“ಕೈ” ಅನರ್ಹತೆ ಅಸ್ತ್ರಕ್ಕೆ ಜಂಟಿಪತ್ರಿಕಾಗೋಷ್ಠಿಯಲ್ಲಿ ಅತೃಪ್ತ ಶಾಸಕರ ಸವಾಲು ಏನು ಗೊತ್ತಾ?
Team Udayavani, Jul 9, 2019, 1:19 PM IST
ಮುಂಬೈ: ನಾವು ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಯೇ ವಿನಃ ನಮ್ಮ ಪಕ್ಷಕ್ಕೆ ಅಲ್ಲ. ನಾವೆಲ್ಲರೂ ಕಾಂಗ್ರೆಸ್, ಜೆಡಿಎಸ್ ನಲ್ಲಿಯೇ ಇದ್ದೇವೆ. ಸರ್ಕಾರದ ವಿರುದ್ಧ ಅಸಮಾಧಾನಕ್ಕೆ ನಾವು ರಾಜೀನಾಮೆ ನೀಡಿದ್ದೇವೆ. ಹೀಗಾಗಿ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅತೃಪ್ತ ಶಾಸಕರು ಕಾಂಗ್ರೆಸ್ ಎಚ್ಚರಿಕೆಗೆ ಸಡ್ಡು ಹೊಡೆದಿದೆ.
ಮಂಗಳವಾರ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ, 8 ಮಂದಿ ಅತೃಪ್ತ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ದೂರು ಕೊಡಲು ನಿರ್ಧರಿಸಿತ್ತು.
ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹತ್ತು ಮಂದಿ ಅತೃಪ್ತ ಶಾಸಕರು ಜಂಟಿ ಸುದ್ದಿಗೋಷ್ಠಿ ನಡೆಸಿ, ನಾವು ಬಿಜೆಪಿಗೆ ಹೋಗುವುದಿಲ್ಲ. ಯಾವುದೇ ಮಂತ್ರಿ ಪದವಿಗೆ ಬೇಡಿಕೆ ಇಟ್ಟಿಲ್ಲ. ಕರ್ನಾಟಕದ ಜನರು ಮೈತ್ರಿ ಸರ್ಕಾರವನ್ನು ಇಷ್ಟಪಡುತ್ತಿಲ್ಲ ಎಂದು ಎಸ್ ಟಿ ಸೋಮಶೇಖರ್ ಹೇಳಿದರು.
ನಾವ್ಯಾರು ಪಕ್ಷ ಬಿಟ್ಟಿಲ್ಲ, ನಾವೆಲ್ಲರೂ ಇನ್ನೂ ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿದ್ದೇವೆ. ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಮೇಲೆ ನಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಶಾಸಕ ನಾರಾಯಣ ಗೌಡ ತಿಳಿಸಿದ್ದಾರೆ.