ಜಲಾವೃತಗೊಂಡ ಸೇತುವೆಯನ್ನು ದಾಟಲು ಹೋಗಿ ಬೈಕ್ ಸಮೇತ ನದಿಗೆ ಬಿದ್ದರೂ ಅದೃಷ್ಟವಶಾತ್ ಪಾರಾದರು
Team Udayavani, Oct 13, 2020, 7:17 PM IST
ವಿಜಯಪುರ : ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಭೀಮಾ ಹಾಗೂ ಡೋಣಿ ನದಿ ಪ್ರವಾಹ ಸೃಷ್ಟಿಸಿವೆ. ಈ ಮಧ್ಯೆ ಪ್ರವಾಹದಿಂದಾಗಿ ಜಲಾವೃತ ಸೇತುವೆ ಮೇಲೆ ಹೊರಟಿದ್ದ ಇಬ್ಬರು ಬೈಕ್ ಸವಾರರು, ಬೈಕ್ ಸಮೇತ ಕೊಚ್ಚಿಕೊಂಡು ಹೋದರೂ ಅಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ.
ದೇವರರಹಿಪ್ಪರಗಿ ತಾಲೂಕಿನ ಸಾತಿಹಾಳ ಬಳಿ ಹರಿಯುವ ಡೋಣಿ ನದಿ ಪ್ರವಾಹದ ಪರಿಣಾಮ ಸೇತುವೆ ಜಲಾವೃತವಾಗಿದೆ. ಈ ಹಂತದಲ್ಲಿ ಸಾಬೂನು ವ್ಯಾಪಾರಕ್ಕಾಗಿ ಹಳ್ಳಿಗಳಿಗೆ ತೆರಳುತ್ತಿದ್ದ ಆಲಮಟ್ಟಿ ಮೂಲದ ಮಲ್ಲಣ್ಣ ಕುಗಡಿ ಹಾಗೂ ಭೀಮಣ್ಣ ಕುಗಡಿ ಎಂಬವರು ಜಲಾವೃತ ಸೇತುವೆ ಮೇಲೆ ಅಪಾಯದ ಲೆಕ್ಕಿಸದೇ ಪ್ರಯಾಣಿಸಲು ಮುಂದಾಗಿದ್ದಾರೆ. ಆದರೆ ಪ್ರವಾಹದ ರಭಸಕ್ಕೆ ಬೈಕ್ ಕೊಚ್ಚಿ ಹೋಗಿದ್ದು, ಅಪಾಯದ ಮುನ್ಸೂಚನೆ ಅರಿತ ಇಬ್ಬರೂ ವ್ಯಪಾರಿಗಳು ಬಚಾವಾಗಿದ್ದಾರೆ.
ಆದರೆ ತಮ್ಮ ವೃತ್ತಿ ಬದುಕಿಗೆ ಆಸರೆಯಾಗಿರುವ ಬೈಕ್ ನದಿ ಪ್ರವಾಹದಲ್ಲಿ ಕೊಚ್ಚಿಹೋಗುವುದನ್ನು ಕಂಡ ಇಬ್ಬರೂ ವ್ಯಾಪಾರಿಗಳು, ಜೀವದ ಹಂಗು ತೊರದು ಭೋರ್ಗರೆಯುವ ನದಿಗೆ ಹಾರಿ ಬೈಕ್ ಮೇಲೆತ್ತಿ ಸೇತುವೆಗೆ ತಂದಿದ್ದಾರೆ. ಈ ಹಂತದಲ್ಲಿ ಮಾರ್ಗದಲ್ಲಿ ಹೊರಟಿದ್ದ ಸರಕು ಸಾಗಾಣಿಕೆ ವಾಹನ ಸವಾರರು ತಮ್ಮಲ್ಲಿದ್ದ ಹಗ್ಗಗಳನ್ನು ನೀಡಿ, ಬೈಕ್ ಮೇಲೆತ್ತಲು ಸಹಾಯ ಮಾಡಿದ್ದಾರೆ.
ಇದನ್ನೂ ಓದಿ:ಬಿಜೆಪಿಗೆ ಜೆಡಿಯು ಬಿಟ್ಟು ಬೇರೆ ಉತ್ತಮ ಆಯ್ಕೆಯೇ ಇಲ್ಲ; ಜೆಡಿಯುಗೂ ಬಿಜೆಪಿಯೇ ಎಲ್ಲ !
ಈ ಮಧ್ಯೆ ಜಿಲ್ಲೆಯ ಗಡಿಯಲ್ಲಿ ಮಹಾರಾಷ್ಟ್ರಕ್ಕೆ ಹೊಂದಿಕೊಂಡು ಹರಿಯುವ ಭೀಮಾ ನದಿಗೆ ಸುಮಾರು 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಸೊನ್ನ ಬ್ಯಾರೇಜ್ನಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಲು ಒಳ ಹರಿವಿನ ಪ್ರಮಾಣದ ನೀರನ್ನೇ ಬ್ಯಾರೇಜ್ ಗೇಟ್ ಮೂಲಕ ನದಿಗೆ ಹರಿ ಬಿಡಲಾಗುತ್ತಿದೆ.