ಬಾಂಗ್ಲಾದೇಶ – ಭಾರತದ ಸಂಬಂಧದಲ್ಲಿ ವೇಗ?
Team Udayavani, Mar 25, 2021, 7:15 AM IST
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 26ಕ್ಕೆ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿ ನಿಜಕ್ಕೂ ಐತಿಹಾಸಿಕವಾದದ್ದು. ಬಾಂಗ್ಲಾದೇಶ ಸ್ವಾತಂತ್ರ್ಯದ 50ನೇ ಸಂಭ್ರಮಾಚರಣೆ, ಆ ರಾಷ್ಟ್ರದ ಸಂಸ್ಥಾಪಕ ದಿ| ಶೇಖ್ ಮುಜಿಬುರ್ ರೆಹಮಾನ್ರ ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ ಮೋದಿ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿರುವುದು ವಿಶೇಷವಾಗಿದೆ. ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಗೆ ಈ ಭೇಟಿ ಕಾರಣವಾಗಲಿದ್ದು, ನೆರೆಯ ಪಾಕಿಸ್ಥಾನ ಹಾಗೂ ಚೀನಕ್ಕೂ ಇದು ಪ್ರಬಲ ಸಂದೇಶ ಕಳುಹಿಸಲಿದೆ. ಈ ವೇಳೆಯಲ್ಲೇ ಭಾರತವು ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಮರಣೋತ್ತರವಾಗಿ ಗಾಂಧಿ ಶಾಂತಿ ಪ್ರಶಸ್ತಿಯನ್ನೂ ಘೋಷಿಸಿರುವುದು ವಿಶೇಷ.
ಭಾರತ-ಬಾಂಗ್ಲಾ ಸಂಬಂಧ
ಪಾಕಿಸ್ಥಾನದ ಕಪಿಮುಷ್ಟಿಯಿಂದ ಪಾರಾಗಿ ಬಾಂಗ್ಲಾದೇಶ ಉದಯವಾಗುವಲ್ಲಿ ಭಾರತದ ಪಾತ್ರ ಹಿರಿದು. ಹೀಗಾಗಿ ಆ ರಾಷ್ಟ್ರದೊಂದಿಗೆ ಭಾರತದ ಸೌಹಾರ್ದ 5 ದಶಕಗಳಿಂದ ಉತ್ತಮ ವಾಗಿಯೇ ಇದೆ. ಆದರೂ ಬಾಂಗ್ಲಾದಲ್ಲಿ ಹೆಚ್ಚಿದ ಇಸ್ಲಾಮಿಕ್ ಮೂಲಭೂತವಾದಿಗಳ ಹೆಚ್ಚಳ, ಪರಿಣಾಮವಾಗಿ ಅಲ್ಲಿನ ಹಿಂದೂ ಪ್ರಜೆಗಳ ಮೇಲೆ ನಡೆದ ದೌರ್ಜನ್ಯಗಳು ಹಾಗೂ ಅಕ್ರಮ ವಲಸಿಗರ ಸಮಸ್ಯೆ ಭಾರತದ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದಿದೆ.
ಆದರೆ ಶೇಖ್ ಹಸೀನಾ-ಮೋದಿ ಆಡಳಿತಾವಧಿಯಲ್ಲಿ ಎರಡೂ ದೇಶಗಳ ನಡುವಿನ ಕಂದರವನ್ನು ಮುಚ್ಚುವ
ಪ್ರಯತ್ನ ಭರದಿಂದ ಸಾಗಿದ್ದು, ವ್ಯಾಪಾರ ವಹಿವಾಟು ವೃದ್ಧಿಸುವ ನಿಟ್ಟಿನಲ್ಲೂ ಬಹಳ ಕೆಲಸಗಳಾಗುತ್ತಿವೆ. ಇನ್ನು ಭಾರತ ಕೋವಿಡ್ನ ಈ ಸಂಕಷ್ಟದ ಕಾಲದಲ್ಲಿ ಬಾಂಗ್ಲಾದೇಶಕ್ಕೆ ಲಸಿಕೆಗಳನ್ನು ಕಳುಹಿಸುವ ಮೂಲಕವೂ ಹಿರಿತನ ಮೆರೆದಿದೆ. 1971ರ ಯುದ್ಧದ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ಶೇಖ್ ಹಸೀನಾ ಭಾರತೀಯರನ್ನು, ಭಾರತೀಯ ಯೋಧರಿಗೆ ನಮಿಸಿದ ರೀತಿಯೂ ಎರಡೂ ದೇಶಗಳ ನಡುವಿನ ಸಂಬಂಧ ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿಸಲಿದೆ ಎನ್ನುವುದಕ್ಕೆ ದ್ಯೋತಕವಾಗಿತ್ತು.
