ಬಿಟ್ ಕಾಯಿನ್ ವಿಚಾರದಲ್ಲಿ ಮೂಲ ಬಿಜೆಪಿ ಸಚಿವರು, ನಾಯಕರ ಮೌನ: ಸಿಎಂ ಬೇಸರ
Team Udayavani, Nov 14, 2021, 8:00 PM IST
ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದಲ್ಲಿ ಮೂಲ ಬಿಜೆಪಿ ಸಚಿವರು ಹಾಗೂ ನಾಯಕರು ಮೌನ ವಹಿಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಬೇಸರ ಮೂಡಿಸಿದೆ ಎಂದು ಹೇಳಲಾಗಿದೆ.
ವಿಪಕ್ಷ ಕಾಂಗ್ರೆಸ್ ಬಿಟ್ ಕಾಯಿನ್ ಪ್ರಕರಣ ಪ್ರಸ್ತಾವಿಸಿ ವಾಗ್ಧಾಳಿ ನಡೆಸುತ್ತಿದ್ದರೂ ಸಂಪುಟದಲ್ಲಿರುವ ಮೂಲ ಬಿಜೆಪಿ ಸಚಿವರು ಚಕಾರ ಎತ್ತುತ್ತಿಲ್ಲ. ಬದಲಿಗೆ ಕಾಂಗ್ರೆಸ್ಅನ್ನು ಪ್ರಚೋದಿಸುವ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಆಪ್ತರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಮುಖ್ಯ ವಕ್ತಾರ ಕ್ಯಾ| ಗಣೇಶ್ ಕಾರ್ಣಿಕ್, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ನಿತ್ಯ ಪತ್ರಿಕಾಗೋಷ್ಠಿ ಹಾಗೂ ಹೇಳಿಕೆಗಳ ಮೂಲಕ ಕಾಂಗ್ರೆಸ್ ವಿರುದ್ಧ ಮುಗಿಬೀಳುವುದು, ಸಚಿವ ಡಾ| ಕೆ. ಸುಧಾಕರ್ ಪತ್ರಿಕಾಗೋಷ್ಠಿ ನಡೆಸಿದ್ದು ಬಿಟ್ಟರೆ ಮೂಲ ಬಿಜೆಪಿ ಸಚಿವರು ಹಾಗೂ ಪಕ್ಷದ ನಾಯಕರು ಮುಖ್ಯಮಂತ್ರಿ ಪರ ಗಟ್ಟಿಯಾಗಿ ನಿಲ್ಲುತ್ತಿಲ್ಲ.
ಸಂಪುಟದ ಸಚಿವರೊಬ್ಬರೇ ಬಿಟ್ ಕಾಯಿನ್ ವಿಚಾರದಲ್ಲಿ ಇಲ್ಲಸಲ್ಲದ ವದಂತಿ ಹರಿಬಿಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿಯವರು ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಅವರಿಗೂ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ದೇವರನ್ನು ಪ್ರಾರ್ಥಿಸಿ ಹುಂಡಿಗೆ ಕನ್ನ ಹಾಕಿದ ಕಳ್ಳ ! ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