ಸಿಸಿಬಿ ಪೊಲೀಸರ ಕಾರ್ಯಾಚರಣೆ : 38 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳ ಬಂಧನ
Team Udayavani, Jan 21, 2021, 10:41 PM IST
ಉಳ್ಳಾಲ: ಕೆ.ಜಿ ಗಟ್ಟಲೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ತಂಡವನ್ನೇ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಕೊಣಾಜೆ ಮತ್ತು ಉಳ್ಳಾಲ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ನರಿಂಗಾನದ ತೌಡುಗೋಳಿ ಕ್ರಾಸ್ ನಿವಾಸಿ ಅಬ್ದುಲ್ ಅಝೀಝ್ ಯಾನೆ ಪೋಕರ್ ಅಝೀಝ್ (40) ಮತ್ತು ಹಫೀಝ್ ಯಾನೆ ಅಪ್ಪಿ ಯಾನೆ ಮೊಯ್ದೀನ್ (34) ಕುತ್ತಾರಿನ ದೆಕ್ಕಾಡು ಪರಿಸರದಲ್ಲಿ ಇಬ್ಬರು ಆರೋಪಿಗಳು 23.980 ಗ್ರಾಂ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ವಶಕ್ಕೆ ಪಡೆದುಕೊಂಡು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ತೆಲಂಗಾಣ ಮೂಲದ ವಿಠಲ್ ಚೌಹಾನ್ ಮತ್ತು ಬೀದರ್ ನಿವಾಸಿಗಳಾದ ಸಂಜೀವ್ ಕುಮಾರ್ , ಕಲ್ಲಪ್ಪ ಎಂಬವರನ್ನು ದೇರಳಕಟ್ಟೆಯಿಂದ ಮುಡಿಪು ಕಡೆಗೆ ಮಹಾರಾಷ್ಟ್ರ ನೋಂದಾಯಿತ ವರ್ನಾ ಕಾರಿನಲ್ಲಿ ಗಾಂಜಾ ಸಾಗಾಟ ನಡೆಸುತ್ತಿರುವಾಗ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ತನ್ನನ್ನು ಧೋನಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಂತ್
ಇವರಿಂದ ಸುಮಾರು 15 ಕೆ.ಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.