ಆತ್ಮಹತ್ಯೆಗೆ ನಿರ್ಧರಿಸಿದ್ದ ಆರೋಪಿ ಆ್ಯಸಿಡ್ ದಾಳಿಕೋರ
7 ವರ್ಷಗಳಿಂದ ಪ್ರೀತಿಸುತ್ತಿದ್ದೇನೆ, ವಿವಾಹಕ್ಕೆ ಯುವತಿಯ ಒಪ್ಪಿಸಿ ಎಂದ ಆ್ಯಸಿಡ್ ನಾಗೇಶ!
Team Udayavani, May 15, 2022, 10:04 AM IST
ಬೆಂಗಳೂರು: ಏಪ್ರಿಲ್ 28 ರಂದು ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ನಾಗೇಶ್ 16 ದಿನಗಳ ನಂತರ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ. ನಾಗೇಶ್ನನ್ನು ವಿಚಾರಣೆಗೊಳಪಸಿರುವ ವೇಳೆ ಒಂದೊಂದೆ ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾನೆ.
ಈ ಹಿಂದೆ ಆರೋಪಿಯು ಗೃಹ ಕೆಲಸಗಳ ನಿರ್ವಹಣೆ ಮಾಡುತ್ತಿದ್ದ ಏಜೆನ್ಸಿಯೊಂದರಲ್ಲಿ ನಾಗೇಶ್ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಆದರೆ, ಆ ಸಂಸ್ಥೆಯ ಲೆಟರ್ಹೆಡ್ನ್ನು ದುರ್ಬಳಕೆ ಮಾಡಿಕೊಂಡು ಪೀಣ್ಯದಲ್ಲಿರುವ ಲ್ಯಾಬೊರೇಟರಿಯಿಂದ 10 ಲೀಟರ್ ಆ್ಯಸಿಡ್ ಖರೀದಿಸಿದ್ದ ಎಂದು ತಿಳಿದು ಬಂದಿದೆ.
ವಿವಾಹಕ್ಕೆ ಯುವತಿಯ ಒಪ್ಪಿಸಿ ಎಂದ ಪಾಗಲ್!
ಗುಂಡೇಟು ತಿಂದರೂ ಬುದ್ಧಿ ಕಲಿಯದ ಆರೋಪಿಯು “ನೀವಾದರೂ ಯುವತಿಯನ್ನು ಒಪ್ಪಿಸಿಕೊಡಿ ಸಾರ್. ಮದುವೆ ಆಗುತ್ತೇನೆ. ಆಕೆಯನ್ನು ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದೆ. ಆದರೂ ಸಾಧ್ಯವಾಗಲಿಲ್ಲ’ ಎಂದು ಪೊಲೀಸರ ಮುಂದೆಯೇ ನಾಗೇಶ್ ಹೇಳಿದ್ದಾನೆ.
ಕಳೆದ ಏಳು ವರ್ಷಗಳಿಂದ ನಾನು ಪ್ರೀತಿಸುತ್ತಿದ್ದೇನೆ. “ನಾನು ಆ್ಯಸಿಡ್ ಹಾಕಬಾರದು ಅಂತಲೇ ಇದ್ದೆ. ಪ್ರಕರಣ ನಡೆದ ಹಿಂದಿನ ದಿನ ಯುವತಿಯ ಬಳಿ ಬಾಯಿ ಮಾತಿಗೆ ಆ್ಯಸಿಡ್ ಹಾಕುತ್ತೇನೆ ಎಂದಿದ್ದೆ. ಆದರೆ, ಆಕೆ ಅದನ್ನು ಅವರ ತಂದೆಗೆ ಹೇಳಿದ್ದಳು. ಅವರ ತಂದೆ ನನ್ನ ಅಣ್ಣನಿಗೆ ಹೇಳಿದ್ದರು. ನನ್ನ ಅಣ್ಣ ನನಗೆ ಬೈದಿದ್ದ’. ಇದರಿಂದ ಆಕ್ರೋಶಗೊಂಡು ಆ್ಯಸಿಡ್ ಹಾಕಿದ್ದೆ ಎಂದು ಆರೋಪಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಇನ್ನು ಸಂತ್ರಸ್ತ ಯುವತಿಯ ಆರೋಗ್ಯ ವಿಚಾರಿಸಲು ಬಂದಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಂದೆ “ನನ್ನ ಕಣ್ಣ ಮುಂದೆಯೇ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ಯುವತಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ:ಯುವತಿಗೆ ಅಶ್ಲೀಲ ಮೆಸೇಜ್; ಯುವಕನಿಗೆ ಥಳಿಸಿ ಊರಲ್ಲಿ ಅರೆಬೆತ್ತಲೆ ಮೆರವಣಿಗೆ!
