ಧೋನಿ ಸಿಕ್ಸರ್ನಿಂದಲೇ ಭಾರತ ಚಾಂಪಿಯನ್ ಆದದ್ದಲ್ಲ : ಗೌತಮ್ ಗಂಭೀರ್ ಗಂಭೀರ ಮಾತು
ಯುವಿಯೇ ವಿಶ್ವಕಪ್ ಗೆಲುವಿನ ನಿಜವಾದ ಹೀರೋ
Team Udayavani, Apr 3, 2021, 7:20 AM IST
ಹೊಸದಿಲ್ಲಿ: ಭಾರತ ಏಕದಿನ ವಿಶ್ವಕಪ್ ಗೆದ್ದ ಐತಿಹಾಸಿಕ ಸಾಧನೆಗೆ ಶುಕ್ರವಾರ 10 ವರ್ಷ ತುಂಬಿದ ಸಂಭ್ರಮ. ಈ ಸಂದರ್ಭದಲ್ಲಿ ಅಂದಿನ ವಿಜೇತ ತಂಡದಲ್ಲಿದ್ದ ಹಾಲಿ ಮತ್ತು ಮಾಜಿ ಆಟಗಾರರು ಈ ಖುಷಿಯನ್ನು ಮೆಲುಕು ಹಾಕಿದ್ದಾರೆ. ಆದರೆ ಗೌತಮ್ ಗಂಭೀರ್ ಮಾತ್ರ ಕೆಲವು “ಸ್ಟ್ರೇಟ್ ಡ್ರೈವ್’ ಮೂಲಕ ಚಾಟಿ ಬೀಸಿದ್ದಾರೆ. ಅಂದಿನ ನಾಯಕ ಧೋನಿ ವಿರುದ್ಧ ತುಸು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಭಾರತದ ವಿಶ್ವಕಪ್ ಗೆಲುವಿನಲ್ಲಿ ಅನೇಕ ಸಾಧಕರಿದ್ದಾರೆ. ಇವರೆಲ್ಲರ ಪರಿಶ್ರಮವನ್ನು ಸ್ಮರಿಸಲೇಬೇಕು. ಇವರಲ್ಲಿ ಯುವರಾಜ್ ಸಿಂಗ್ ಅಗ್ರಪಂಕ್ತಿಯಲ್ಲಿದ್ದಾರೆ.
ಹಾಗೆಯೇ ಜಹೀರ್ ಖಾನ್ ಕೂಡ. ಆದರೆ ಕೊನೆಯಲ್ಲಿ ಧೋನಿ ಬಾರಿಸಿದ ಸಿಕ್ಸರ್ ಒಂದನ್ನೇ ಹೈಲೈಟ್ ಮಾಡಿ, ಇದರಿಂದಲೇ ಭಾರತ ಗೆದ್ದಿತು ಎಂದು ಬಿಂಬಿಸಲಾಯಿತು, ಇದು ಸರಿಯಲ್ಲ ಎಂಬುದಾಗಿ ಗಂಭೀರ್ ನೇರ ಆರೋಪ ಮಾಡಿದರು.
ಯುವರಾಜ್ ಸಾಧನೆ ಮೂಲೆಗುಂಪು
ಫೈನಲ್ ಹಣಾಹಣಿಯಲ್ಲಿ ಎಂ.ಎಸ್. ಧೋನಿ ಸಿಡಿಸಿದ ಒಂದೇ ಒಂದು ಸಿಕ್ಸರ್ ಅನೇಕ ಎಡಗೈ ಆಟಗಾರರ ಕಠಿನ ಪ್ರಯತ್ನ ಹಾಗೂ ಸಾಹಸವನ್ನು ಮರೆಸಿದೆ ಎಂದು ಗೌತಮ್ ಗಂಭೀರ್ ವಿಷಾದ ವ್ಯಕ್ತಪಡಿಸಿ ದರು. ಇದರಲ್ಲಿ ಅವರು ಯುವರಾಜ್ ಸಿಂಗ್ ಜತೆಗೆ ತನ್ನನ್ನೂ ನೇರವಾಗಿ ಸೇರಿಸಿಕೊಂಡರು.
