ಪಾಕಿಸ್ಥಾನದ ಪರ ಅಖಿಲೇಶ್ ಅನುಕಂಪದ ಮಾತು : ಬಿಜೆಪಿ ಆಕ್ರೋಶ
Team Udayavani, Jan 24, 2022, 7:25 PM IST
ಲಕ್ನೋ/ನವದೆಹಲಿ: ಉತ್ತರಪ್ರದೇಶದಲ್ಲಿ ಚುನಾವಣಾ ರಣ ಕಣದ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಪಾಕಿಸ್ಥಾನದ ಪರ ನೀಡಿರುವ ಅನುಕಂಪದ ಹೇಳಿಕೆ ಬಿಜೆಪಿಯನ್ನು ತೀವ್ರವಾಗಿ ಕೆರಳಿಸಿದೆ.
ಪತ್ರಿಕೆಯೊಂದರ ಸಂದರ್ಶನದಲ್ಲಿ ಅಖಿಲೇಶ್ ಅವರು, ‘ಮತ ರಾಜಕಾರಣ’ಕ್ಕಾಗಿ ಆಡಳಿತ ಪಕ್ಷದಿಂದ ಗುರಿಯಾಗಿರುವ ಪಾಕಿಸ್ಥಾನವು ‘ರಾಜಕೀಯ ಶತ್ರು’ ಆದರೆ ಚೀನಾ ಭಾರತದ ನಿಜವಾದ ಶತ್ರು ಎಂದು ಹೇಳಿಕೆ ನೀಡಿದ್ದರು.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಎಸ್ಪಿ ಅಧ್ಯಕ್ಷರು ಹೇಳಿರುವುದು ಅತ್ಯಂತ ದುರದೃಷ್ಟಕರ ಮತ್ತು ನಿರಾಶಾದಾಯಕವಾಗಿದೆ. ಇದು ಯಾದವ್ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ಪಾಕಿಸ್ಥಾನನದ ಮೇಲಿನ ಅವರ “ಪ್ರೀತಿ” ತೋರಿಸುವ ಕಾಮೆಂಟ್ಗಳಿಗಾಗಿ ಅವರು ದೇಶದ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾತ್ರಾ, ಯಾದವ್ ಅವರು ಪಾಕಿಸ್ಥಾನದ ಸಂಸ್ಥಾಪಕ ಎಂ ಎ ಜಿನ್ನಾ ಅವರನ್ನೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಅಭಿವೃದ್ಧಿ ವಿಷಯಗಳ ಬಗ್ಗೆ ಪ್ರಚಾರ ನಡೆಸುತ್ತಿದೆ ಎಂದರು.