ರಾಷ್ಟ್ರಪತಿ ಯಾರಾಗ್ತಾರೆ?: ಇಂದು ಸಿಗಲಿದೆ ಉತ್ತರ!
ಸಂಸತ್ತಿನಲ್ಲಿ ಇಂದು ಬೆಳಗ್ಗೆಯಿಂದ ಮತಎಣಿಕೆಗೆ ಚಾಲನೆ: ಕುತೂಹಲ ಕೆರಳಿಸಿರುವ ದೇಶದ "ಪ್ರಥಮ ಪ್ರಜೆ' ಚುನಾವಣೆ
Team Udayavani, Jul 21, 2022, 6:55 AM IST
ನವದೆಹಲಿ: ಇದೇ ತಿಂಗಳ 18ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಗುರುವಾರ (ನ. 20) ನಡೆಯಲಿದೆ. ಎನ್ಡಿಎ ಒಕ್ಕೂಟದ ಅಭ್ಯರ್ಥಿ, ಜಾರ್ಖಂಡ್ನ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಒಕ್ಕೂಟದ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ.
30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸಿರುವ ಬ್ಯಾಲೆಟ್ ಬಾಕ್ಸ್ಗಳು ಮಂಗಳವಾರ ಸಂಜೆಯ ಹೊತ್ತಿಗೆ ಸಂಸತ್ತನ್ನು ತಲುಪಿದ್ದು, ಅವುಗಳನ್ನು ಸಂಸತ್ತಿನಲ್ಲಿ ನಿಗದಿಗೊಳಿಸಲಾಗಿರುವ ಸ್ಟ್ರಾಂಗ್ ರೂಮ್ನಲ್ಲಿ ಇರಿಸಲಾಗಿದೆ. ಈ ಪ್ರತಿಯೊಂದು ಬ್ಯಾಲೆಟ್ ಬಾಕ್ಸ್ಗಳಿಗೂ ಮಿಸ್ಟರ್ ಬ್ಯಾಲೆಟ್ ಬಾಕ್ಸ್ ಎಂಬ ಇ-ಟಿಕೆಟ್ ನೀಡಲಾಗಿರುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಗುರುವಾರ ಬೆಳಗ್ಗೆಯಿಂದಲೇ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಅದಕ್ಕಾಗಿ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಂಜೆ ಹೊತ್ತಿಗೆ ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.