ನಾಳೆಯಿಂದ ಬಜೆಟ್ ಅಧಿವೇಶನ : ಸಿ.ಡಿ. ಬಾಂಬ್, ಮೀಸಲಾತಿ ಸದ್ದಿನ ನಿರೀಕ್ಷೆ
Team Udayavani, Mar 3, 2021, 7:00 AM IST
ಬೆಂಗಳೂರು: ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಮಾ. 4ರಿಂದ ಆರಂಭವಾಗಲಿದ್ದು, ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ವಿವಾದ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮೀಸಲಾತಿ ಹೋರಾಟ ಮತ್ತಿತರ ವಿಚಾರ ಸದ್ದು ಮಾಡುವ ನಿರೀಕ್ಷೆಯಿದೆ.
ಅಧಿವೇಶನ ಆರಂಭ ವಾಗಲು ಎರಡು ದಿನ ಇರು ವಾಗಲೇ “ಸಿ.ಡಿ. ಸ್ಫೋಟ’ ನಡೆದಿದ್ದು, ಇದನ್ನು ಅಸ್ತ್ರ ವಾಗಿರಿಸಿಕೊಂಡು ವಿಪಕ್ಷಗಳು ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಬಹುದು.
ಅಧಿವೇಶನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗುರುವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಸಿ ಸರಕಾರದ ವಿರುದ್ಧ ಮುಗಿಬೀಳುವ ವಿಚಾರದಲ್ಲಿ ಕಾರ್ಯತಂತ್ರ ರೂಪಿಸಲಿದೆ. ಜೆಡಿಎಸ್ ಕೂಡ ಗುರುವಾರ ಅಥವಾ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಡೆಸುವ ಸಾಧ್ಯತೆಯಿದೆ.
ವಿಪಕ್ಷಗಳಿಗೆ ತಿರುಗೇಟು ನೀಡುವ ಸಂಬಂಧ ಬಿಜೆಪಿಯೂ ಸಜ್ಜಾಗುತ್ತಿದೆ.
19 ದಿನ ಕಲಾಪ
ಅಧಿವೇಶನ ಕುರಿತು ಮಂಗಳವಾರ ಮಾಹಿತಿ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾ. 4ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮೊದಲ 2 ದಿನ ಒಂದು ದೇಶ ಒಂದು ಚುನಾವಣೆ ಕುರಿತು ಚರ್ಚೆ ನಡೆಯಲಿದೆ. ಮಾ. 8ರಂದು ಬಜೆಟ್ ಮಂಡನೆಯಾಗಲಿದ್ದು, ಅನಂತರ ಮಾ. 31ರ ವರೆಗೆ ಬಜೆಟ್ ಮೇಲಿನ ಚರ್ಚೆ, ಸರಕಾರದ ಉತ್ತರ, ಪ್ರಶ್ನೋತ್ತರ ಕಲಾಪಗಳು ಇರಲಿವೆ ಎಂದಿದ್ದಾರೆ.
ಲೇವಾದೇವಿ ತಿದ್ದುಪಡಿ ಕಾಯ್ದೆ ಸೇರಿ ಮೂರು ಮಸೂದೆಗಳು ಮಂಡನೆ ಯಾಗಲಿವೆ. ಒಟ್ಟು 19 ದಿನ ಕಲಾಪ ನಡೆಯಲಿದೆ ಎಂದು ತಿಳಿಸಿದರು.
ಕೊರೊನಾ ಸಂಪೂರ್ಣ ನಿವಾರಣೆಯಾಗಿಲ್ಲ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಅಧಿವೇಶನ ನಡೆಸಬೇಕಾಗಿದೆ. ಆರೋಗ್ಯ ಸಮಸ್ಯೆ ಇರುವ ಶಾಸಕರು ಅಧಿವೇಶನಕ್ಕೆ ಬರುವುದು ಬೇಡ. ಅಧಿಕಾರಿ- ಸಿಬಂದಿ ಈ ಬಗ್ಗೆ ಎಚ್ಚರ ವಹಿಸಬೇಕು.ಅಧಿವೇಶನಕ್ಕೆ ಬಂದಾಗ ಆರೋಗ್ಯ ಸಮಸ್ಯೆ ಎದುರಾದರೆ ತಪಾಸಣೆ ಮತ್ತು ತುರ್ತು ಚಿಕಿತ್ಸೆಗೆ ವ್ಯವಸ್ಥೆ ಇರಲಿದೆ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್