ರೇಣುಕಾಚಾರ್ಯ ಮನೋರೋಗಿ: ಜಮೀರ್ ಅಹಮದ್
Team Udayavani, Jan 21, 2020, 10:46 PM IST
ಬೆಂಗಳೂರು: ಮುಸ್ಲಿಮರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಬದಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಮುಸ್ಲಿಂ ಮುಖಂಡ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ಒಬ್ಬ ಮನೋರೋಗಿ ಎಂದು ಟೀಕಿಸಿದ್ದಾರೆ. ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುವ ರೇಣುಕಾಚಾರ್ಯನನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿರುವ ಉದ್ದೇಶವಾದರು ಏನು? ಎಂದು ಪ್ರಶ್ನಿಸಿರುವ ಜಮೀರ್, ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ರೇಣುಕಾಚಾರ್ಯರ ಬುದ್ಧಿ ಸ್ಥಿಮಿತ ಕಳೆದುಕೊಂಡಿರುವುದಕ್ಕೆ ಮರುಕವಿದೆ ಎಂದು ಜಮೀರ್ ಲೇವಡಿ ಮಾಡಿದ್ದಾರೆ.