ಪೋರ್ಟ್ ಕ್ರೆಡಿಟ್ ಸರೋವರದ ಮೇಲೊಂದು ಗ್ರಾಮ !
Team Udayavani, Apr 3, 2022, 3:55 PM IST
ಕೆನಡಾದ ಒಂಟಾರಿಯೋ ಪ್ರಾಂತ್ಯದ ಒಂದು ಪುಟ್ಟ, ಸುಂದರ ಬಂದರು ಪ್ರದೇಶ ಪೋರ್ಟ್ ಕ್ರೆಡಿಟ್. ಕೆನಡಾ ಮತ್ತು ಅಮೆರಿಕ ನಡುವಿನ ಸರೋವರ ಒಂಟಾರಿಯೋವನ್ನು ಕ್ರೆಡಿಟ್ ಎಂಬ ನದಿ ಸೇರುವ ಸ್ಥಳ.
ಯುರೋಪಿಯನ್ನರು ಅಮೆರಿಕಕ್ಕೆ ಕಾಲಿಡುವ ಮುನ್ನ ಮಿಸ್ಸಿಸ್ಸಾಗ ಒಜಿಬ್ವೆ ಎಂಬಲ್ಲಿ ರೆಡ್ ಇಂಡಿಯನ್ ಮೂಲ ನಿವಾಸಿಗಳು ಇಲ್ಲಿ ವಾಸವಾಗಿದ್ದರು. ಕ್ರಮೇಣ ಬ್ರಿಟಿಷರ ಆಗಮನದಿಂದ ಮುಖ್ಯ ವ್ಯಾಪಾರ ಕೇಂದ್ರವಾಗಿ ಇದು ಮಾರ್ಪಟ್ಟಿತು. ಮೀನುಗಾರಿಕೆ, ಬೀವರ್ ಪ್ರಾಣಿಯ ಉಣ್ಣೆ ಸಾಗಣಿಕೆ, ಮರಮಟ್ಟು ವಹಿವಾಟಿಗೆ ಈ ಬಂದರು ಬಹುಬೇಗ ಪ್ರಸಿದ್ಧಿ ಪಡೆಯಿತು. 1834ರಲ್ಲಿ ಬ್ರಿಟಿಷರು ಇದರ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸಿದರು. ದೀಪಸ್ತಂಭ ನಿರ್ಮಿಸಿದರು. ಜಲ, ಭೂ ಮಾರ್ಗದೊಂದಿಗೆ ರೈಲು ಮಾರ್ಗವೂ ಈ ಬಂದರನ್ನು ಇತರ ಊರುಗಳೊಂದಿಗೆ ಬೆಸೆಯಿತು. 1847ರಲ್ಲಿ ಇಲ್ಲಿಯ ಮೂಲನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಸರೋವರದ ಕಲ್ಲುಗಳನ್ನು ಬಳಸಿ ಕಟ್ಟಡ ಕಟ್ಟುವ ಕಂಪೆನಿಗಳ ಜತೆ ಇತರ ಕೈಗಾರಿಕೆಗಳೂ ಹುಟ್ಟಿಕೊಂಡವು. 1936ರಲ್ಲಿ ದೀಪಸ್ತಂಭ ಬೆಂಕಿಗೆ ಆಹುತಿಯಾಯಿತು. ಈ ಬಳಿಕ ಇತರ ಚಟುವಟಿಕೆಗಳು ನಿಧಾನವಾಗಿ ಕುಂಟಿತವಾದವು.
ಇಂದು ಕೈಗಾರಿಕೆಗಳೆಲ್ಲ ಮುಚ್ಚಲ್ಪಟ್ಟಿವೆ. ಹೆಚ್ಚಿನ ಸ್ಥಳೀಯರು ಪಟ್ಟಣದೆಡೆ ಮುಖ ಮಾಡಿದ್ದಾರೆ. ‘ವಿಲೇಜ್ ಆನ್ ದಿ ಲೇಕ್’ ಎಂದೇ ಕರೆಯಲ್ಪಡುವ ಪೋರ್ಟ್ ಕ್ರೆಡಿಟ್ ಇಂದು ಜನಪ್ರಿಯ ಪ್ರವಾಸಿ ತಾಣ. ಸ್ವತ್ಛ ಸುಂದರ ಬಂದರು ಮತ್ತು ದೀಪಸ್ತಂಭ ಮುಖ್ಯ ಆಕರ್ಷಣೆ. ದೂರದಿಂದಲೇ ಇದು ಜನರನ್ನು ತನ್ನೆಡೆಗೆ ಸೆಳೆಯುತ್ತದೆ. 1936ರಲ್ಲಿ ಬೆಂಕಿಗೆ ಆಹುತಿಯಾದ ದೀಪಸ್ತಂಭವನ್ನು ಮರು ನಿರ್ಮಿಸಲಾಗಿದ್ದು, ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಈ ಸ್ತಂಭದ ಮೇಲೆ ಹತ್ತಲು ಮೆಟ್ಟಿಲುಗಳಿವೆ. ಚಳಿಗಾಲದಲ್ಲಿ ಸರೋವರದ ನೀರು ಹೆಪ್ಪುಗಟ್ಟುತ್ತದೆ. ಹಾಗಾಗಿ ಜನರು ಹೆಚ್ಚಾಗಿ ಜೂನ್ನಿಂದ ಸೆಪ್ಟಂಬರ್ ವರೆಗೆ ಇಲ್ಲಿಗೆ ಭೇಟಿ ಕೊಡುತ್ತಾರೆ. ವಾಟರ್ಫ್ರಂಟ್ ಟ್ರೈಲ್ ಎನ್ನುವ ಪಥ ಸರೋವರದ ದಂಡೆಯುದ್ದಕ್ಕೂ ಪಸರಿದೆ.
