ವಲಸಿಗರ ಬಣದಲ್ಲಿ ಒಡಕಿನ ಸುಳಿವು: ಭಿನ್ನ ದಿಕ್ಕಿನೆಡೆಗೆ ಮುಖಂಡರ ಚಿಂತನೆ
Team Udayavani, Jan 19, 2021, 9:24 AM IST
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆಳವಣಿಗೆ ಬಳಿಕ ವಲಸಿಗ ಶಾಸಕರ ಮಿತ್ರಮಂಡಳಿಯಲ್ಲಿ ಒಡಕು ಕಾಣಿಸಿಕೊಳ್ಳುತ್ತಿದೆ. ಒಬ್ಬೊಬ್ಬರು ಒಂದೊಂದು ದಿಕ್ಕಿನತ್ತ ಮುಖ ಮಾಡಲಾರಂಭಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಸಚಿವ ಸ್ಥಾನ ಕೈ ತಪ್ಪಿರುವುದು ವಲಸಿಗರನ್ನು ಆತಂಕಕ್ಕೆ ಈಡು ಮಾಡಿದೆ.
ಬಿಜೆಪಿ ಸೇರಿದ ನಂತರ ಮಿತ್ರ ಮಂಡಳಿಯ 17 ಸದಸ್ಯರು ಎಲ್ಲ ವಿಷಯಗಳನ್ನು ಒಟ್ಟಿಗೆ ಸೇರಿ ಚರ್ಚಿಸುತ್ತಿದ್ದರು. ಏನೇ ಬೇಡಿಕೆ ಇದ್ದರೂ ಎಲ್ಲರೂ ಒಟ್ಟಾಗಿ ಮುಖ್ಯಮಂತ್ರಿ ಎದುರು ಪ್ರಸ್ತಾಪ ಮಾಡಿ ಅದನ್ನು ಪಡೆಯುವ ಪ್ರಯತ್ನ ನಡೆಸುತ್ತಿದ್ದರು. ಆ ಬಣದ ಮುಂಚೂಣಿಯಲ್ಲಿದ್ದ ಸಚಿವ ರಮೇಶ್ ಜಾರಕಿಹೊಳಿ ನಾಯತ್ವದಿಂದ ಕೆಲವು ವಲಸಿಗರು ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಬಣ ಇಬ್ಭಾಗವಾಗಿದ್ದು, ಡಾ. ಸುಧಾಕರ ಹಾಗೂ ಎಸ್.ಟಿ. ಸೋಮಶೇಖರ್ ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅದೂ ಕೂಡ ಮುನಿರತ್ನಗೆ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಲು ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ:ರಾಜ್ಯಗಳ ಗಡಿ ವಿವಾದ ಮತ್ತು… ಮಹಾಜನ್ ವರದಿ
ವಲಸೆ ಬಂದು ಸಚಿವರಾಗಿರುವ ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಡಾ. ಸುಧಾಕರ್, ಗೋಪಾಲಯ್ಯ ಮೂಲ ಬಿಜೆಪಿಯವರೊಂದಿಗೆ ಹೊಂದಾಣಿಕೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಉಳಿದವರು ಬಿಜೆಪಿಯೊಂದಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಚಿವರಾಗಿರುವ ಶ್ರೀಮಂತ ಪಾಟೀಲ್, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಟಾರ್, ಬೈರತಿ ಬಸವರಾಜ್, ನಾರಾಯಣಗೌಡ, ಆನಂದ ಸಿಂಗ್ ತಮ್ಮ ಇಲಾಖೆಗೆ ಸೀಮಿತವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
17 ಜನ ವಲಸಿಗರಲ್ಲಿ 11 ಜನರು ಮಾತ್ರ ಸಂಪುಟ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ವಿಧಾನ ಪರಿಷತ್ ಸದಸ್ಯರಾಗಿರುವ ಆರ್.ಶಂಕರ್ ಹಾಗೂ ಎಂ.ಟಿ.ಬಿ. ನಾಗರಾಜ್, ಎಚ್.ವಿಶ್ವನಾಥ್ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಥಣಿ ಕ್ಷೇತ್ರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಇರುವುದರಿಂದ ಮಹೇಶ್ ಕುಮಠಳ್ಳಿಗೂ ಆತಂಕ ಶುರುವಾಗಿದೆ ಎಂಬ ಚರ್ಚೆ ಇದೆ.
ಇದನ್ನೂ ಓದಿ: ಕೋವಿಡ್ ಹಿಮ್ಮೆಟ್ಟಿಸಲು ಮಾರ್ಗದರ್ಶಿ ಸೂತ್ರಗಳ ಪಾಲನೆ ಅಗತ್ಯವಲ್ಲವೇ?
ಬೆಳವಣಿಗೆ ನೋಡಿದರೆ ಮುನಿರತ್ನಗೂ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ. ತುಳಸಿ ಮುನಿರಾಜುಗೌಡರಿಗೆ ಟಿಕೆಟ್ ಕೊಡಬೇಕೆಂದು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಪಟ್ಟು ಹಿಡಿದಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಸಂಪುಟದಲ್ಲಿ ಸ್ಥಾನ ಸಿಕ್ಕದ್ದರಿಂದ ಭವಿಷ್ಯದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುತ್ತದೆಯೋ ಇಲ್ಲವೊ ಎಂಬ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.
ಭವಿಷ್ಯದ ಆತಂಕ
ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಬಂದವರೆಲ್ಲರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದ ಯಡಿಯೂರಪ್ಪ ಸದ್ಯದ ಪಕ್ಷದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾಗದಿರುವುದು. ವಲಸಿಗರಲ್ಲಿ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿದೆ.
ಶಂಕರ ಪಾಗೋಜಿ