ಸಿದ್ದರಾಮಯ್ಯ CM ಆಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ; ನೊಟೀಸ್ ಕೊಟ್ರೆ ಉತ್ತರಿಸುತ್ತೇನೆ !
Team Udayavani, Oct 29, 2020, 7:04 PM IST
ಬೆಂಗಳೂರು: “ಸಿದ್ದರಾಮಯ್ಯ ಸಿಎಂ ಆಗಬೇಕು’ ಎನ್ನುವುದು ಪಕ್ಷ ವಿರೋಧಿ ಚಟುವಟಿಕೆ ಆಗುವುದಿಲ್ಲ. ಹಾಗೊಂದು ವೇಳೆ, ನನಗೆ ಶಿಸ್ತುಕ್ರಮದ ನೋಟಿಸ್ ಕೊಟ್ಟರೆ ಅದಕ್ಕೆ ಉತ್ತರಿಸುತ್ತೇನೆ’ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ತಿಳಿಸಿದರು.
ಆರ್.ಆರ್. ನಗರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ. ಜನರ ಅಭಿಪ್ರಾಯವೂ ಇದೇ ಆಗಿದ್ದು, ಆ ಅಭಿಪ್ರಾಯವನ್ನು ನಾನು ಹೇಳಿದ್ದೇನೆ ಅಷ್ಟೇ. ಆದರೆ, ಇದನ್ನು ಕಾಂಗ್ರೆಸ್ನಲ್ಲಿ ಹೈಕಮಾಂಡ್ ನಿರ್ಧರಿಸಲಿದೆ’ ಎಂದರು.
ಉಪಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಬಹುದು. ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರಬಹುದು. ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ, ಚುನಾವಣೆ ಬರುವ ಸಾಧ್ಯತೆ ಕಂಡುಬರುತ್ತಿದೆ’ ಎಂದು ಹೇಳಿದರು.
ಇದನ್ನೂ ಓದಿ :ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್
ಈ ಮಧ್ಯೆ, “ಮುಂದಿನ ಮುಖ್ಯಮಂತ್ರಿ ಬಗ್ಗೆ ಜಮೀರ್ ಅಹಮ್ಮದ್ ಅವರ ಹೇಳಿಕೆ ಬಗ್ಗೆ ಡಿ.ಕೆ.ಶಿವಕುಮಾರ್ ಅವರನ್ನು ಕೇಳಿದಾಗ, ಆ ಬಗ್ಗೆ ಅವರನ್ನೇ (ಜಮೀರ್ ಅವರನ್ನು)ಕೇಳಿ ಎಂದು ತಿಳಿಸಿದರು.