ಟೈಲರ್ ಶಿರಚ್ಛೇದನ-ಇಸ್ಲಾಂ ವಿರೋಧಿ, ಪೈಶಾಚಿಕ ಕೃತ್ಯ; ಮುಸ್ಲಿಂ ಪರ್ಸನಲ್ ಲಾ ಬೋರ್ಡ್
ಇದೊಂದು ಕೇವಲ ಹೇಡಿತನವಲ್ಲ, ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಕೃತ್ಯ
Team Udayavani, Jun 29, 2022, 4:58 PM IST
ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆಯನ್ನು ಇಸ್ಲಾಂ ವಿರೋಧಿ ಎಂದು ಕರೆದಿರುವ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಜಮಿಯತ್ ಉಲೇಮಾ ಎ ಹಿಂದ್ ಸಂಘಟನೆ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದೆ.
ಇದನ್ನೂ ಓದಿ:ಬುದ್ದಿ ಹೇಳಲು ಬಂದ ಪತ್ನಿಯ ಪೋಷಕರಿಗೆ ಬೆಂಕಿ ಹಚ್ಚಿದ ಪತಿ, ಓರ್ವ ಸಾವು, ಮೂವರ ಸ್ಥಿತಿ ಗಂಭೀರ
ಪ್ರತೀಕಾರದ ಹೆಸರಿನಲ್ಲಿ ಕನ್ನಯ್ಯಲಾಲ್ ಶಿರಚ್ಛೇದನ ಮಾಡಿರುವುದು ಇಸ್ಲಾಂ ಧರ್ಮಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಜಮಿಯತ್ ಉಲೇಮಾ ಎ ಹಿಂದ್ ತಿಳಿಸಿದೆ. “ಇದೊಂದು ಕೇವಲ ಹೇಡಿತನವಲ್ಲ, ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಕೃತ್ಯವಾಗಿದೆ ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಅಹ್ಮದ್ ಬುಖಾರಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಉದಯ್ ಪುರದಲ್ಲಿ ನಡೆದ ಪೈಶಾಚಿಕ ಕೃತ್ಯ ಮಾನವೀಯತೆಯನ್ನೇ ಅಲುಗಾಡಿಸಿದೆ. ಇದೊಂದು ಹೇಯಕೃತ್ಯ ಮಾತ್ರವಲ್ಲ, ಇಸ್ಲಾಂ ವಿರೋಧಿ ಮತ್ತು ಅಮಾನವೀಯ. ನಾನು ಎಲ್ಲಾ ಭಾರತೀಯ ಮುಸ್ಲಿಮರ ಪರವಾಗಿ ಈ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಶಾಹಿ ಇಮಾಮ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಎಐಎಂಪಿಎಲ್ ಬಿ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ, ಕನ್ನಯ್ಯಲಾಲ್ ಕೊಲೆ ಪ್ರಕರಣವನ್ನು ಬಲವಾಗಿ ಖಂಡಿಸುವುದಾಗಿ ತಿಳಿಸಿದ್ದು, ಇಂತಹ ಕೃತ್ಯ ಇಸ್ಲಾಂನ ಸಿದ್ಧಾಂತಕ್ಕೆ ವಿರುದ್ಧವಾದದ್ದು. ಯಾರು ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾವುದೇ ಧರ್ಮದ ಧಾರ್ಮಿಕ ವ್ಯಕ್ತಿಗಳನ್ನು ಅವಮಾನ ಮಾಡುವುದು ಗಂಭೀರವಾದ ಅಪರಾಧವಾಗಿದೆ. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿಯವರ ಬಗ್ಗೆ ನೀಡಿರುವ ಹೇಳಿಕೆ ಮುಸ್ಲಿಮರಿಗೆ ದುಃಖಕರವಾದ ವಿಚಾರವಾಗಿದೆ ಎಂದು ತಿಳಿಸಿದೆ.