ಆತ್ಮ ಹತ್ಯೆಗೆ ನಿರ್ಧರಿಸಿದ್ದ ಆರೋಪಿ
ಆ್ಯಸಿಡ್ ದಾಳಿ ನಡೆಸಿದ ನಂತರ ಆರೋಪಿ ನಾಗೇಶ್ ತನ್ನ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಬೈಕ್ನಲ್ಲಿ ನ್ಯಾಯಾಲಯದ ಬಳಿ ಹೋಗಿ ವಕೀಲರನ್ನು ಸಂಪರ್ಕಿಸಿ ಪ್ರಕರಣದ ಬಗ್ಗೆ ವಿವರಿಸಿದ್ದ. ವಕೀಲರು ಪೊಲೀಸರಿಗೆ ಶರಣಾಗುವಂತೆ ಸೂಚಿಸಿದ್ದರು. ಆದರೆ, ನಾಗೇಶ್ ಬೈಕನ್ನು ಅಲ್ಲೇ ಬಿಟ್ಟು ಬಸ್ನಲ್ಲಿ ಹೊಸಕೋಟೆಗೆ ಹೋಗಿದ್ದ. ಅಲ್ಲಿಯ ಕೆರೆಯೊಂದಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಬಳಿಕ ಮನಸ್ಸು ಬದಲಿಸಿಕೊಂಡು ತಿರುಪತಿಗೆ ಹೋಗಲು ಮುಂದಾಗಿದ್ದ.
ತನ್ನ ಬಳಿ ಮೊಬೈಲ್ ಇದ್ದರೆ ಸಿಕ್ಕಿಬೀಳುತ್ತೇನೆಂದು ತಿಳಿದು ಆ ಮೊಬೈಲ್ ಅನ್ನು ಕೆರೆಗೆ ಎಸೆದಿದ್ದ. ತಿರುಪತಿಯಲ್ಲಿ ಪೊಲೀಸರು ಹುಡುಕಾಟ ನಡೆಸಬಹುದು ಎಂದು ಭಾವಿಸಿ ಹೊಸಕೋಟೆಯಿಂದ ಮಾಲೂರು ಮೂಲಕ ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ರಮಣ ಆಶ್ರಮಕ್ಕೆ ಹೋಗಿದ್ದ. ಅನಾಥನಾಗಿ ನಾನೊಬ್ಬನೇ ಜೀವಿಸುತ್ತಿದ್ದೇನೆ. ಆಶ್ರಮದಲ್ಲಿ ಯಾವ ಕೆಲಸ ಬೇಕಾದರೂ ಮಾಡುತ್ತೇನೆ ಎಂದು ಅನುಕಂಪ ಗಿಟ್ಟಿಸಿಕೊಂಡು 15 ದಿನದಿಂದ ಅಲ್ಲೇ ನೆಲೆಸಿದ್ದ. ಖಾವಿ ವಸ್ತ್ರ ಖರೀದಿಸಿ ಸನ್ಯಾಸಿಯಂತೆ ವೇಷ ಧರಿಸಿ ಧ್ಯಾನ, ಇನ್ನಿತರ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಆ್ಯಸಿಡ್ ದಾಳಿ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ. ಆದಷ್ಟು ಬೇಗ ಚಾರ್ಜ್ಶೀಟ್ ಸಲ್ಲಿಸುತ್ತೇವೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು ಆರೋಪಿ 2020ರಲ್ಲಿಯೂ ಪ್ರಯೋಗಾಲಯಕ್ಕೆ ಇ-ಮೇಲ್ ಕಳುಹಿಸಿ ಇಷ್ಟೇ ಪ್ರಮಾಣದಲ್ಲಿ ಆ್ಯಸಿಡ್ ಖರೀದಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. –ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