ಬಾಂಗ್ಲಾದ ಆರ್ಥಿಕ ಬೆಳವಣಿಗೆ
ಬಾಂಗ್ಲಾದೇಶದ ಆರ್ಥಿಕ ಬೆಳವಣಿಗೆ ಇಡೀ ದಕ್ಷಿಣ ಏಷ್ಯನ್ ರಾಷ್ಟ್ರಗಳಿಗೆ ಪ್ರೇರಣಾದಾಯಕ. 1972ರಲ್ಲಿ ಜಗತ್ತಿನ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿದ್ದ ಬಾಂಗ್ಲಾದೇಶ, ಈ ದಶಕದ ಅಂತ್ಯದೊಳಗೆ ಜಗತ್ತಿನ ಪ್ರಮುಖ 25 ಆರ್ಥಿಕತೆಗಳಲ್ಲಿ ಜಾಗ ಪಡೆಯುವ ರೇಸ್ನಲ್ಲಿದೆ. ಅತ್ತ ಬಾಂಗ್ಲಾದೇಶ ಆರ್ಥಿಕವಾಗಿ ಸದೃಢವಾಗುತ್ತಾ ಹೋಗುತ್ತಿದ್ದಂತೆಯೇ, ಭಾರತ ದೊಂದಿಗಿನ ಅದರ ವ್ಯಾಪಾರ ಸಂಬಂಧವೂ ವೃದ್ಧಿಸುತ್ತಲೇ ಬಂದಿದೆ.
ಕಳೆದ ಎರಡು ದಶಕದಲ್ಲಿ ಬಾಂಗ್ಲಾದೇಶ ದಕ್ಷಿಣ ಏಷ್ಯಾದಲ್ಲಿ ಭಾರತದ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಬದಲಾಗಿದೆ. 2018-19ರಲ್ಲಿ ಭಾರತ ಆ ದೇಶಕ್ಕೆ 9.21 ಶತಕೋಟಿ ಡಾಲರ್ಗಳಷ್ಟು ಸರಕುಗಳನ್ನು ರಫ್ತು ಮಾಡಿದರೆ, ಬಾಂಗ್ಲಾದೇಶದಿಂದ 1.04 ಶತಕೋಟಿ ಡಾಲರ್ಗಳಷ್ಟು ಮೊತ್ತವನ್ನು ಆಮದು ಮಾಡಿಕೊಂಡಿತ್ತು. ಇದಕ್ಕೆ ಹೋಲಿ ಸಿದರೆ, ಚೀನ-ಬಾಂಗ್ಲಾ ನಡುವಿನ ವ್ಯಾಪಾರ ದಲ್ಲಿ ಚೀನಕ್ಕೇ ಹೆಚ್ಚು ಲಾಭವಿದೆ! ಚೀನ ಬಾಂಗ್ಲಾದೇಶಕ್ಕೆ 2018-19ರಲ್ಲಿ 1,3638 ದಶಲಕ್ಷ ಡಾಲರ್ ಮೊತ್ತದ ಸರಕು ರಫ್ತು ಮಾಡಿದರೆ, ಬಾಂಗ್ಲಾದೇಶದಿಂದ ಅದು ಕೇವಲ 568 ದಶಲಕ್ಷ ಡಾಲರ್ಗಳಷ್ಟು ಮಾತ್ರವೇ ಆಮದು ಮಾಡಿಕೊಂಡಿತ್ತು. ಹೀಗಾಗಿ ವ್ಯಾಪಾರ ವಹಿವಾಟಿನಲ್ಲಿ ಬಾಂಗ್ಲಾದೇಶಕ್ಕೆ ಚೀನಕ್ಕಿಂತ ಭಾರತವೇ ಲಾಭದಾಯಕ. ಈ ಕಾರಣ ಕ್ಕಾಗಿಯೇ, ಭವಿಷ್ಯದಲ್ಲೂ ಭಾರತದೊಂದಿಗಿನ ವ್ಯಾಪಾರ ಒಪ್ಪಂದಗಳನ್ನು ಮತ್ತಷ್ಟು ಚುರುಕು ಗೊಳಿಸುವ ಉದ್ದೇಶ ಬಾಂಗ್ಲಾದೇಶಕ್ಕಿದೆ.
