1 ರಿಂದ 9ನೇ ತರಗತಿ ಪರೀಕ್ಷೆ ನಡೆಸುವ ಕುರಿತು ಗುರುವಾರ ನಿರ್ಧಾರ : ಸುರೇಶ್ ಕುಮಾರ್
ಉ.ಕ.-ಕ.ಕ. ಭಾಗದ ಜಿಲ್ಲೆಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ
Team Udayavani, Apr 7, 2021, 8:17 PM IST
ವಿಜಯಪುರ : ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿ ಪರೀಕ್ಷೆ ನಡೆಸಬೇಕೆ, ಬೇಡವೇ ಎಂದು ಗುರುವಾರ ಸರ್ಕಾರ ನಿರ್ಧರಿಸಲಿದೆ. ಈಗಾಗಲೇ ಘೋಷಿಸಿದಂತೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಿಗದಿಯಂತೆ ಮೇ 24 ರಿಂದ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳು ಹಾಗೂ ಜೂನ್ 21 ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳ ಆರಂಭಗೊಳ್ಳಲಿವೆ. ಹೀಗಾಗಿ ಈ ಪರೀಕ್ಷೆಗಳನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುವ ಕುರಿತು ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ತಾಲೂಕ ಮಟ್ಟದ ವಿವಿಧ ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದರು.
ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆಗೆ ಪ್ರತಿಷ್ಠೆಯಲ್ಲ, ಕರ್ತವ್ಯ. ಮಕ್ಕಳಿಗೆ ಅದು ರಣರಂಗವಲ್ಲ, ಸಹಜವಾಗಿ ಬರೆಯಬೇಕು. ಮಕ್ಕಳಲ್ಲಿ ಪರೀಕ್ಷೆ ಬರೆಯುವ ಕುರಿತು ಆತ್ಮಸ್ಥೈರ್ಯ ಬರಬೇಕು. ಪರೀಕ್ಷಾ ಕೇಂದ್ರಗಳು ಮಕ್ಕಳ ಪಾಲಿಗೆ ಆತಂಕದ ನೆಲೆಗಳಾಗದೇ ಆತ್ಮವಿಶ್ವಾಸ ಮೂಡಿಸುವ, ಆತ್ಮಸ್ರ್ಥೈ ತುಂಬುವ ತಾಣಗಳಾಗಬೇಕು ಎಂದರು.
ಇದನ್ನೂ ಓದಿ :ವಿಜಯೇಂದ್ರನ ಸೂಟು ಬೂಟು ಬಿಚ್ಚಿಸಿ ‘ಇಡಿ’ಯವರಿಂದ ತನಿಖೆ: ಯತ್ನಾಳ್
ಪರೀಕ್ಷೆ ನಡೆಸುವ ಕುರಿತು ಪಾಲಕರು, ಶಿಕ್ಷಣ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಆರ್.ಟಿ.ಇ. ಕಾಯ್ದೆ ಹಾಗೂ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದೀಗ ಪರೀಕ್ಷೆ ನಡೆಸುವ ಕುರಿತು ರಾಜ್ಯದ ವಿವಿಧ ವಿಭಾಗಗಳ ಶೈಕ್ಷಣಿಕ ಜಿಲ್ಲೆಗಳ ಅಧಿಕಾರಿಗಳ ಸಭೆ ಕರೆದು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಏಪ್ರೀಲ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸರ್ಕಾರ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದರು.
ಉತ್ತರ ಕರ್ನಾಟಕ ಭಾಗದ 9 ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಎಸ್ಎಸ್ಎಲ್ಸಿ-ಪಿಯುಸಿ ಶೈಕ್ಷಣಿಕ, ಪರೀಕ್ಷಾ ಫಲಿತಾಂಶದ ಪ್ರಗತಿ ಕ್ಷೀಣವಾಗಿದೆ. ಹಲವು ದಶಕಗಳಿಂದ ಈ ಸ್ಥಿತಿ ಇದ್ದು, ಈ ಮಾನಸಿಕ ಸ್ಥಿತಿಯನ್ನು ಬದಲಿಸಿ, ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ ನಡೆಯುತ್ತಿವೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಇದು ವ್ಯವಸ್ಥಿತ ರೀತಿಯಲ್ಲಿ ನಡೆಸಲು ಸಾಧ್ಯವಾಗಿಲ್ಲ. ಇದಲ್ಲದೇ ಕೋವಿಡ್ ಹಿನ್ನೆಲೆಯಲ್ಲಿ ಶೇ.30 ರಷ್ಟು ಪಠ್ಯ ಕಡಿಮೆ ಮಾಡಿದೆ. ಪರೀಕ್ಷೆ ಎದುರಿಸುವ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಲು ಅಧಿಕಾರಿಗಳಿಂದ ಸಲಹೆ ಪಡೆಯಲಾಗಿದೆ.
ಹೆಚ್ಚಿದ ವರದಿ ಬಂದಿದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಶಿಕ್ಷಣ ಇಲಾಖೆ ಜೊತೆಗೆ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಜಂಟಿಯಾಗಿ ಶಾಲೆ ತೊರೆದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಶಿಕ್ಷಕರ ಕ್ಷೇತ್ರದ ಮೇಲ್ಮನೆ ಶಾಸಕ ಅರುಣ ಶಹಪುರ, ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಅಧಿಕಾರಿ ಮಮತಾ ನಾಯಕ ಉಪಸ್ಥಿತರಿದ್ದರು.