10 ತಂಡಗಳ ಐಪಿಎಲ್ಗೆ ಬಿಸಿಸಿಐ ಒಪ್ಪಿಗೆ; 2022ರ ಋತುವಿನಿಂದ ಜಾರಿ
Team Udayavani, Dec 25, 2020, 6:30 AM IST
ಅಹ್ಮದಾಬಾದ್: ಅತ್ಯಂತ ಮಹತ್ವದ ಬಿಸಿಸಿಐ ಸರ್ವಸದಸ್ಯರ ಸಭೆ ಗುರುವಾರ ಮುಗಿದಿದೆ. ಹಲವು ಮಹತ್ವದ ನಿರ್ಣಯಗಳನ್ನು ತೆಗೆದು ಕೊಳ್ಳಲಾಗಿದೆ.
2022ರ ಐಪಿಎಲ್ನಲ್ಲಿ ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಏರಿಸಲು ಒಪ್ಪಿಗೆ ಸಿಕ್ಕಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ಟಿ20 ಕ್ರಿಕೆಟನ್ನು ಸೇರಿಸಲೂ ಅನುಮತಿ ಸಿಕ್ಕಿದೆ. ವಿಶೇಷವೆಂದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ವಹಿತಾಸಕ್ತಿ ಸಂಘರ್ಷ ವಿವಾದದ ಬಗ್ಗೆ ಸಭೆಯಲ್ಲಿ ಕಿಂಚಿತ್ತೂ ಚರ್ಚೆಯಾಗಲಿಲ್ಲ. ಇದು ಅಚ್ಚರಿ ಹುಟ್ಟಿಸಿದೆ.
ಚೇತನ್ ಶರ್ಮ ಅಧ್ಯಕ್ಷ
ತಡರಾತ್ರಿಯ ಬೆಳವಣಿಗೆಯಲ್ಲಿ ಭಾರತದ ಮಾಜಿ ವೇಗಿ ಚೇತನ್ ಶರ್ಮ ರಾಷ್ಟ್ರೀಯ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡರು. ಅವರ ಅಧಿಕ ಟೆಸ್ಟ್ ಅನುಭವ ಇಲ್ಲಿ ಗಣನೆಗೆ ಬಂತು. ಇದರೊಂದಿಗೆ ಕರ್ನಾಟಕದ ಸುನೀಲ್ ಜೋಶಿ ಕೇವಲ ಸದಸ್ಯರಾಗಿ ಮುಂದುವರಿಯಲ್ಲಿದ್ದಾರೆ. ನೂತನವಾಗಿ ಸೇರ್ಪಡೆಗೊಂಡ ಇಬ್ಬರು ಸದಸ್ಯರೆಂದರೆ ಅಬೆ ಕುರುವಿಲ್ಲ ಮತ್ತು ದೇಬಶಿಷ್ ಮೊಹಂತಿ. ಹರ್ವಿಂದರ್ ಸಿಂಗ್ ಮತ್ತೋರ್ವ ಸದಸ್ಯ.
ನಿರೀಕ್ಷೆಯಂತೆ ರಾಜೀವ್ ಶುಕ್ಲಾ ಬಿಸಿಸಿಐ ಉಪಾಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಬೃಜೇಶ್ ಪಟೇಲ್ ಐಪಿಎಲ್ ಮುಖ್ಯಸ್ಥರಾಗಿ ಮುಂದುವರಿದಿದ್ದಾರೆ.
10 ಐಪಿಎಲ್ ತಂಡಗಳು
ಐಪಿಎಲ್ ತಂಡಗಳ ಸಂಖ್ಯೆಯನ್ನು 8 ರಿಂದ 10ಕ್ಕೆ ಏರಿಸುವುದಂತೂ ಮೊದಲೇ ಖಚಿತವಾಗಿತ್ತು. ಅದಕ್ಕೆ ಅಧಿಕೃತ ಒಪ್ಪಿಗೆ
ಗುರುವಾರ ದೊರೆಯಿತು. ಮುಂದಿನ ವರ್ಷದ ಐಪಿಎಲ್ನಲ್ಲಿ ಇದನ್ನು ಸಾಧಿಸುವುದು ಬಹಳ ಕಷ್ಟ ಎನಿಸಿದ ಹಿನ್ನೆಲೆ ಯಲ್ಲಿ 2022ರಿಂದ 10 ತಂಡಗಳನ್ನು ಆಡಿಸಲು ತೀರ್ಮಾನಿಸಲಾಗಿದೆ.
ಗಂಗೂಲಿ-ಶಾ ಮುಂದುವರಿಕೆ
ಐಸಿಸಿ ಮಂಡಳಿ ನಿರ್ದೇಶಕ ರಾಗಿ ಸೌರವ್ ಗಂಗೂಲಿ ಮುಂದುವರಿ ಯಲಿದ್ದಾರೆ. ಜಯ್ ಶಾ ಪರ್ಯಾಯ ನಿರ್ದೇಶಕರಾಗಲಿದ್ದಾರೆ.
ತೆರಿಗೆ ವಿನಾಯಿತಿ ಸಿಗದಿದ್ದರೆ 900 ಕೋ.ರೂ. ನಷ್ಟ
2021ರ ಟಿ20 ವಿಶ್ವಕಪ್, 2023ರ ಏಕದಿನ ವಿಶ್ವಕಪ್ಗೆ ಸರಕಾರದಿಂದ ಪೂರ್ಣ ತೆರಿಗೆ ವಿನಾಯಿತಿಯನ್ನು ಪಡೆಯಬೇಕೆನ್ನುವುದು ಐಸಿಸಿ ಸೂಚನೆ. ಒಂದುವೇಳೆ ಪಡೆಯದಿದ್ದರೆ ಬಿಸಿಸಿಐಗೆ ಐಸಿಸಿ ಕೊಡುವ ವಾರ್ಷಿಕವಾಗಿ ಹಣದಲ್ಲಿ 904 ಕೋಟಿ ರೂ. ಖೋತಾ ಆಗಲಿದೆ.
ಇದು ಬರೀ ಮುಂದಿನ ವರ್ಷ ವೊಂದರಲ್ಲೇ ಬಿಸಿಸಿಐಗೆ ಆಗುವ ನಷ್ಟ. ಈ ಹಿನ್ನೆಲೆಯಲ್ಲಿ ಬಿಸಿಸಿಐ, ತೆರಿಗೆ ವಿನಾಯಿತಿ ನೀಡಲು ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಿದೆ.
ಒಲಿಂಪಿಕ್ಸ್ನಲ್ಲಿ ಟಿ20
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಟಿ20 ಕ್ರಿಕೆಟ್ ಸೇರಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಯೋಚನೆಗೆ ಬಿಸಿಸಿಐ ಬೆಂಬಲ ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯಿಂದ ಅಗತ್ಯ ಸ್ಪಷ್ಟೀಕರಣಗಳನ್ನು ಪಡೆದುಕೊಂಡಿದೆ. ಬಿಸಿಸಿಐ ಸ್ವಾಯುತ್ತ ಸಂಸ್ಥೆಯಾಗಿದೆ, ಅದನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಇದಕ್ಕೆಲ್ಲ ಸ್ಪಷ್ಟೀಕರಣ ಪಡೆಯಲಾಯಿತು. ನಾವು ಸರಿಯಾದ ದಾರಿಯಲ್ಲಿದ್ದೇವೆ ಎಂಬ ನಂಬಿಕೆಯಿದೆ ಎಂದು ಬಿಸಿಸಿಐ ಹೇಳಿದೆ.