ಆರ್ಥಿಕತೆಯ ದ್ವಾರಗಳು
ಇತ್ತೀಚೆಗೆ ವಿಶ್ವಬ್ಯಾಂಕ್ ಪ್ರಕಟಿಸಿದ ವರದಿಯು ಹೇಗೆ ಬಾಂಗ್ಲಾದೇಶ- ಭಾರತದ ನಡುವಿನ ಸಂಚಾರ ವ್ಯವಸ್ಥೆ ಸುಗಮವಾದರೆ ಆರ್ಥಿಕ ಅವಕಾಶಗಳ ದ್ವಾರಗಳು ತೆರೆದುಕೊಳ್ಳಲಿವೆ ಎನ್ನುವ ಬಗ್ಗೆ ಬೆಳಕು ಚೆಲ್ಲುತ್ತದೆ. “”ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಾರಿಗೆ ಸಂಪರ್ಕ ವ್ಯವಸ್ಥೆ ಸರಾಗಗೊಂಡರೆ, ಬಾಂಗ್ಲಾದೇಶಿಯರ ವಾರ್ಷಿಕ ಆದಾಯ ದಲ್ಲಿ 17 ಪ್ರತಿಶತ ಹೆಚ್ಚಳವಾಗುವ ಸಾಧ್ಯತೆ ಯಿದೆ. ಅಲ್ಲದೇ ಇದರಿಂದಾಗಿ ಭಾರತದ ಈಶಾನ್ಯ ರಾಜ್ಯಗಳೂ ಆರ್ಥಿಕವಾಗಿ ಸದೃಢವಾಗಲಿವೆ’ ಎನ್ನುತ್ತದೆ ವರದಿ. ಈ ಕಾರಣಕ್ಕಾಗಿ ಕೆಲವು ವರ್ಷಗಳಿಂದ ಮೋದಿ-ಹಸೀನಾ ಸರಕಾರ ಮೂಲಸೌಕರ್ಯ ಸಂಪರ್ಕ ಯೋಜ ನೆಗಳತ್ತ ಧ್ಯಾನ ಹರಿಸಿವೆ. ಜಲ, ರೈಲ್ವೇ ಸಂಪರ್ಕ ಮರುಸ್ಥಾಪಿಸುವ ಕೆಲಸಗಳ ಹಿಂದೆಯೂ ಈ ಉದ್ದೇಶವೇ ಇದೆ.
ಯಾರು ಶೇಖ್ ಮುಜಿಬುರ್ ರೆಹಮಾನ್?
ಬಾಂಗ್ಲಾದೇಶದ ಸಂಸ್ಥಾಪಕ, ಬಾಂಗಾಬಂಧು ಎಂದೇ ಆದರಕ್ಕೆ ಪಾತ್ರರಾಗಿರುವ ದಿ| ಶೇಖ್ ಮುಜಿಬುರ್ ರೆಹಮಾನ್ ಅಂದಿನ ಪೂರ್ವ ಪಾಕಿಸ್ಥಾನ(ಇಂದಿನ ಬಾಂಗ್ಲಾದೇಶ)ವನ್ನು ಪಾಕಿಸ್ಥಾನಿ ಸೇನೆಯ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲು ಹೋರಾಡಿ, ಬಾಂಗ್ಲಾದೇಶದ ಉಗಮಕ್ಕೆ ಕಾರಣರಾದವರು. ರೆಹಮಾನ್, ರಾಜಕೀಯಕ್ಕೂ ಸೇರುವ ಮುನ್ನ ಭಾರತದ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದವರು.
