ಸಾಲ್ಮರ- ಬೈಪಾಸ್ ರಸ್ತೆ ಬದಿ ಅಪಾಯಕಾರಿ ಗುಂಡಿ!
ಕಾಮಗಾರಿಗೆಂದು ಅಗೆದ ಅನಂತರದಲ್ಲಿ ಮುಚ್ಚಲೇ ಇಲ್ಲ
Team Udayavani, Mar 8, 2021, 4:00 AM IST
ಕಾರ್ಕಳ : ನಗರದ ಸಾಲ್ಮರ ಬಳಿಯಿಂದ ಬೈಪಾಸ್ ರಸ್ತೆಯ ಸರ್ವಜ್ಞ ಸರ್ಕಲ್ ಸಂಪರ್ಕಿಸುವ ಮಾರ್ಗ ಮಧ್ಯೆ ಡಿವೈಎಸ್ಪಿ ಕಚೇರಿ ಮುಂಭಾಗ ಕಾಮಗಾರಿ ಗೆಂದು ಗುಂಡಿ ತೋಡಿಡಲಾಗಿದ್ದು, ಅದನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದು, ಗುಂಡಿ ಅಪಾಯಕಾರಿ ಸ್ಥಿತಿಯಲ್ಲಿದೆ.
ಗುಂಡಿ ಮುಚ್ಚದೆ ಹಾಗೆಯೇ ಉಳಿ ದಿರುವುದರಿಂದ ಇಲ್ಲಿ ಸಂಚರಿಸುವಾಗ ವಾಹನ, ಪಾದಚಾರಿಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಿವೆ. ಡಾಮರು ರಸ್ತೆಗೆ ತಾಗಿಕೊಂಡು ರಸ್ತೆ ಅಂಚಿನಲ್ಲೆ ಈ ಗುಂಡಿಯಿದೆ. ವಾಹನ ಗಳು ಒಂದಕ್ಕೊಂದು ಸೈಡ್ ಕೊಡುವಾಗ ಅರಿವಿಗೆ ಬಾರದೆ ಗುಂಡಿಗೆ ಬಿದ್ದು ಅವಘಡಗಳು ಸಂಭವಿಸುವ ಸನ್ನಿವೇಶ ಇದೆ. ಪೈಪ್ ಕಾಮಗಾರಿ ದುರಸ್ತಿಗೆಂದು ಅಗೆದಿಡಲಾಗಿದೆ. ದುರಸ್ತಿ ಬಳಿಕ ಮುಚ್ಚದೆ ಹಾಗೆಯೇ ಬಿಟ್ಟು ಸಮಸ್ಯೆ ಸೃಷ್ಟಿಯಾಗಿದೆ. ಕಾಮಗಾರಿ ಬಾಕಿ ಇದ್ದಲ್ಲಿ ಕನಿಷ್ಠ ಅಗೆದ ಸ್ಥಳದಲ್ಲಿ ಸುತ್ತಲೂ ಎಚ್ಚರಿಕೆ ವಹಿಸುವ ಫಲಕ ಅಥವಾ ಪರ್ಯಾಯ ವ್ಯವಸ್ಥೆಗಳನ್ನು ಮಾಡಬೇಕಿತ್ತು.
ಗುಂಡಿ ಯಿರುವ ಬಗ್ಗೆ ಸೂಚನೆ ದೊರೆಯುವಂತೆ ಸುರಕ್ಷತೆ ವಹಿಸಬೇಕಿತ್ತು. ಗುಂಡಿಯ ಅಕ್ಕಪಕ್ಕ ಏನಾದರೂ ಇಟ್ಟಿದ್ದರೂ ಗೊತ್ತಾಗುತ್ತಿತ್ತು. ಈ ರಸ್ತೆಯಲ್ಲಿ ಶಾಲಾ ಮಕ್ಕಳು ಮಹಿಳೆಯರು, ವೃದ್ಧರು ಹೀಗೆ ನೂರಾರು ಮಂದಿ ನಿತ್ಯವೂ ಸಂಚರಿಸುತ್ತಿದ್ದು ಅಪಾಯ ಸಂಭವಿಸುವ ಮುನ್ನವೇ ಗುಂಡಿಗೆ ಮುಕ್ತಿ ನೀಡುವುದು, ಅಗತ್ಯ ಎನ್ನುವ ಅಭಿಪ್ರಾಯ ಸ್ಥಳಿಯದ್ದಾಗಿದೆ.