2011ರ ಎ. ಎರಡರಂದು ಮುಂಬಯಿಯ “ವಾಂಖೇಡೆ ಕ್ರೀಡಾಂಗಣ’ದಲ್ಲಿ ಶ್ರೀಲಂಕಾ ತಂಡದ ಕುಲಶೇಖರ ಅವರ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸುವುದರೊಂದಿಗೆ ಭಾರತ ಎರಡನೇ ಸಲ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಈ ಒಂದು ಸಿಕ್ಸರ್ ಹೆಚ್ಚು ಖ್ಯಾತಿ ಗಳಿಸಿತು. ಆದರೆ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ತೋರಿ “ಸರಣಿಶ್ರೇಷ್ಠ’ರಾಗಿ ಮೂಡಿಬಂದ ಯುವರಾಜ್ ಸಿಂಗ್ ಪ್ರದರ್ಶನವನ್ನು ಸರಿಯಾಗಿ ಗುರುತಿಸಲಿಲ್ಲ’ ಎಂದು ಗಂಭೀರ್ ಹೇಳಿದು.
“ಎಲ್ಲರೂ ಧೋನಿ ಅವರ ಆ ಒಂದು ಸಿಕ್ಸರೇ ದೊಡ್ಡದೆಂಬಂತೆ ಬಿಂಬಿಸಿದ್ದಾರೆ. ಯುವ ರಾಜ್ ಸಿಕ್ಸರ್ ಸಾಧನೆಯೇನೂ ಕಡಿಮೆಯಲ್ಲ. ಅವರು ವಿಶ್ವಕಪ್ನಲ್ಲೇ ಓವರಿಗೆ 6 ಸಿಕ್ಸರ್ ಬಾರಿಸಿದ ಸಾಹಸಿ. ಧೋನಿ ಸಿಕ್ಸರ್ಗೆ ಇದನ್ನು ಹೋಲಿಸುವುದಾದರೆ ಯುವರಾಜ್ ಸಾಧನೆ ಭಾರತದ 6 ವಿಶ್ವಕಪ್ ಗೆಲುವಿಗೆ ಸಮ’ ಎಂದು ಗಂಭೀರ್ ವ್ಯಂಗ್ಯವಾಗಿ ಹೇಳಿದರು. 2011ರ ಏಕದಿನ ವಿಶ್ವಕಪ್ನಲ್ಲಿ 90.5ರ ಸರಾ ಸರಿಯಲ್ಲಿ 362 ರನ್ ಸಿಡಿಸಿದ್ದ ಯುವಿ, 25.13ರ ಸರಾಸರಿಯಲ್ಲಿ 15 ವಿಕೆಟ್ ಕಬಳಿಸಿ ಮಿಂಚಿದ್ದರು.
ಅದೇ ರೀತಿ ಫೈನಲ್ ಪಂದ್ಯದಲ್ಲಿ ಜಹೀರ್ ಖಾನ್ ಅವರ ಅಮೋಘ ಮೊದಲ ಸ್ಪೆಲ್ ಬೌಲಿಂಗನ್ನೂ ಗೌತಮ್ ಗಂಭೀರ್ ಪ್ರಶಂಸಿಸಿದರು. ಇದರಲ್ಲಿ ಜಹೀರ್ 3 ಓವರ್ ಮೇಡನ್ ಮಾಡಿದ್ದರು. ಜಹೀರ್ ಕೂಡ ಎಡಗೈ ಬೌಲರ್ ಎಂಬುದನ್ನು ಮರೆಯುವಂತಿಲ್ಲ.
