ದಿಲ್ಲಿಗೆ ತೆರಳಿದ ಯಡಿಯೂರಪ್ಪ :ಇಂದು ಮೋದಿ,ಶಾ ಭೇಟಿ
Team Udayavani, Aug 16, 2019, 6:00 AM IST
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ರಾತ್ರಿ ದಿಲ್ಲಿಗೆ ತೆರಳಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಜತೆ ಚರ್ಚಿಸಿ, ಸಂಪುಟ ರಚನೆ ಬಗ್ಗೆ ಅಂತಿಮ ನಿರ್ಧಾರ ತಳೆಯುವ ಸಾಧ್ಯತೆ ಇದೆ.
ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ದಿಲ್ಲಿ ಪ್ರವಾಸ ಕೈಗೊಂಡಿರುವ ಯಡಿಯೂರಪ್ಪ, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯಲ್ಲಿ ಸಂಪುಟ ರಚನೆ ಜತೆಗೆ ನೆರೆ ಪರಿಹಾರ ಕುರಿತೂ ದೀರ್ಘ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ 15 ಸಚಿವರನ್ನು ಆಯ್ಕೆ ಮಾಡುವ ಸಾಧ್ಯತೆಯಿದ್ದು, ಆಡಳಿತ ಯಂತ್ರ ಸುಗಮವಾಗಿ ನಡೆಯಲು ಅಗತ್ಯವಿರುವ ಖಾತೆ ಹಂಚಿಕೆಯಾಗಲಿದೆ. ಸಂಭಾವ್ಯ ಸಚಿವರ ಪಟ್ಟಿಗೆ ವರಿಷ್ಠರ ಅನುಮತಿ ದೊರೆತರೆ ರವಿವಾರ ಇಲ್ಲವೇ ಸೋಮವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ.
ಪರಿಹಾರಕ್ಕೆ ಮನವಿ
ಇದೇ ಸಂದರ್ಭ ಹಲವು ಸಚಿವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ, ಪ್ರವಾಹಪೀಡಿತ ಜನರ ಪುನರು ಜ್ಜೀವನಕ್ಕೆ ಸಂಬಂಧಿಸಿ ಅಗತ್ಯ ಪರಿಹಾರ, ಅನುದಾನ ಪಡೆ ಯುವ ನಿಟ್ಟಿನಲ್ಲಿ ಮನವಿ ಮಾಡಲಿದ್ದಾರೆ. ಅಪರಾಹ್ನ 3.30ಕ್ಕೆ ರೈಲ್ವೇ ಸಚಿವರು, ಸಂಜೆ 4.45ಕ್ಕೆ ನಾಗರಿಕ ವಿಮಾನ ಯಾನ ರಾಜ್ಯ ಸಚಿವರನ್ನು ಭೇಟಿ ಯಾಗಿ ಚರ್ಚಿಸಲಿದ್ದು, ರಾತ್ರಿ ದಿಲ್ಲಿಯಲ್ಲೇ ವಾಸ್ತವ್ಯ ಹೂಡ ಲಿದ್ದಾರೆ. ಶನಿವಾರ ಇನ್ನೂ ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಿದ್ದಾರೆ.