ಮಹಾನಗರದ ನೌಕರಿ ತೊರೆದು ಕೃಷಿಯಲ್ಲಿ ಖುಷಿ ಕಂಡ ಕ್ಷಮಾ
Team Udayavani, Mar 8, 2021, 7:54 PM IST
ತೀರ್ಥಹಳ್ಳಿ: ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದ ಮಹಿಳೆಯೊಬ್ಬರು ಕಾರಣಾಂತರಗಳಿಂದ ತಮ್ಮ ಊರಿಗೆ ಬಂದು ಕೃಷಿಯಲ್ಲಿ ತೊಡಗಿ ಸಾಧನೆ ಮಾಡಿದ್ದಾರೆ.
ಪಟ್ಟಣದಿಂದ 4 ಕಿಮೀ ದೂರದ ಕೋಣಂದೂರು- ಸಾಗರ ರಸ್ತೆಯ ಆರಗ ಸಮೀಪದ ಯೋಗಿನರಸೀಪುರ ಗ್ರಾಮದ ರೈತ ಕುಟುಂಬದ ಮಹಿಳೆ ಕ್ಷಮಾ ಈ ಸಾಧನೆ ಮಾಡಿದವರು.ಮೂರ್ನಾಲ್ಕು ವರ್ಷದ ಹಿಂದೆ ಬೆಂಗಳೂರು ಬಿಟ್ಟು ತಮ್ಮ ಹಳ್ಳಿಗೆ ಬಂದಾಗ ಅವರಿಗೆ ಕೃಷಿಯಲ್ಲಿ ಅನುಭವವಿರಲಿಲ್ಲ. ಗೂಗಲ್ ಸರ್ಚ್ನಿಂದ ಪಡೆದ ಅನುಭವದಿಂದ ಕೃಷಿಯಲ್ಲಿ ತೊಡಗಿಕೊಂಡರು. ತಮ್ಮ ಐದಾರು ಎಕರೆ ಪ್ರದೇಶದಲ್ಲಿ ಮಿಶ್ರ ಕೃಷಿಯಲ್ಲಿ ತೊಡಗಿದ್ದು ಅವರ ಕೈಹಿಡಿಯಿತು.
ತಮ್ಮ ಅರ್ಧ ಎಕರೆ ಪ್ರದೇಶದಲ್ಲಿ ಎರಡು ಪಾಲಿ ಹೌಸ್ ನಿರ್ಮಾಣ ಮಾಡಿ ಅದರಲ್ಲಿ ತರಕಾರಿ- ಹೂವು ಬೆಳೆಯುತ್ತಿದ್ದಾರೆ. ಗೆಡ್ಡೆಕೋಸು, ಹೀರೆಕಾಯಿ, ಮೂಲಂಗಿ, ನವಿಲು ಕೋಸು, ಟೊಮ್ಯಾಟೋ, ಪಾಲಕ್, ಕೊತ್ತಂಬರಿ ಸೊಪ್ಪು ಸೇರಿದಂತೆ ಅನೇಕ ಜಾತಿಯ ತರಕಾರಿಗಳನ್ನು ಬೆಳೆದು ಸ್ಥಳೀಯ ಮಾರುಕಟ್ಟೆಗೆ ಮತ್ತು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ.
ಮಾರುಕಟ್ಟೆಯಲ್ಲಿ ಬೇಡಿಕೆ ಅವ ಧಿಯನ್ನು ಗಮನಿಸಿ ಹೆಚ್ಚಿನ ಪ್ರಮಾಣದಲ್ಲಿ ಗುಲಾಬಿ, ಸೇವಂತಿಗೆ ಹೂವು ಬೆಳೆದು ಸ್ಥಳೀಯ ಮಾರುಕಟ್ಟೆಗೆ ಪೂರೈಸಿದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ರೈತರಿಗೆ ತಾವು ಬೆಳೆದ ತರಕಾರಿ ಮತ್ತು ಹೂವುಗಳನ್ನು ನೇರವಾಗಿ ಮಾರಾಟ ಮಾಡಿ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಪಡೆದಿದ್ದಾರೆ.ಕೃಷಿಯ ಜೊತೆಗೆ ತಮ್ಮ ಜಮೀನಿನಲ್ಲಿ ಕುರಿಗಳನ್ನು ಸಾಕಿ ಸಾರ್ಥಕ ಬದುಕನ್ನು ಸಾಗಿಸುತ್ತಿದ್ದಾರೆ. ಒಟ್ಟಿನಲ್ಲಿ ಮಿಶ್ರ ಕೃಷಿಯಲ್ಲಿ ತೊಡಗಿರುವ ಕ್ಷಮಾ ಅವರ ಸಾಧನೆ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.