ನಾವು ಕೆಲಸಾ ಮಾಡೋದು:ಅವರು ಅಧಿಕಾರ ವಹಿಸಿಕೊಳ್ಳೋದು:ಇಬ್ರಾಹಿಂ
Team Udayavani, Dec 17, 2019, 8:09 PM IST
ಬೆಂಗಳೂರು:ಆಡಳಿತ ಪಕ್ಷದ ವಿರುದ್ಧ ಭಾಷಣ ಮಾಡೋದು, ವಿರೋಧ ಮಾಡೋದು ನಾವು! ಅಧಿಕಾರ ಅನುಭವಿಸಲಿಕ್ಕೆ ಖುರ್ಚಿ ಮೇಲೆ ಕೂರಲಿಕ್ಕೆ ಬೇರೆಯವರಾ ? ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನ ಕೈ ತಪ್ಪಿರುವುದಕ್ಕೆ ಪಕ್ಷದ ನಾಯಕರ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ನಲ್ಲಿ ಯಾರು ಹಿರಿಯರು ? ಪರಿಷತ್ತಿನಲ್ಲಿ ಯಾರು ಪ್ರತಿಪಕ್ಷದ ನಾಯಕರಾಗಬೇಕಿತ್ತು. ಷೇರ್ ಹಾಕಿದವರಿಗೆ ಷೇರ್ ಪ್ರಮಾಣ ಪತ್ರ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಅಲ್ಪ ಸಂಖ್ಯಾತ ಸಮುದಾಯದ ಕೈ ಹಿಡಿಯಲಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅಲ್ಪ ಸಂಖ್ಯಾತರ ಪರವಾಗಿ ಮಾತನಾಡಬಹುದಿತ್ತು. ಕಾಂಗ್ರೆಸ್ ನಾಯಕರು ಯಾರೂ ಅಲ್ಪ ಸಂಖ್ಯಾತರ ಬಗ್ಗೆ ಮಾತನಾಡಲಿಲ್ಲ.
ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ನನಗೆ ಸಿಟ್ಟಿಲ್ಲ. ಕಾಂಗ್ರೆಸ್ ಪಕ್ಷದ ಮೇಲೆ ಸಿಟ್ಟಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಶೇಕಡಾ 15 ರಷ್ಟಿದೆ. ಅಲ್ಪ ಸಂಖ್ಯಾತ ಸಮುದಾಯ ಬೇರೆಯವರ ಜೊತೆಗೆ ಗುರುತಿಸಿಕೊಂಡಿದೆ. ಅನೇಕ ಕಡೆಗಳಲ್ಲಿ ಯಡಿಯೂರಪ್ಪ ಅವರಿಗೆ ಅಲ್ಪ ಸಂಖ್ಯಾತ ಸಮುದಾಯ ಬೆಂಬಲ ನೀಡಿದೆ. ಉಪ ಚುನಾವಣೆಯಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರು ಬಿಜೆಪಿಗೆ ಬೆಂಬಲಿಸಿದರು. ಯಡಿಯೂರಪ್ಪ ಇಲ್ಲದೆ ಬಿಜೆಪಿಯೂ ಏನೂ ಇಲ್ಲ.
ಜೆಡಿಎಸ್ಗೆ ಒಕ್ಕಲಿಗರ ಶಕ್ತಿ ಇತ್ತು. ಈ ಚುನಾವಣೆಯಲ್ಲಿ ಅದೂ ಇಲ್ಲದಂತಾಗಿದೆ. ಎರಡು ಪ್ರಬಲ ಸಮುದಾಯಗಳು ಬಿಜೆಪಿ ಪರ ನಿಂತವು. ಸತ್ಯಾಂಶ ಹೇಳಲು ಕಾಂಗ್ರೆಸ್ನಲ್ಲಿ ಯಾರೂ ತಯಾರಿಲ್ಲ ಎಂದು ಹೇಳಿದರು.
ಪಕ್ಷದಲ್ಲಿ ನಾವು ದುಡಿದು ಮತ ಹಾಕಿಸಬೇಕು. ಆದರೆ, ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಮಗೆ ಅವಕಾಶವಿಲ್ಲ. ಈ ಪದ್ಧತಿ ಸರಿಯಿಲ್ಲ. ಈ ಉಪ ಚುನಾವಣೆಯಲ್ಲಿ ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದೆ.
ಮೊದಲು ನನ್ನ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಪಕ್ಷ ಕಟ್ಟಲು ಕಷ್ಟ ಅಂತಲ್ಲ. ಆದರೆ, ಮನಸು ಮಾಡಬೇಕು. ಎಷ್ಟು ದಿನ ಅಂತ ದುಡಿಯೋದು ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.