ಕೋವಿಡ್-19 ನಿಯಂತ್ರಣದಲ್ಲಿ ಬೆಂಗಳೂರು ಯಶಸ್ಸು ಕಂಡಿದೆ: ಡಿವಿಎಸ್
Team Udayavani, May 25, 2020, 7:45 PM IST
ಬೆಂಗಳೂರು: ಕೋವಿಡ್-19 ನಿಯಂತ್ರಣ ಮಾಡುವಲ್ಲಿ ಕರ್ನಾಟಕ ಯಶಸ್ಸು ಕಂಡಿದೆ, ಕೇಂದ್ರದ ಮಾರ್ಗಸೂಚಿ ಪಾಲನೆ ಮಾಡಿ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಸಚಿವರು, ಶಾಸಕರು, ಅಧಿಕಾರಿಗಳ ಜತೆ ಸೋಮವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ನಂತರ ಮಾತನಾಡಿದ ಅವರು,ಕೋವಿಡ್-19 ನಿಯಂತ್ರಣ ವಿಚಾರದಲ್ಲಿ ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇದಕ್ಕಾಗಿ ನಾನು ಡಾ.ಸಿ.ಎನ್.ಮಂಜುನಾಥ್ ನೇತೃತ್ವದ ತಜ್ಞರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕೋವಿಡ್-19 ನಿಯಂತ್ರಣದಲ್ಲಿ ಕರ್ನಾಟಕ ಯಶಸ್ಸು ಕಂಡಿದೆ. ಅದ್ಭುತ ಪ್ರಯತ್ನ ನಮ್ಮಲ್ಲಿ ಆಗುತ್ತಿದೆ. ಅದೇ ರೀತಿ ದೇಶದಲ್ಲಿಯೂ ಪ್ರಧಾನಿ ನರೇಂದ್ರಮೋದಿ ಅವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವದ ಪ್ರಶಂಸೆ ನಮಗೆ ಸಿಕ್ಕಿದೆ ಎಂದು ತಿಳಿಸಿದರು.
ಕೋವಿಡ್-19 ಸಂಬಂಧ ರಾಜ್ಯದಲ್ಲಿ ದಾಖಲಾಗಿರುವ 800 ರಿಂದ 900 ಪ್ರಕರಣಗಳು ಬೇರೆ ರಾಜ್ಯದಿಂದ ಇಲ್ಲಿಗೆ ಬಂದವರಲ್ಲಿ ಕಾಣಿಸಿಕೊಂಡಿದ್ದಾಗಿದೆ. ರಾಜ್ಯದಲ್ಲಿ ಪ್ರಾಯೋಗಾಲಯಗಳು ಹೆಚ್ಚಾಗಿರುವುದರಿಂದ ಕೋವಿಡ್-19 ಪರೀಕ್ಷೆ ಪ್ರಮಾಣವೂ ಹೆಚ್ಚಾಗಿದೆ ಎಂದು ತಿಳಿಸಿದರು.
ಕೋವಿಡ್-19 ಫಾರ್ಮಸಿ ಹೊಣೆಗಾರಿಕೆಯೂ ಇರುವುದರಿಂದ ದೆಹಲಿಯಿಂದಲೇ ರಾಜ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆಯುತ್ತಿದ್ದೆ. ಇಂದು ಸಭೆ ನಡೆಸಿದ್ದೇನೆ. ರಾಜ್ಯಕ್ಕೆ ಪಿಪಿಒ ಕಿಟ್ಗಳ ಅಗತ್ಯ ಇದೆ ಎಂಬುದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ, ಈ ಕುರಿತು ಗಮನಹರಿಸಲಾಗುವುದು ಎಂದು ಹೇಳಿದರು.
ವಲಸಿಗರನ್ನು ಅವರವರ ರಾಜ್ಯಕ್ಕೆ ಕಳುಹಿಸಲು ರಾಜ್ಯ ಸರ್ಕಾರ ಸಿದ್ದತೆ ಇದೆ. ಆದರೆ , ಅವರ ರಾಜ್ಯಗಳು ಇವರನ್ನು ಬಿಟ್ಟುಕೊಳ್ಳಲು ಒಪ್ಪಬೇಕು. ಅದಕ್ಕೆ ಎರಡು ರಾಜ್ಯಗಳ ಅಧಿಕಾರಿಗಳ ನಡುವೆ ಸಮಾಲೋಚನೆ, ಒಪ್ಪಿಗೆ ಪತ್ರ ಸೇರಿ ಹಲವು ಪ್ರಕ್ರಿಯೆ ನಡೆಯಬೇಕು, ಹೀಗಾಗಿ, ಒಂದಷ್ಟು ಗೊಂದಲ ಇದೆ ಎಂದರು.
ರಾಜ್ಯದಲ್ಲಿ ಹೋಟೆಲ್ ತೆರೆಯಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಕೇಂದ್ರದ ಜತೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದುಎ ಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ರಸಗೊಬ್ಬರ ದಾಸ್ತಾನು ಸಹ ಅಗತ್ಯ ಪ್ರಮಾಣದಲ್ಲಿ ಇದೆ. ಮುಂಗಾರು ಹಂಗಾಮಿಗೆ ಬೇಕಾಗುವಷ್ಟು ದಾಸ್ತಾನು ಮಾಡಲಾಗಿದೆ. ರೈತರು ಆತಂಕ ಪಡಬೇಕಿಲ್ಲ ಎಂದು ಸಚಿವರು ತಿಳಿಸಿದರು.