ಮೂಲ ಕಾಂಗ್ರೆಸಿಗರಿಗೆ ಸಿದ್ದರಾಮಯ್ಯ ಚಾಕರಿ ಮಾಡುವ ಸುಯೋಗ: ಬಿಜೆಪಿ ಕುಟುಕು
Team Udayavani, Jul 11, 2022, 12:30 PM IST
ಬೆಂಗಳೂರು: ಮೂಲ ಕಾಂಗ್ರೆಸಿಗರಿಗೆ ಈಗ ಸಿದ್ದರಾಮಯ್ಯ ಅವರ ಚಾಕರಿ ಮಾಡುವ ಸುಯೋಗ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರನ್ನು ಕುಟುಕಿದೆ.
ಹರಿ ಪ್ರಸಾದ್ ಹೇಳಿಕೆ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್, ಸಿದ್ದರಾಮಯ್ಯ ಅವರ ಬಗ್ಗೆ ಇರುವ ಅಸಮಾಧಾನವನ್ನು ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಈ ರೀತಿ ಹೊರ ಹಾಕಿದ್ದಾರೆ. ಅಧಿಕಾರದಾಹಿ ಸಿದ್ದರಾಮಯ್ಯ ವಿರುದ್ಧ ಸಹನೆಯ ಕಟ್ಟೆ ಒಡೆದಿದೆ ಎಂದು ಟೀಕಿಸಿದೆ.
ಎಷ್ಟೆಂದರೂ ಹರಿಪ್ರಸಾದ್ ಮೂಲ ಕಾಂಗ್ರೆಸ್ಸಿಗ, ವಲಸಿಗ ಸಿದ್ದರಾಮಯ್ಯ ಅವರನ್ನು ಎಷ್ಟು ವರ್ಷಗಳ ಕಾಲ ಸಹಿಸಿಕೊಳ್ಳಲು ಸಾಧ್ಯ? ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ರೇಸ್ ನಲ್ಲಿರುವ ನಾಯಕರು ಯಾರು ಎಂಬುದನ್ನು ಖುದ್ದು ಬಿ.ಕೆ.ಹರಿಪ್ರಸಾದ್ ಬಯಲು ಮಾಡಿದ್ದಾರೆ.ಇದು ಸಿದ್ದರಾಮಯ್ಯ ಅವರಿಗೆ ನೀಡಲಾದ ಎಚ್ಚರಿಕೆ ಗಂಟೆಯೋ ಅಥವಾ ಸಿದ್ದರಾಮಯ್ಯಗೆ ಪ್ರತಿಸ್ಪರ್ಧಿಗಳ ಸೃಷ್ಠಿಯೋ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ನ್ಯಾಯಾಂಗ ನಿಂದನೆ ಕೇಸ್:ಉದ್ಯಮಿ ಮಲ್ಯಗೆ 4 ತಿಂಗಳು ಜೈಲುಶಿಕ್ಷೆ, 2 ಸಾವಿರ ರೂ. ದಂಡ:ಸುಪ್ರೀಂ
ಸಿದ್ದರಾಮೋತ್ಸವದ ಬಗ್ಗೆ ಕಾಂಗ್ರೆಸ್ಸಿನಲ್ಲಿ ಅಸಹನೆ, ಅಸಹಿಷ್ಣುತೆಯ ಅಲೆ ಜೋರಾಗಿಯೇ ಬೀಸುತ್ತಿದೆ. ಕಾಂಗ್ರೆಸ್ಸಿನಲ್ಲೀಗ ವಲಸಿಗ ಸಿದ್ದರಾಮಯ್ಯ ಆರಾಧನೆ ನಡೆಯುತ್ತಿದೆ. ಮೂಲ ಕಾಂಗ್ರೆಸ್ಸಿಗರು ಮೂಕ ಪ್ರೇಕ್ಷಕರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವ ಖರ್ಗೆ ಅವರು ಮತ್ತೋರ್ವ ಸಿಎಂ ಕುರ್ಚಿಯ ಕನಸುಗಾರ ಸಿದ್ದರಾಮಯ್ಯ ಅವರ “ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸಾಧನೆ”ಎಂಬ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮೂಲ ಕಾಂಗ್ರೆಸ್ಸಿಗರಿಗೆ ಈಗ ಸಿದ್ದರಾಮಯ್ಯ ಅವರ ಚಾಕರಿ ಮಾಡುವ ಸುಯೋಗ ಎಂದು ಟೀಕಿಸಿದೆ.