ್ಯಾಕ್ಸಿನ್ ಲಸಿಕಾ ನೀಡಿಕೆ ಕಾರ್ಯ ವ್ಯವಸ್ಥಿತವಾಗಿ ಚಾಲನೆ ಪಡೆಯಯಿತು.
ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಲಸಿಕಾ ಕೇಂದ್ರದ ಎಲ್ಲ ಸಿದ್ಧತೆ ಬಗ್ಗೆ ಖುದ್ದು ಭೇಟಿ ನೀಡಿದ ಜಿ.ಪಂ. ಸಿಇಒ ಲಕ್ಷ್ಮಿಕಾಂತರೆಡ್ಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಉಳ್ಳಾಲ: ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ
ಲಸಿಕಾ ಕೇಂದ್ರದಲ್ಲಿ ಪ್ರಧಾನಮಂತ್ರಿ ಮೋದಿ ಕೋವ್ಯಾಕ್ಸಿನ್ ಲಸಿಕೆ ಬಿಡುಗಡೆಯ ಭಾಷಣದ ನೇರಪ್ರಸಾರದ ವೀಕ್ಷಣೆಗೆ ಪ್ರೋಜೆಕ್ಟರ್ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 57 ವರ್ಷದ ಗ್ರೂಪ್’ ಡಿ’ ನೌಕರ ಲಕ್ಷ್ಮಣ ಕೊಳೂರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕೇಂದ್ರದಲ್ಲಿ ಕೋವಿಡ್-19 ಪ್ರಥಮ ಲಸಿಕೆ ಪಡೆದರು.
ಕೋವಿಡ್ ಲಸಿಕೆ ಪಡೆದ ವ್ಯಕ್ತಿಯನ್ನು ಅಸರೋಗ್ಯ ಅಧಿಕಾರಿಗಳ ನಿಗಾದಲ್ಲಿ ನಿಗಾದಲ್ಲಿ ಇಡಲಾಗಿದೆ.
ಇದಲ್ಲದೇ ಶ್ರೀಶೈಲ ಶಿವಪ್ಪ ಚಟ್ಟರ 59 ವರ್ಷ ಜಿಲ್ಲಾ ಆರೋಗ್ಯ ಮೇಲ್ವಿಚಾರಕ, ಜಿಲ್ಲಾ ಆಸ್ಪತ್ರೆ ಗ್ರೂಪ್ ಡಿ ನೌಕರ, 33 ವರ್ಷದ ಬಾಬಾಜಾನ್ ತಾಜಿಂತರಕ, 38 ವರ್ಷದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಕಂಪ್ಯೂಟರ್ ಆಪರೇಟರ್ ಮೀನಾಕ್ಷಿ ಸಲಗರ್ ಅವರಿಗೂ ಕೋವಿಡ್ ಲಸಿಕೆ ನೀಡಲಾಯಿತು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ನೋಡಲ್ ಅಧಿಕಾರಿ ಡಾ. ಜಯರಾಜ, ಸರಕಾರಿ ಜಿಲ್ಲಾ ಸ್ಪತ್ರೆ ಸರ್ಜನ್ ಡಾ.ಶರಣಪ್ಪ ಕಡ್ಡಿ, ಡಾ. ಲಕ್ಕಣ್ಣವರ, ಡಾ. ಎಂ ಬಿ ಬಿರಾದಾರ, ಸಿ.ಎಚ್. ಅಧಿಕಾರಿ ಮಹೇಶ ಭಟ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.