1949ರಲ್ಲಿ ಅವರು ಪೂರ್ವ ಪಾಕಿಸ್ಥಾನಕ್ಕೆ ಹೆಚ್ಚಿನ ಸ್ವಾಯತ್ತತೆಗೆ ಆಗ್ರಹಿಸುತ್ತಿದ್ದ ಆವಾಮಿ ಲೀಗ್ ಸೇರಿದರು. ಮುಂದೆ 1970ರಲ್ಲಿ ಪಶ್ಚಿಮ ಪಾಕಿಸ್ಥಾನದಲ್ಲಿನ (ಈಗಿನ ಪಾಕ್) ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರ ಪಕ್ಷ ಪಾಕಿಸ್ಥಾನದ ಎಲ್ಲ ಪಕ್ಷಗಳಿಗಿಂತಲೂ ಹೆಚ್ಚು ಮತ ಪಡೆಯಿತು. ಆದರೆ ಈ ಫಲಿತಾಂಶವನ್ನು ಪಾಕಿಸ್ಥಾನ ಮಾನ್ಯ ಮಾಡಲಿಲ್ಲ. ಇದು ನಾಗರಿಕ ಯುದ್ಧಕ್ಕೂ ಕಾರಣವಾಯಿತು. ಶೇಖ್ ಮುಜಿಬುರ್ ಮಾರ್ಚ್ 26, 1971ರಂದು ಬಾಂಗ್ಲಾದೇಶವನ್ನು ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿದರು.
ಕೂಡಲೇ ಪಾಕಿಸ್ಥಾನಿ ಸೇನೆಯು ಮುಜಿಬುರ್ರನ್ನು ಕಾರಾಗೃಹ ವಾಸದಲ್ಲಿಟ್ಟಿತು. ಇನ್ನೊಂದೆಡೆ ಪಾಕಿಸ್ಥಾನಿ ಸೇನೆ ಪೂರ್ವ ಪಾಕಿಸ್ಥಾನಿ ಯರನ್ನು ನಿರ್ದಯವಾಗಿ ಕೊಲ್ಲಲಾರಂಭಿಸಿತು. ಪಾಕಿಸ್ಥಾನಿ ಸೇನೆಯು ಪೂರ್ವ ಪಾಕಿಸ್ಥಾನದಲ್ಲಿ 3ರಿಂದ 20 ಲಕ್ಷ ಜನರನ್ನು ಕೊಂದದ್ದಷ್ಟೇ ಅಲ್ಲದೇ, 4 ಲಕ್ಷ ಹೆಣ್ಣು ಮಕ್ಕಳ (ಬಹುತೇಕ ಹಿಂದೂಗಳು) ಅತ್ಯಾಚಾರವೆಸಗಿತು. ಮುಜಿಬುರ್ರ ಅನುಪಸ್ಥಿತಿ ಯಲ್ಲೇ ಬೆಂಗಾಲಿಗಳು ಮುಕ್ತಿ ವಾಹಿನಿಯನ್ನು ರಚಿಸಿ, ಭಾರತ ಸೇನೆಯ ಸಹಾಯದಿಂದ ಪಾಕಿಸ್ಥಾನಿ ಸೇನೆಯನ್ನು ಸೋಲಿಸಿದರು. ಸ್ವತಂತ್ರ ಬಾಂಗ್ಲಾದೇಶ ಉದಯವಾಯಿತು. ಅತ್ತ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ಥಾನ ಜನವರಿ 1972ರಂದು ರೆಹಮಾನ್ರನ್ನು ಬಿಡುಗಡೆ ಮಾಡಿತು. ಅವರು ಬಾಂಗ್ಲಾದೇಶಕ್ಕೆ ಹಿಂದಿರುಗಿ ಮೂರು ವರ್ಷಗಳವರೆಗೆ ಆ ರಾಷ್ಟ್ರದ ಪ್ರಧಾನಿಯಾಗಿದ್ದರು. ಆದರೆ 1975ರ ಆಗಸ್ಟ್ 15ರಂದು ಸೇನಾಧಿಕಾರಿಗಳ ಗುಂಪೊಂದು ಮುಜಿಬುರ್ ರೆಹಮಾನ್, ಅವರ ಪತ್ನಿ ಮತ್ತು ಮೂವರು ಗಂಡುಮಕ್ಕಳನ್ನು(10 ವರ್ಷದ ಮಗು ಸೇರಿ) ಕೊಂದುಹಾಕಿತು. ಅವರ ಮಕ್ಕಳಾದ ಈಗಿನ ಪ್ರಧಾನಿ ಶೇಖ್ ಹಸೀನಾ ಮತ್ತು ಶೇಖ್ ರೆಹಾನಾ ಆಗ ವಿದೇಶದಲ್ಲಿದ್ದ ಕಾರಣ ಬದುಕುಳಿದರು. 2010ರಲ್ಲಿ ಬಾಂಗ್ಲಾ ಸರಕಾರ ಬಂಧನದಲ್ಲೇ ಇದ್ದ ಮುಜಿಬುರ್ ಹಂತಕರನ್ನು ಗಲ್ಲಿಗೇರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