ಚರ್ಮ ಗಂಟು ರೋಗದಿಂದ ಹಸು ಅಸುನೀಗಿದರೆ 20 ಸಾವಿರ ರೂ.ಪರಿಹಾರ: ಸಿಎಂ
ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸಲಾಗುವುದಿಲ್ಲ
Team Udayavani, Sep 29, 2022, 9:57 PM IST
ಹಾವೇರಿ: ರಾಜ್ಯದಲ್ಲಿ ಚರ್ಮ ಗಂಟು ರೋಗಬಾಧೆಯಿಂದ ಅಸುನೀಗಿದ ಜಾನುವಾರುಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಕೆಎಂಎಫ್ ಹಾಗೂ ಹಾವೇರಿ ಜಿಲ್ಲಾ ಸಹಕಾರಿ ಒಕ್ಕೂಟದ ವತಿಯಿಂದ ಆಯೋಜಿಸಿರುವ ಮೆಗಾ ಡೈರಿ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಿ ಮಾತನಾಡಿದ ಅವರು. ಹಸುಗಳಿಗೆ ತಲಾ 20 ಸಾವಿರ ರೂ. ಹಾಗೂ ಎತ್ತುಗಳಿಗೆ 30 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು. ಚರ್ಮ ಗಂಟು ರೋಗ ಬಾಧೆಗೆ ತುತ್ತಾದ ಜಾನುವಾರುಗಳಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಲಿದೆ ಎಂದೂ ಹೇಳಿದ್ದಾರೆ.
ಹಾಲು ಉತ್ಪಾದನೆ ಹೆಚ್ಚಾಗಲು ಹಣದ ಹರಿವು ಬೇಕು, ಈ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಕ್ಷೀರಸಮೃದ್ಧಿ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಪ್ರವೀಣ್ ನೆಟ್ಟಾರ್ ಪತ್ನಿಗೆ ಸಚಿವಾಲಯದಲ್ಲಿ ಉದ್ಯೋಗ ನೀಡಿದ ಸರಕಾರ
ಖಾತೆಗೇ ಜಮೆ
ಕೊಳವೆ ಬಾವಿ ನಿರ್ಮಾಣ ಸೇರಿದಂತೆ ರಾಜ್ಯ ಸರ್ಕಾರದ ನೆರವಿನ ಯೋಜನೆಗಳ ಅನುದಾನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿಗೆ ಪೂರ್ಣ ಕಡಿವಾಣ ಹಾಕಲಾಗುವುದು ಎಂದರು. ರೈತರಿಗೆ ಯಶಸ್ವಿನಿ ಯೋಜನೆಯನ್ನು ಪುನಾರಂಭಿಸಲಾಗುವುದು. ಈ ಉದ್ದೇಶಕ್ಕೆ 300 ಕೋಟಿ ರೂ. ಒದಗಿಸಲಾಗಿದೆ. ಈ ಬಾರಿ 28 ಲಕ್ಷ ರೈತರಿಗೆ ಸಹಕಾರಿ ಸಾಲ ನೀಡಲಾಗಿದೆ ಎಂದರು. ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ಗುರುವಾರ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಮೆಗಾ ಡೇರಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನೂ ಅವರು ನೆರವೇರಿಸಿದ್ದಾರೆ.
ಖಾಸಗೀಕರಣ ಇಲ್ಲ
ರಾಜ್ಯದಲ್ಲಿ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸಲಾಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಸತತ ಏಳು ಗಂಟೆಗಳ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗುವುದು ಎಂದರು.