ಬಿಸಿಯೂಟದಲ್ಲಿ ಮೊಟ್ಟೆ ಬೇಡ : ಸಿಎಂಗೆ ನೂರಾರು ಮಠಾಧೀಶರ ಆಗ್ರಹ
Team Udayavani, Dec 6, 2021, 11:43 AM IST
ಭಾಲ್ಕಿ: ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮಕ್ಕಳಿಗೆ ಅನ್ನದ ಜೊತೆಗೆ ಮೊಟ್ಟೆ ಕೊಡುತ್ತಿರುವ ಕ್ರಮ ಸರಿಯಲ್ಲ,ತಕ್ಷಣವೇ ಇದನ್ನು ನಿಲ್ಲಿಸಬೇಕು ಎಂದು ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ| ಬಸವಲಿಂಗ ಪಟ್ಟದೇವರು ಆಗ್ರಹಿಸಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೋಮವಾರ ನಡೆದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ವೇದಿಕೆಯ ಮೇಲೆ ಸನ್ಮಾನಿಸಿ, ಕಲ್ಯಾಣ ಕರ್ನಾಟಕದ ಭಾಗದ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಚಿಕ್ಕಮಕ್ಕಳಿಗೆ ವ್ಯವಹಾರ ಜ್ಞಾನ ಇರುವುದಿಲ್ಲ, ಕೆಲವು ಮಕ್ಕಳು ಬೆಳ್ಳಗಿನ ಮೊಟ್ಟೆ ತಿನ್ನುವುದನ್ನು ನೋಡಿದ ಬೇರೆ ಮಕ್ಕಳಿಗೆ ಕಸಿವಿಸಿ ಯಾಗುತ್ತದೆ. ಮಕ್ಕಳ ಹತ್ತಿರ ಇಂತಹ ಭೇದಭಾವ ಮಾಡದೇ ಎಲ್ಲರಿಗು ಇಷ್ಟವಾಗುವ, ಕಾಳು, ಬಾಳೆಹಣ್ಣುಗಳನ್ನು ಕೊಡುವ ಕಾರ್ಯವಾಗಬೇಕು ಎಂದು ಹೇಳಿದರು. ನಂತರ ನೂರಾರು ಮಠಾಧೀಶರು ಬರೆದುಕೊಟ್ಟ ಮೊಟ್ಟೆ ನಿಲ್ಲಿಸುವ ಬೇಡಿಕೆಯ ಮನವಿ ಪತ್ರವನ್ನು ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಕೇಂದ್ರ ಮಂತ್ರಿ ಭಗವಂತ ಖೂಬಾ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ಇದ್ದರು.