ಅಧಿಕಾರ ಸಿಕ್ಕರೂ ಸಿಬ್ಬಂದಿ ಸಿಗಲಿಲ್ಲ; ಲೋಕಾಯುಕ್ತಕ್ಕೆ ಸಿಬ್ಬಂದಿ ಕೊರತೆ ಸವಾಲು
340ಕ್ಕೂ ಹೆಚ್ಚು ಕೇಸ್ ತನಿಖೆ ನಡೆಸುವುದೇ ಕಷ್ಟಕರ
Team Udayavani, Oct 2, 2022, 7:10 AM IST
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ಧಾದ ಬಳಿಕ ಅಧಿಕೃತವಾಗಿ ಅಲ್ಲಿನ ಎಲ್ಲ ಪ್ರಕರಣಗಳೂ ಲೋಕಾಯುಕ್ತ ಅಂಗಳಕ್ಕೆ ಬಂದು ಬಿದ್ದಿವೆ. ಆದರೆ, ಲೋಕಾಯುಕ್ತದಲ್ಲಿ ಅಷ್ಟು ಪ್ರಕರಣ ನಿಭಾಯಿಸುವ ಸಿಬ್ಬಂದಿ ಸಾಮರ್ಥ್ಯ ಇಲ್ಲ.
ಎಸಿಬಿಯಲ್ಲಿದ್ದ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಸರ್ಕಾರಕ್ಕೆ ಬರೆದಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮತ್ತೂಂದೆಡೆ ಒಂದು ತಿಂಗಳಿನಿಂದ ಎಸಿಬಿ ಅಧಿಕಾರಿಗಳೂ ಕೆಲಸವಿಲ್ಲದೇ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ.
ತನಿಖಾ ಹಂತದಲ್ಲಿದ್ದ 340 ಗಂಭೀರ ದಾಳಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದು, ಸದ್ಯ ಕಾರ್ಯ ನಿರ್ವಹಿಸುತ್ತಿರುವ 400 ಸಿಬ್ಬಂದಿ ಬಳಸಿಕೊಂಡು ಎಸಿಬಿಯಿಂದ ವರ್ಗಾವಣೆ ಆಗಿರುವ ಅಕ್ರಮ ಆಸ್ತಿಗೆ (ಡಿಸ್ ಪ್ರಪೋಷನೆಟ್ ಅಸೆಟ್) ಸಂಬಂಧಿಸಿದ 340ಕ್ಕೂ ಹೆಚ್ಚಿನ ಕೇಸ್ಗಳನ್ನು ತನಿಖೆ ನಡೆಸುವುದೇ ಲೋಕಾಯುಕ್ತ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ತನಿಖೆ ವಿಳಂಬವಾದಷ್ಟೂ ಸಾಕ್ಷ್ಯಾನಾಶ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.
ಎಸಿಬಿ ರದ್ದಾದ ಬಳಿಕ ಲೋಕಾಯುಕ್ತಕ್ಕೆ ಪ್ರತಿನಿತ್ಯ ಕನಿಷ್ಠ 8 ರಿಂದ 10 ದೂರುಗಳು ಬರಲಾರಂಭಿಸಿವೆ. ಎಲ್ಲ ದೂರುಗಳನ್ನೂ ಕೂಲಂಕಷವಾಗಿ ಪರಿಶೀಲಿಸಿ ಎಫ್ಐಆರ್ ದಾಖಲಿಸಿಕೊಳ್ಳುವ ಪ್ರಕ್ರೀಯೆಗಳು ಮುಂದುವರೆದಿವೆ. ಪೊಲೀಸ್ ವಿಭಾಗದಲ್ಲಿ 139 ಹುದ್ದೆಗಳು ಖಾಲಿ ಉಳಿದಿವೆ. ದಾಳಿ ವೇಳೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ಕಾನ್ಸ್ಟೆàಬಲ್ಗಳ 99 ಹುದ್ದೆ ಹಲವು ವರ್ಷಗಳಿಂದ ಭರ್ತಿ ಮಾಡಿಲ್ಲ.
ಈ ಮಧ್ಯೆ, ಎಸಿಬಿ ರದ್ದಾದ ನಂತರ ದಾಳಿ ಅಧಿಕಾರ ಬಂದಿರುವುದರಿಂದ ಲೋಕಾಯುಕ್ತ ಪೊಲೀಸರು ಇದೀಗ ಮತ್ತೆ ಭ್ರಷ್ಟರ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ.
310 ಸಿಬ್ಬಂದಿಗೆ ಕೆಲಸವಿಲ್ಲ
ಭ್ರಷ್ಟಾಚಾರ ನಿಗ್ರದ ದಳ ವಿಭಾಗದಲ್ಲಿ 1 ಎಡಿಜಿಪಿ, 9 ಎಸ್.ಪಿ., 35 ಡಿವೈಎಸ್ಪಿ, 74 ಇನ್ಸ್ಪೆಕ್ಟರ್, ಉಳಿದಂತೆ ಪಿಎಸ್ಐ, ಎಎಸ್ಐ, ಕಾನ್ಸ್ಟೆàಬಲ್ ಸೇರಿ ಒಟ್ಟು 310 ಪೊಲೀಸ್ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಎಸಿಬಿ ರದ್ದಾದ ನಂತರ ಅವರು ಎಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೆ ಕೆಲಸವಿಲ್ಲದೇ ಸರ್ಕಾರದ ಮುಂದಿನ ಆದೇಶಕ್ಕಾಗಿ ಕಾದು ಕುಳಿತಿದ್ದಾರೆ. ಎಲ್ಲ ಸಿಬ್ಬಂದಿ ಕಚೇರಿಗೂ ಬರುತ್ತಿಲ್ಲ.
ಪರಿಣಾಮಕಾರಿಯಾಗಿ ತನಿಖೆ ನಡೆಸುವ ಉದ್ದೇಶದಿಂದ ಹಾಗೂ ಲೋಕಾಯುಕ್ತ ಪೊಲೀಸ್ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕಿದೆ. ಈ ವಿಚಾರ ಸರ್ಕಾರದ ಗಮನಕ್ಕೂ ತರಲಾಗಿದ್ದು, ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಲಿದೆ ಎಂದು ಪತ್ರದ ಮೂಲಕ ತಿಳಿಸಿದೆ. ಮೂವರು ಎಸ್ಪಿಗಳನ್ನು ನಿಯೋಜಿಸಿರುವ ಬಗ್ಗೆ ಭರವಸೆ ದೊರೆತಿದೆ.
-ನ್ಯಾ.ಬಿ.ಎಸ್.ಪಾಟೀಲ್, ಲೋಕಾಯುಕ್ತರು
ಅವಿನಾಶ್ ಮೂಡಂಬಿಕಾನ