ಫೈನಲ್ಗೂ ಮೊದಲೇ ಸರಣಿಶ್ರೇಷ್ಠ
“2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿಗೆ ಮುಖ್ಯ ಕಾರಣ ಯುವರಾಜ್ ಸಿಂಗ್. ಅವರು ಕೂಟದುದ್ದಕ್ಕೂ ಆಲ್ರೌಂಡ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಜತೆಗೆ ಫೈನಲ್ಗೂ ಮುನ್ನವೇ ಸರಣಿಶ್ರೇಷ್ಠ ಪ್ರಶಸ್ತಿ ಕೂಡ ಯುವರಾಜ್ಗೆ ನಿಗದಿಯಾಗಿತ್ತು. ಆದರೂ ಯುವಿ ಸಾಧನೆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕೂಟದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸದ ಧೋನಿ ಅವರ ಫೈನಲ್ ಸಿಕ್ಸರ್ ಮುಂದೆ ಯುವರಾಜ್ ಸಾಧನೆ ಮೂಲೆಗುಂಪಾದದ್ದು ವಿಪರ್ಯಾಸವೇ ಸರಿ’ ಎಂದು ಗಂಭಿರ್ ಬೇಸರ ವ್ಯಕ್ತಪಡಿಸಿದರು.
ಆಗ ಯುವರಾಜ್ ಅವರ ಆರೋಗ್ಯ ಸ್ಥಿತಿ ಕೂಡ ಹದಗೆಟ್ಟಿತ್ತು. ಅವರನ್ನು ಕ್ಯಾನ್ಸರ್ ಕಾಡಲಾರಂಭಿಸಿತ್ತು. ಪಂದ್ಯವೊಂದರ ವೇಳೆ ಯುವಿ ಮೈದಾನದಲ್ಲೇ ರಕ್ತವನ್ನೂ ಕಾರಿದ್ದರು. ಆದರೆ ಕ್ಯಾನ್ಸರ್ಗೆ ಕ್ಯಾರೇ ಎನ್ನದೇ ದೇಶಕ್ಕಾಗಿ ಆಡಿದ ಧೀಮಂತ ಆಟಗಾರ ಈ ಯುವರಾಜ್ ಎಂಬುದನ್ನು ಮರೆಯುವಂತಿಲ್ಲ ಎಂದರು ಗಂಭೀರ್.
ಮತ್ತೋರ್ವ ಹೀರೋ ಗೌತಮ್ ಗಂಭೀರ್ !
ಫೈನಲ್ ಪಂದ್ಯದ ಮತ್ತೋರ್ವ ಎಡಗೈ ಹೀರೋ ಬೇರೆ ಯಾರೂ ಅಲ್ಲ, ಸ್ವತಃ ಗೌತಮ್ ಗಂಭೀರ್! ಚೇಸಿಂಗ್ ವೇಳೆ ಸೆಹವಾಗ್ (0) ಮತ್ತು ತೆಂಡುಲ್ಕರ್ (18) ವಿಕೆಟ್ ಬೇಗನೇ ಉರುಳಿದಾಗ ಭಾರತದ ರಕ್ಷಣೆಗೆ ನಿಂತವರೇ ಗಂಭೀರ್. ಅವರ 97 ರನ್ನುಗಳ (122 ಎಸೆತ, 9 ಬೌಂಡರಿ) ಅಮೋಘ ಕೊಡುಗೆ ಲಭಿಸದೇ ಹೋದಲ್ಲಿ ಭಾರತ ಖಂಡಿತವಾಗಿಯೂ ಇಕ್ಕಟ್ಟಿಗೆ ಸಿಲುಕುತ್ತಿತ್ತು. ಮೊದಲ ಓವರಿನಲ್ಲೇ ಬ್ಯಾಟ್ ಹಿಡಿದು ಬಂದ ಗಂಭೀರ್, 42ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡದ್ದು ಸಾಮಾನ್ಯ ಸಾಧನೆಯೇನಲ್ಲ. ಅವರ ಈ ಸಾಧನೆಗೂ ಸೂಕ್ತ ಮಾನ್ಯತೆ ಲಭಿಸಲಿಲ್ಲ ಎಂಬುದು ಕೂಡ ದುರಂತವೇ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…