ಜೂನ್ ತಿಂಗಳಲ್ಲಿ ಇಲ್ಲಿ ವಾಟರ್ಫ್ರೆಂಟ್ ಫೆಸ್ಟಿವಲ್ ಅನ್ನು ಆಯೋಜಿಸಲಾಗುತ್ತದೆ. ಇದೊಂದು ರೀತಿಯಲ್ಲಿ ಮನೋರಂಜನಾ ಮೇಳವಿದ್ದಂತೆ. ಮಕ್ಕಳು ಮುದುಕರಾಗಿ ಎಲ್ಲರೂ ಭಾಗವಹಿಸಿ ಖುಷಿ ಪಡುವ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.
ಹಲವು ಕರಕುಶಲ ವಸ್ತುಗಳು ಮಾರಾಟಕ್ಕಿರುತ್ತವೆ. ಸಾಂಪ್ರದಾಯಿಕ ನೃತ್ಯ ಪ್ರದರ್ಶನ – ತಿಂಡಿತಿನಿಸುಗಳು ಕಣ್ಮನ ತಣಿಸುತ್ತವೆ. ಜಗತ್ ಪ್ರಸಿದ್ಧ ಸಂಗೀತಗಾರರ ವಾದ್ಯಗೋಷ್ಠಿ ಮುಗಿಲು ಮುಟ್ಟುತ್ತದೆ. ಪ್ರತಿವರ್ಷ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಉತ್ಸವದಲ್ಲಿ ಸೇರುತ್ತಾರೆ. ಕೇವಲ ಕೆನಡಾದ ಪ್ರಾಂತ್ಯಗಳಲ್ಲದೆ ದೂರದ ಅಮೆರಿಕದಿಂದಲೂ ಈ ಪ್ರದರ್ಶನಕ್ಕೆ ತಪ್ಪದೆ ಬರುವವರಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಬೋಟ್ ಶೋ ನಡೆಯುತ್ತದೆ. ತಮ್ಮತಮ್ಮ ಐಷಾರಾಮಿ ವಿಹಾರಿ ನೌಕೆಗಳನ್ನು ಇಲ್ಲಿ ಜನ ಪ್ರದರ್ಶಿಸುತ್ತಾರೆ. ಅತ್ಯಂತ ಭಿನ್ನವಾದ ಈ ಶೋನಲ್ಲಿ ಅತಿ ಹಳೆಯ ವಿಹಾರಿ ನೌಕೆಗಳೊಡನೆ ನವನವೀನ ನೌಕೆಗಳನ್ನು ವೀಕ್ಷಿಸಲು ದೂರದೂರುಗಳಿಂದ ಜನರು ಬರುತ್ತಾರೆ. ನೌಕೆಗಳ ಬಿಡಿಭಾಗ, ನಿರ್ವಹಣೆ, ಖರೀದಿ-ಮಾರಾಟ ಹೀಗೆ ಎಲ್ಲ ಸ್ತರದ ಸಹಾಯ- ವ್ಯಾಪಾರವೂ ಪ್ರದರ್ಶನದ ಜತೆಗೆ ನಡೆಯುತ್ತಿರುತ್ತದೆ.
