ಟೀಕಿಸಿದ ಕ್ರಿಕೆಟ್ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್ ಚಹರ್ !
Team Udayavani, Apr 18, 2021, 6:55 AM IST
ಮುಂಬಯಿ: ಚೆನ್ನೈ ತಂಡದ ಮಧ್ಯಮ ವೇಗಿ ದೀಪಕ್ ಚಹರ್ ತಮ್ಮ ಪಂದ್ಯಶ್ರೇಷ್ಠ ಗೌರವವನ್ನು ಟೀಕಿಸಿದ ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ಅರ್ಪಿಸಿದ್ದಾರೆ!
ಶುಕ್ರವಾರದ ಪಂದ್ಯದಲ್ಲಿ ಚಹರ್ 13ಕ್ಕೆ 4 ವಿಕೆಟ್ ಉಡಾಯಿಸಿ ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದ್ದರು. ಇದರಲ್ಲಿ 3 ವಿಕೆಟ್ಗಳನ್ನು ಪವರ್ ಪ್ಲೇ ಆವಧಿಯಲ್ಲೇ ಉಡಾಯಿಸಿದ್ದರು. ಅಗರ್ವಾಲ್, ಗೇಲ್ ಮತ್ತು ಪೂರಣ್ ಅವರ ಬಿಗ್ ವಿಕೆಟ್ ಇದರಲ್ಲಿ ಸೇರಿತ್ತು. ಒಂದು ಮೇಡನ್ ಓವರ್ ಸೇರಿದಂತೆ ಒಟ್ಟು 18 ಡಾಟ್ ಬಾಲ್ ಎಸೆದದ್ದು ಚಹರ್ ಸಾಧನೆ.
ಪಂದ್ಯದ ಬಳಿಕ ತಂಡದ ಸಹ ಆಟಗಾರ ಶಾರ್ದೂಲ್ ಠಾಕೂರ್ ಜತೆ ನಡೆಸಿದ ಚಾಟ್ ಶೋ ಒಂದರ ವೇಳೆ ದೀಪಕ್ ಚಹರ್ ಸ್ವಾರಸ್ಯಕರ ಘಟನೆಯೊಂದನ್ನು ಹೇಳಿದರು.
ಸಾಮಾನ್ಯವಾಗಿ ಚಹರ್ ಕ್ರಿಕೆಟ್ ಅಭಿಮಾನಿಗಳು ಕಳುಹಿಸುವ ಪ್ರತಿಯೊಂದು ಸಂದೇಶವನ್ನೂ ಓದುತ್ತಾರೆ. ಡೆಲ್ಲಿ ಎದುರಿನ ಮೊದಲ ಪಂದ್ಯದಲ್ಲಿ ವಿಕೆಟ್ ಉರುಳಿಸಲು ವಿಫಲರಾದಾಗ ಅಭಿಮಾನಿಯೊಬ್ಬ ವ್ಯಂಗ್ಯ ಧಾಟಿಯಲ್ಲಿ ಮೆಸೇಜ್ ಹಾಕಿದ್ದ.
“ನೀವು ಅತ್ಯುತ್ತಮ ಬೌಲರ್ ನಿಜ. ಆದರೆ ನನ್ನ ಕೋರಿಕೆ ಏನೆಂದರೆ, ದಯವಿಟ್ಟು ನೀವು ಮುಂದಿನ ಪಂದ್ಯದಲ್ಲಿ ಆಡಬೇಡಿ’ ಎಂದಿದ್ದ. ಚಹರ್ ಈ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವವನ್ನು ಅರ್ಪಿಸಿದ್ದಾರೆ!
“ಒಬ್ಬ ಆಟಗಾರನ ವೈಫಲ್ಯವನ್ನು ಟೀಕಿಸುವ ಬದಲು ಆತನನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು’ ಎಂದೂ ದೀಪಕ್ ಚಹರ್ ಈ ಸಂದರ್ಭದಲ್ಲಿ ವಿನಂತಿಸಿಕೊಂಡರು.
ಕಪ್ತಾನ ಧೋನಿ ಪ್ರಶಂಸೆ
ದೀಪಕ್ ಚಹರ್ ಸಾಧನೆಯನ್ನು ನಾಯಕ ಎಂ.ಎಸ್. ಧೋನಿ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. “ಚಹರ್ ಅತ್ಯುತ್ತಮ ಡೆತ್ ಓವರ್ ಬೌಲರ್ ಆಗಿ ರೂಪುಗೊಳ್ಳುತ್ತಿದ್ದಾರೆ. ಆದರೆ ಇಲ್ಲಿ ಅವರಿಗೆ ಪಿಚ್ ಬಹಳ ಸಹಕರಿಸುತ್ತಿದ್ದುದರಿಂದ ಆರಂಭದಲ್ಲೇ ಸತತ 4 ಓವರ್ ನೀಡಲು ನಿರ್ಧರಿಸಲಾಯಿತು. ಚಹರ್ ಇದರ ಭರಪೂರ ಲಾಭವೆತ್ತಿದರು’ ಎಂದರು.