ಐಪಿಎಲ್ಗೂ ಎದುರಾಯಿತು ಕೋವಿಡ್-19 ಭೀತಿ! ವಾಂಖೇಡೆಯ 16 ಸಿಬಂದಿಗೆ ಕೋವಿಡ್
Team Udayavani, Apr 4, 2021, 7:10 AM IST
ಮುಂಬಯಿ : ಬಹು ನಿರೀಕ್ಷಿತ 14ನೇ ಐಪಿಎಲ್ಗೆ ಕ್ಷಣಗಣನೆ ಆರಂಭವಾಗಿದೆ. ಜತೆಗೆ ಕೊರೊನಾ ಮಹಾಮಾರಿ ಕೂಡ ಈ ಶ್ರೀಮಂತ ಕ್ರಿಕೆಟ್ ಲೀಗ್ ಮೇಲೆ ದಾಳಿಯ ಸೂಚನೆಯನ್ನು ರವಾನಿಸಿದೆ. ಕಳೆದೆರಡು ದಿನಗಳಿಂದ ಇಂಥ ಅನೇಕ “ಪಾಸಿಟಿವ್ ಕೇಸ್’ಗಳು ಕಂಡುಬಂದಿವೆ.
ಅತ್ಯಂತ ಆಘಾತಕಾರಿ ಸುದ್ದಿ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಿಂದ ಹೊರಬಿದ್ದಿದೆ. ಇಲ್ಲಿ ಕೆಲಸ ಮಾಡುತ್ತಿರುವ ಒಟ್ಟು 10 ಮಂದಿ ಮೈದಾನ ಸಿಬಂದಿಗೆ ಹಾಗೂ 6 ಮಂದಿ ಕಾರ್ಯಕ್ರಮ ವ್ಯವಸ್ಥಾಪಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಐಪಿಎಲ್ ಹಿನ್ನೆಲೆಯಲ್ಲಿ ಮೈದಾನದ ಸಿಬಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು ಈ ವೇಳೆ ಸೋಂಕು ಪತ್ತೆಯಾಗಿದೆ.
ಇವರನ್ನು ಐಸೊಲೇಶನ್ನಲ್ಲಿ ಇರಿ ಸಲಾಗಿದೆ. ಮೈದಾನ ಸಿಬಂದಿ ಸಾಮಾನ್ಯವಾಗಿ ಪ್ರತೀ ದಿನ ಮನೆಯಿಂದ ರೈಲಿನಲ್ಲಿ ಬರುತ್ತಿದ್ದರು. ಆಗ ಕೆಲವರಿಗೆ ಸೋಂಕು ತಗುಲಿರಬಹುದು ಎಂದು ಭಾವಿಸಲಾಗಿದೆ. ಇಲ್ಲಿ ನಡೆಯುವ ಐಪಿಎಲ್ ಪಂದ್ಯ ಮುಕ್ತಾಯಗೊಳ್ಳುವವರೆಗೆ ಇವರೆಲ್ಲರಿಗೂ ಕ್ರೀಡಾಂಗಣದಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಆತಂಕ ಅಗತ್ಯವಿಲ್ಲ
“ತಂಡಗಳ ಆಟಗಾರರೆಲ್ಲ ಈಗಾಗಲೇ ಜೈವಿಕ ಸುರಕ್ಷಾ ವಲಯದಲ್ಲಿದ್ದಾರೆ. ಅಲ್ಲದೇ ವಾಂಖೇಡೆಯಲ್ಲಿ ಯಾವುದೇ ಆಟಗಾರರಿಲ್ಲ. ಎಲ್ಲರೂ ಬ್ರೆಬೋರ್ನ್ ಸ್ಟೇಡಿಯಂ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಡಿ.ವೈ. ಪಾಟೀಲ್ ಸ್ಟೇಡಿಯಂಗಳಲ್ಲಿದ್ದಾರೆ. ಹೀಗಾಗಿ ವಾಂಖೇಡೆಯಲ್ಲಿ ನಡೆಯುವ ಪಂದ್ಯಗಳ ಬಗ್ಗೆ ಯಾವುದೇ ಆತಂಕ ಪಡಬೇಕಿಲ್ಲ. ವೇಳಾಪಟ್ಟಿಯಂತೆ ಟೂರ್ನಿ ಆರಂಭಿಸಲು ನಾವು ಸಿದ್ಧರಿದ್ದೇವೆ’ ಎಂದು ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಂಖೇಡೆಯಲ್ಲಿ ಒಟ್ಟು 10 ಪಂದ್ಯಗಳು ನಡೆಯಲಿವೆ.
ಒಂದು ವೇಳೆ ಮುಂಬಯಿಯಲ್ಲಿ ಕೋವಿಡ್ ಕೇಸ್ ತೀವ್ರ ಹೆಚ್ಚಳಗೊಂಡರೆ ಇಂದೋರ್ ಮತ್ತು ಹೈದರಾ ಬಾದನ್ನು ಮೀಸಲು ತಾಣವನ್ನಾಗಿ ಇರಿಸಿಕೊಳ್ಳಲಾಗಿದೆ.
ಅಕ್ಷರ್ ಪಟೇಲ್ಗೆ ಪಾಸಿಟಿವ್
ಐಪಿಎಲ್ ಆಟಗಾರರ ಮೇಲೂ ಕೊರೊನಾ ದಾಳಿ ಮುಂದುವರಿದಂತಿದೆ. ಕೆಕೆಆರ್ನ ನಿತೀಶ್ ರಾಣಾ ಬಳಿಕ ಡೆಲ್ಲಿ ತಂಡದಲ್ಲೂ ಕೊರೊನಾ ಪ್ರತ್ಯಕ್ಷವಾಗಿದೆ. ಆಲ್ರೌಂಡರ್ ಅಕ್ಷರ್ ಪಟೇಲ್ಗೆ ಕೊರೊನಾ ಸೋಂಕು ತಗುಲಿದೆ.
“ದುರದೃಷ್ಟವಶಾತ್ ಅಕ್ಷರ್ ಪಟೇಲ್ ಅವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಅವರೀಗ ಐಸೊಲೇಶನ್ನಲ್ಲಿ¨ªಾರೆ. ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಶೀಘ್ರದಲ್ಲಿ ಗುಣಮುಖರಾಗಿ ಮತ್ತೆ ತಂಡ ಸೇರುವ ವಿಶ್ವಾಸವಿದೆ’ ಎಂದು ಪ್ರಾಂಚೈಸಿ ತಿಳಿಸಿದೆ.
ಚೆನ್ನೈ ತಂಡದಲ್ಲೂ ಕೇಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರೊಬ್ಬರಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ. ಸಿಎಸ್ಕೆಯ ತಾಂತ್ರಿಕ ವಿಭಾಗದ ಸದಸ್ಯರೊಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ. ಸೋಂಕಿತ ವ್ಯಕ್ತಿ ಯಾವುದೇ ಆಟಗಾರರ ಅಥವಾ ತಂಡ ಸಿಬಂದಿಯ ಸಂಪರ್ಕ ಹೊಂದಿಲ್ಲ ಎಂದು ಸಿಎಸ್ಕೆ ಪ್ರಾಂಚೈಸಿ ಖಾತ್ರಿಪಡಿಸಿದೆ.