ಪೋರ್ಟ್ ಕ್ರೆಡಿಟ್ನ ಮುಖ್ಯ ಆಕರ್ಷಣೆ ಎಂದರೆ ಇಲ್ಲಿನ ಮರೀನಾ ಅಥವಾ ಬಂದರು. ಇಲ್ಲಿನ ದಕ್ಕೆಯಲ್ಲಿ ಬೇಸಗೆಯ 5- 6 ತಿಂಗಳು ಜನರು ತಮ್ಮ ವಿಹಾರಿ ನೌಕೆಗಳನ್ನು ನಿಲ್ಲಿಸುತ್ತಾರೆ. ಮಧ್ಯಾಹ್ನದ ಬಿಸಿ ಏರಿದಾಗ ತಮ್ಮ ನೌಕೆಗಳಲ್ಲಿ ಒಂಟಾರಿಯೋ ಸರೋವರದಲ್ಲಿ ವಿಹರಿಸುತ್ತಾರೆ. ನೆಚ್ಚಿನ ಸಾಕು ಪ್ರಾಣಿ, ಕುಟುಂಬಿಕರು, ಗೆಳೆಯರೊಂದಿಗೆ ತಿಂಡಿತಿನಿಸು ಮೆಲ್ಲುತ್ತ, ಪಾನೀಯ ಹೀರುತ್ತ, ಬೋರ್ಡ್ ಗೇಮ್ಸ್ ಆಡುತ್ತ ಬಿಸಿಲಿನ ಜಳಕ್ಕೆ ಮೈಯೊಡ್ಡಿ ನೌಕೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಸ್ವಂತ ನೌಕೆಗಳಿಲ್ಲದ ಜನರು ನೌಕೆಯನ್ನು ಬಾಡಿಗೆಗೆ ಪಡೆಯುವ ಅವಕಾಶವೂ ಇದೆ.
ಜೂನ್ನಿಂದ ಸೆಪ್ಟಂಬರ್ ವರೆಗೆ ಪ್ರತಿ ನಿತ್ಯವೂ ವಿವಿಧ ಜಲಕ್ರೀಡೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ನೀರಿನ ಬೈಕ್, ಪ್ಯಾರಾಸೇಲಿಂಗ್, ಪ್ಯಾರಾಗ್ಲೆ„ಡಿಂಗ್, ಕಯಾಕಿಂಗ್ ಹೀಗೆ ಎಲ್ಲ ರೀತಿಯ ಸೌಲಭ್ಯಗಳೂ ಇಲ್ಲಿವೆ. ಕ್ರೆಡಿಟ್ ನದಿಯಲ್ಲಿ ಮೀನು ಹಿಡಿಯುವ ಜನರೂ ಕಾಣಸಿಗುತ್ತಾರೆ. ಹಂಸ ಮತ್ತು ಕೆನಡಾದ ಪ್ರಿಯ ಬಾತುಕೋಳಿ – ಕೆನೆಡಿಯನ್ ಗೂಸ್ ನೀರಿನ ಮೇಲೆ ತೇಲುತ್ತ ಮಕ್ಕಳನ್ನು ಖುಷಿಪಡಿಸುತ್ತವೆ. ಅಲ್ಲಲ್ಲಿರುವ ಬೆಂಚಿನ ಮೇಲೆ ಕುಳಿತು ಪುಸ್ತಕ ಓದುವ ವೃದ್ಧರ ಮುಗುಳ್ನಗು ಕಂಡರೆ ಪೋರ್ಟ್ ಕ್ರೆಡಿಟ್ ಎಲ್ಲರಿಗೂ ಪ್ರಿಯ ಎನ್ನುವುದರಲ್ಲಿ ಸಂಶಯವಿಲ್ಲ..
ಪೋರ್ಟ್ ಕ್ರೆಡಿಟ್ ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಜಗತ್ತಿನ ಹೆಚ್ಚಿನೆಲ್ಲ ದೇಶಗಳ ರೆಸ್ಟೋರೆಂಟ್ಗಳು ಇಲ್ಲಿವೆ. ಇಲ್ಲಿನ ಕಾಫಿ ಮತ್ತು ಐಸ್ಕ್ರೀಮ್ಗಳಿಗೆ ಸರಿಸಾಟಿಯಾಗಿ ಬೇರೆ ಎಲ್ಲಿಯೂ ಇರಲಾರದು. ಸ್ಥಳೀಯ ವೈನ್ ಹೀರಲೆಂದೇ ದೂರದಿಂದ ಬರುವ ಜನರಿದ್ದಾರೆ.
ಟೊರಂಟೊ ನಗರದಿಂದ ಕೇವಲ 20 ಕಿ.ಮೀ. ದೂರದಲ್ಲಿದೆ. ಸ್ವಂತ ವಿಹಾರಿ ನೌಕೆಗಳಿದ್ದರೆ ಜಲಮಾರ್ಗವಾಗಿ ಅಥವಾ ಸ್ವಂತ ವಾಹನವಿದ್ದರೆ ರಸ್ತೆ ಸಾರಿಗೆ ಮೂಲಕ ಇಲ್ಲಿಗೆ ತಲುಪಬಹುದು. ಟೊರಂಟೋದಿಂದ ನಯಾಗಾರಾದೆಡೆ ತೆರಳುವ ಎಲ್ಲ ರೈಲುಗಳು ಪೋರ್ಟ್ ಕ್ರೆಡಿಟ್ನಲ್ಲಿ ನಿಲ್ಲುತ್ತವೆ.
-ಸಹನಾ ಹರೇಕೃಷ್ಣ, ಟೊರಂಟೊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