ಬಿಜೆಪಿ ಸರ್ಕಾರ ಟಿಎಂಸಿಯತ್ತ ಬೆರಳು ತೋರಿಸಿ ಆರೋಪವೆಸಗುತ್ತಿದೆ: ಕಿರಣ್ ಕಾಂದೋಳಕರ್
Team Udayavani, Dec 9, 2021, 6:02 PM IST
ಪಣಜಿ: ಬಿಜೆಪಿಯು ಮಮತಾ ಬ್ಯಾನರ್ಜಿಯವನರನ್ನು ಮುಸ್ಲಿಂ ಬೆಂಬಲಿಗರು ಎಂದು ಹೇಳುವ ಮೂಲಕ ರಾಜ್ಯದಲ್ಲಿ ಅವರನ್ನು ನಕಾರಾತ್ಮಕವಾಗಿ ಬಿಂಬಿಸಲು ಹೊರಟಿದೆ. ಪಶ್ಚಿಮ ಬಂಗಾಳವಲ್ಲದೆ, ಆಸ್ಸಾಂನಲ್ಲಿಯೂ ಮುಸ್ಲಿಂರು ನೆಲೆಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ಟಿಎಂಸಿಯತ್ತ ಬೆರಳು ತೋರಿಸಿ ಆರೋಪವೆಸಗುತ್ತಿದೆ ಎಂದು ಟಿಎಂಸಿ ವಕ್ತಾರ ಕಿರಣ್ ಕಾಂದೋಳಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು- ಮಮತಾ ಬ್ಯಾನರ್ಜಿಯವರು ಒಬ್ಬ ಬ್ರಾಹ್ಮಣರು, ಸ್ವಾತಂತ್ರ್ಯಹೋರಾಟಗಾರರ ಮಗಳು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಿಂದುಗಳ ಶೇ 50 ಕ್ಕೂ ಹೆಚ್ಚು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದವರು. ಮಮತಾ ಬ್ಯಾನರ್ಜಿಯವರ ಜಾತಿ ಧರ್ಮವನ್ನು ಬಿಜೆಪಿ ಎತ್ತಿ ತೋರಿಸುತ್ತಿರುವುದು ಇದೇ ಮೊದಲೇನಲ್ಲ. ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಎಂಸಿ ಪಕ್ಷವನ್ನು ಮುಸ್ಲಿಂ ಪರ ಪಕ್ಷವೆಂದು ಬಿಜೆಪಿ ಬಿಂಬಿಸಲು ಪ್ರಯತ್ನಿಸಿದ ನಂತರ ಮಮತಾ ಬ್ಯಾನರ್ಜಿಯವರು ತಮ್ಮ ಬುಡಕಟ್ಟಿನ ಬಗ್ಗೆ ಪ್ರಸ್ತಾಪಿಸಿದ್ದರು ಎಂದು ನುಡಿದರು.
ಟಿಎಂಸಿ ಪಕ್ಷವು ರೋಹಿಂಗ್ಯಾ ಮುಸ್ಲಿಂರ ಪಕ್ಷ ಎಂದು ಬಿಜೆಪಿ ಹೇಳುತ್ತಿದೆ. ರೋಹಿಂಗ್ಯಾ ಮುಸ್ಲಿಂರು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಬಿಜೆಪಿ ಅಧ್ಯಯನ ಮಾಡಿ ಪತ್ತೆ ಹಚ್ಚಬೇಕಿದೆ. ಅವರಲ್ಲಿ ಹೆಚ್ಚಿನವರು ಬಿಜೆಪಿ ಅಧಿಕಾರದಲ್ಲಿರುವ ಆಸ್ಸಾಂನಲ್ಲಿ ನೆಲೆಸಿದ್ದಾರೆ. ಆಸ್ಸಾಂ ಸರ್ಕಾರವು ಅವರೆಲ್ಲರನ್ನು ಸ್ಥಳಾಂತರಿಸಬೇಕು ಎಂದು ಹೇಳಿದರು.