ಧ್ವನಿಮತದ ಮೂಲಕ ಮತಾಂತರ ವಿಧೇಯಕ ಅಂಗೀಕಾರ; ತೀವ್ರ ವಿರೋಧ
Team Udayavani, Dec 23, 2021, 5:28 PM IST
ಸುವರ್ಣ ವಿಧಾನಸೌಧ : ರಾಜ್ಯ ರಾಜಕಾರಣದಲ್ಲಿ ಕಳೆದೆರಡು ದಿನಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ವಿಧಾನಸಭೆಯಲ್ಲಿ ಗುರುವಾರ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ.
ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಂಗಳವಾರ ವಿಧೇಯಕವನ್ನು ಮಂಡಿಸಿದ್ದರು. ಇದಕ್ಕೆ ಕಾಂಗ್ರೆಸ್ ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.ಕಳೆದ ಎರಡು ದಿನಗಳಿಂದಲೂ ವಿಧಾನಸಭೆಯ ಕಲಾಪದ ಚರ್ಚೆ ಈ ವಿಧೇಯಕದ ಸುತ್ತಲೇ ನಡೆಯುತ್ತಿತ್ತು.ಗುರುವಾರ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಆದರೆ ಕಾಂಗ್ರೆಸ್ ಕಾಲಾವಧಿಯಲ್ಲೇ ವಿಧೇಯಕದ ಕರಡು ರಚಿಸಲಾಗಿತ್ತು. ಇದಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಹಿ ಹಾಕಿದ್ದರು ಎಂಬ ದಾಖಲೆ ಮುಂದಿಡುವ ಮೂಲಕ ಬಿಜೆಪಿ ಪ್ರತಿಪಕ್ಷ ಕಾಂಗ್ರೆಸ್ ಅನ್ನು ತಬ್ಬಿಬ್ಬುಗೊಳಿಸಿತು.
ಇದನ್ನೂ ಓದಿ :ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ: ಸದನದಲ್ಲಿ ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು
ಮತಾಂತರ ವಿಚಾರವನ್ನು ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ತಾಯಿ ಮತಾಂತರವಾದ ಘಟನೆಯನ್ನು ಪ್ರಸ್ತಾಪಿಸಿದರು. ಆದರೆ ವಿಪಕ್ಷ ಕಾಂಗ್ರೆಸ್ ಮಾತ್ರ ವಿಧೇಯಕವನ್ನು ಒಪ್ಪಲು ಸಾಧ್ಯವೇ ಇಲ್ಲ. ಇದು ಸಂವಿಧಾನ ವಿರೋಧಿ ಕ್ರಮ ಎಂದು ಆರೋಪಿಸಿ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿತು. ವಿಪಕ್ಷದ ಆಕ್ಷೇಪದ ಮಧ್ಯೆಯೇ ವಿಧೇಯಕ ಧ್ವನಿಮತದ ಮೂಲಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ವಿಧಾನ ಪರಿಷತ್ತಿನ ಒಪ್ಪಿಗೆ ಮಾತ್ರ ಬಾಕಿ ಇದ್ದು, ನಾಳೆ ತಾರ್ಕಿಕ ಅಂತ್ಯ ಕಾಣಲಿದೆ.