ಕೋವಿಡ್ ಪ್ರಕರಣ ಹೆಚ್ಚಳ : ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಸಿಎಂ ಸೂಚನೆ
Team Udayavani, May 25, 2021, 9:57 PM IST
ಬೆಂಗಳೂರು: ಹಳ್ಳಿಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ನಿಗಾ ಇಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ.
ಮಂಗಳವಾರ ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ -19 ನಿಯಂತ್ರಣದ ಕುರಿತು ಚರ್ಚೆ ನಡೆಸಿದ ಬಳಿಕ ಕೆಲ ಗ್ರಾಮಗಳಲ್ಲಿ ಜನತೆ ಕೊರೊನಾ ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು ಕೇಳಿಬರುತ್ತಿದೆ. ಇವರ ಮನವೊಲಿಕೆ ಮಾಡಿ ಪರೀಕ್ಷೆ ನಡೆಸಬೇಕು. ಹಾಗೆಯೇ, ಗ್ರಾಮಗಳಲ್ಲಿ ಮನೆಯಲ್ಲೇ ಐಸೋಲೇಶನ್ ಮಾಡಿಕೊಳ್ಳಲು ಅವಕಾಶ ನೀಡದೇ, ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ನಗರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು ಇದೇ ರೀತಿ ಕಠಿಣ ನಿಯಮಗಳನ್ನು ತಪ್ಪದೆ ಜಾರಿಗೆ ತರಬೇಕು ಎಂದೂ ಸೂಚಿಸಿದರು.
ಬ್ಲಾಕ್ ಫಂಗಸ್ಗೆ ಈಗಾಗಲೇ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ತೀರ್ಮಾನಿಸಿದ್ದು ಅದಕ್ಕೆ ಬೇಕಾಗುವ ಔಷಧವನ್ನು ಖರೀದಿಸಲು ಸೂಚಿಸಿದರು. ಹೊಸ ಡಿಸ್ಚಾರ್ಜ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಆಸ್ಪತ್ರೆಗಳಿಗೆ ತಿಳಿಸಬೇಕು ಎಂದು ಸಿಎಂ ಸೂಚನೆ ನೀಡಿದರು.
ಇದನ್ನೂ ಓದಿ :ಮೇ 29, 30ರಂದು ಬೆಳಗಾವಿ ಸಂಪೂರ್ಣ ಲಾಕ್ ಡೌನ್ ಘೋಷಣೆ : ಜಿಲ್ಲಾಧಿಕಾರಿ ಆದೇಶ
ಮೈಕ್ರೋ ಕಂಟೈನ್ಮೆಂಟ್ ವಲಯ
ಕೊರೊನಾ ಪ್ರಮಾಣ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶದಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯ ನಿರ್ಮಾಣ ಮಾಡುವ ಮೂಲಕ ಕೋವಿಡ್ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದು, ಮೈಕ್ರೋ ಕಂಟೈನ್ಮೆಂಟ್ ವಲಯ ಸ್ಥಾಪಿಸುವ ಜವಾಬ್ದಾರಿಯನ್ನು ಪಿಡಿಓ, ತಾಲೂಕು ಆರೋಗ್ಯ ಅಧಿಕಾರಿ ಮತ್ತು ಪೊಲೀಸರಿಗೆ ವಹಿಸಲಾಗಿದೆ ಎಂದರು.
ಕೋವಿಡ್ ಸೋಂಕಿತರು ಯಾವ ಗ್ರಾಮ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಆ ಗ್ರಾಮಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್ ಗಳನ್ನು ನಿರ್ಮಿಸಲಾಗುವುದು. ಈ ರೀತಿ ಜೋನ್ ನಿರ್ಮಿಸದ ಹೊರತು ಕೋವಿಡ್ ಹರಡುವುದನ್ನು ನಿಲ್ಲಿಸಲು ಗ್ರಾಮಾಂತರ ಪ್ರದೇಶದಲ್ಲಿ ಅಸಾಧ್ಯ. ಹೀಗಾಗಿ ಈ ಜೋನ್ಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ತಪಾಸಣೆ ನಡೆಸುವಂತೆ ವೈದ್ಯರಿಗೆ ಆದೇಶ ನೀಡಲಾಗಿದೆ. ಸೋಂಕಿತರಿಗೆ ವಿಟಮಿನ್-ಸಿ, ಜಿಂಕ್ ಸೇರಿದಂತೆ ಕೋವಿಡ್ಗೆ ನೀಡಲಾಗುವ ಎಲ್ಲಾ ಔಷದೋಪಚಾರವನ್ನು ನೀಡಲಾಗುವುದು. ಪ್ರಾಥಮಿಕ ಮಾಹಿತಿಯನ್ನು ಕಡ್ಡಾಯವಾಗಿ ಆರ್ಟಿಪಿಸಿಆರ್ ಮತ್ತು ಆರ್ಎಟಿ ಟೆಸ್ಟಿಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದರು.
ಬುಧವಾರ ಆಯ್ದ ಗ್ರಾಪಂಗಳ ಜತೆ ಸಿಎಂ ಸಂವಾದ
ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿರುವ ರಾಜ್ಯದ ಆಯ್ದ ಗ್ರಾಮಪಂಚಾಯಿತಿಗಳ ಅಧ್ಯಕ್ಷರ ಜತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಮುಖ್ಯಮಂತ್ರಿಗಳು ಗ್ರಾಮಾಂತರ ಪ್ರದೇಶದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಸಿಎಂ ಅವಲೋಕನ ಮಾಡಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.