“ದುರ್ನಡತೆ’ ದೂರು: ಕರಡು ನಿಯಮಗಳಿಗೆ ಆಕ್ಷೇಪ
ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ವಿಚಾರಣೆ ?
Team Udayavani, Aug 6, 2022, 6:35 AM IST
ಬೆಂಗಳೂರು: ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಅಧಿಕಾರ ದುರುಪಯೋಗ, ಕರ್ತವ್ಯ ದಲ್ಲಿ ನಿರ್ಲಕ್ಷ್ಯ, ದುರ್ನಡತೆ ಆರೋಪ ಗಳ ಬಗ್ಗೆ ದೂರು ಸ್ವೀಕಾರ ಹಾಗೂ ವಿಚಾರಣೆಗೆ ಸಂಬಂಧಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹೊರಡಿಸಿರುವ ಕರಡು ನಿಯಮಗಳಿಗೆ ಆಕ್ಷೇಪ ವ್ಯಕ್ತವಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮ-1993ರ ಪ್ರಕರಣ 12ಎಲ್, 43ಎ ಮತ್ತು 38ರ ಉಪ ಪ್ರಕರಣಗಳಿಗೆ ಪೂರಕವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ (ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರನ್ನು ತೆಗೆದುಹಾಕುವ ಪ್ರಕ್ರಿಯೆ) ನಿಯಮಗಳು-2022ರ ಕರಡನ್ನು ಇಲಾಖೆ ಇತ್ತೀಚೆಗೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು 30 ದಿನಗಳ ಅವಕಾಶ ನೀಡಿದೆ.
ಕರಡು ನಿಯಮದಲ್ಲೇನಿದೆ?
ಕರಡು ನಿಯಮ ಪ್ರಕಾರ, ಅಧ್ಯಕ್ಷ-ಉಪಾಧ್ಯಕ್ಷ ಅಥವಾ ಸದಸ್ಯರ ವಿರುದ್ಧ ಅಧಿಕಾರ ದುರ್ಬ ಳಕೆ, ಕರ್ತವ್ಯದಲ್ಲಿ ನಿರ್ಲಕ್ಷ್ಯ ಅಥವಾ ದುರ್ನಡತೆ ಬಗ್ಗೆ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಯು ತಾನು ನೇರವಾಗಿ ಸ್ವೀಕರಿಸಿದ ದೂರಿನ 30 ದಿನಗಳಲ್ಲಿ ತನಿಖೆ ಕೈಗೊಂಡು ಜಿ.ಪಂ. ಸಿಇಒಗೆ ವರದಿ ಸಲ್ಲಿಸಬೇಕು. ಈ ನಿಯಮಗಳು ಜಾರಿಗೆ ಬಂದಲ್ಲಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸದಸ್ಯರಿಗೆ ಅನಗತ್ಯವಾಗಿ ಕಿರುಕುಳ ನೀಡಲು ಅಸ್ತ್ರವೊಂದನ್ನು ಅಧಿಕಾರಿಗಳ ಕೈಗೆ ಕೊಟ್ಟಂತಾಗುತ್ತದೆ ಎಂಬುದು ಗ್ರಾ.ಪಂ. ಜನಪ್ರತಿನಿಧಿಗಳ ವಾದ.
ಅಧಿಕಾರಿಗಳ ಮೂಲಕ ಸರಕಾರ ಪಂಚಾಯತ್ಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಉದ್ದೇಶ ಹೊಂದಿದಂತಿದೆ. ಇದು ಪಂಚಾಯತ್ಗಳ ಅಸ್ತಿತ್ವ ಮತ್ತು ಸದಸ್ಯರ ಘನತೆಗೆ ಧಕ್ಕೆ ತರಲಿದೆ. ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು.
– ಸತೀಶ್ ಕಾಡಶೆಟ್ಟಿಹಳ್ಳಿ,
ಅಧ್ಯಕ್ಷರು-ಕರ್ನಾಟಕ ರಾಜ್ಯ ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ.