ಕರಾವಳಿಯಾದ್ಯಂತ ಈಸ್ಟರ್ ಸಂಡೆಯ ಸಡಗರ
Team Udayavani, Apr 5, 2021, 4:00 AM IST
ಉಡುಪಿ/ ಮಂಗಳೂರು/ ಪುತ್ತೂರು: ಕ್ರೈಸ್ತರ ಪ್ರಮುಖ ಹಬ್ಬವೆನಿಸಿದ ಯೇಸು ಕ್ರಿಸ್ತರು ಶಿಲುಬೆಗೇರಿ ಮೂರನೇ ದಿನ ಪುನರುತ್ಥಾನಗೊಂಡ ಈಸ್ಟರ್ ಹಬ್ಬ (ಪಾಸ್ಕ ಜಾಗರಣೆ), ಈಸ್ಟರ್ ಸಂಡೆಯನ್ನು ಕ್ರೈಸ್ತರು ಕರಾವಳಿಯಾದ್ಯಂತ ಶನಿವಾರ ರಾತ್ರಿ ಆಚರಿಸಿದರು. ರವಿವಾರ ಕ್ರೈಸ್ತರು ಮನೆಗಳಲ್ಲಿ ಹಬ್ಬದ ಊಟವನ್ನು ಸವಿದರು.
ಶನಿವಾರ ಮಧ್ಯರಾತ್ರಿ 12 ಗಂಟೆವರೆಗೂ ವಿವಿಧ ಚರ್ಚುಗಳಲ್ಲಿ ಪೂಜೆಗಳು ನಡೆದವು. ಈ ಹಿಂದೆ ತಡವಾಗಿ ಆರಂಭಗೊಂಡು ರವಿವಾರ ಬೆಳಗ್ಗಿನವರೆಗೆ ನಡೆಯುತ್ತಿದ್ದರೆ ಈಗ ಕೊರೊನಾ ಮತ್ತಿತರ ಕಾರಣಗಳಿಂದ ಶನಿವಾರ ಮಧ್ಯರಾತ್ರಿಯೊಳಗೆ ಪೂಜೆಯನ್ನು ಮುಗಿಸಲಾಯಿತು.
ಮಂಗಳೂರು ಧರ್ಮಪ್ರಾಂತ
ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ಈಸ್ಟರ್ ಹಬ್ಬವನ್ನು ಕ್ರೈಸ್ತ ಸಮುದಾಯದವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕೊರೊನಾ ಮಾರ್ಗಸೂಚಿ ಪಾಲಿಸಿ ಚರ್ಚ್ಗಳಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಶನಿವಾರ ರಾತ್ರಿ ಮತ್ತು ರವಿವಾರ ಬೆಳಗ್ಗೆ ಹಬ್ಬದ ಬಲಿಪೂಜೆಗಳು ನೆರವೇರಿದವು. ಮಂಗಳೂರಿನ ಬಿಷಪ್ ರೈ|ರೆ| ಡಾ| ಪೀಟರ್ ಪಾವ್É ಸಲ್ಡಾನ್ಹಾ ಅವರು ಪುತ್ತೂರು ತಾಲೂಕಿನ ನಿಡ³ಳ್ಳಿ ಚರ್ಚ್ನಲ್ಲಿ ಬಲಿಪೂಜೆ ನೆರವೇರಿಸಿದರು. ವಿವಿಧೆಡೆ ಚರ್ಚ್ ಗಳಲ್ಲಿ ಆಯಾಯಾ ಧರ್ಮಗುರುಗಳ ನೇತೃತ್ವದಲ್ಲಿ ಬಲಿಪೂಜೆ ನಡೆಯಿತು. ಶನಿವಾರ ರಾತ್ರಿ ಆಶೀರ್ವಚನ ಮಾಡಿದ ಪವಿತ್ರ ಜಲವನ್ನು ರವಿವಾರ ಭಕ್ತರಿಗೆ ವಿತರಿಸಲಾಯಿತು. ಕ್ರೈಸ್ತ ಬಾಂಧವರು ಮನೆಗಳಲ್ಲಿ ಹಬ್ಬದ ಊಟ ಸವಿದರು.
ಉಡುಪಿ ಧರ್ಮಪ್ರಾಂತ
ಉಡುಪಿ ಬಿಷಪ್ ರೈ| ರೆ| ಡಾ| ಜೆರಾಲ್ಡ… ಐಸಾಕ್ ಲೋಬೊ ನೇತೃತ್ವದಲ್ಲಿ ಶನಿವಾರ ರಾತ್ರಿ ಪಾಸ್ಕ ಜಾಗರಣೆ (ಈಸ್ಟರ್ ವಿಜಿಲ…) ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ನಲ್ಲಿ ಜರಗಿತು.
ಬೆಳ್ತಂಗಡಿ ಧರ್ಮಪ್ರಾಂತ
ಬೆಳ್ತಂಗಡಿ: ಇಲ್ಲಿನ ಸೈಂಟ್ ಲಾರೆನ್ಸ್ ಕೆಥೆಡ್ರಲ್ನಲ್ಲಿ ಯೇಸು ಕ್ರಿಸ್ತರ ಪುನರುತ್ಥಾನದ ಈಸ್ಟರ್ ಹಬ್ಬವನ್ನು ಶನಿವಾರ ರಾತ್ರಿ ಆಚರಿಸಲಾಯಿತು. ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಲಾರೆನ್ಸ್ ಮುಕ್ಕುಯಿ ಪೂಜಾ ವಿಧಿ ನೆರವೇರಿಸಿದರು. ಧರ್ಮಪ್ರಾಂತದ ಚಾನ್ಸೆಲರ್ ವಂ| ಲಾರೆನ್ಸ್ ಪನೋಳಿಲ್ ಹಬ್ಬದ ಸಂದೇಶ ನೀಡಿದರು.
ವಂ| ಅಬ್ರಹಾಂ ಪಟ್ಟೇರಿಲ್, ವಂ| ಕುರಿಯಕೋಸ್ ವೆಟ್ಟುವರಿ, ವಂ| ಜೋಸೆಫ್ ವಾಲುಮಿಲ್, ವಂ| ತೋಮಸ್ ಕನ್ನಂಕಲ್ ಉಪಸ್ಥಿತರಿದ್ದರು.
ಈಸ್ಟರ್ ವಿಜಿಲ್ ಆಚರಣೆ
ಕ್ರೈಸ್ತರು ಹೊಸ ಬಟ್ಟೆ ತೊಟ್ಟು ಚರ್ಚ್ಗಳಲ್ಲಿ ನಡೆದ ಈಸ್ಟರ್ ವಿಜಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪಾಸ್ಕ ಜಾಗರಣೆಯ ಧಾರ್ಮಿಕ ವಿಧಿವಿಧಾನಗಳು ಚರ್ಚ್ಗಳಲ್ಲಿ ಧರ್ಮಗುರುಗಳು ಹೊಸ ಬೆಂಕಿಯನ್ನು ಆಶೀರ್ವದಿಸುವ ಮೂಲಕ ಆರಂಭಗೊಂಡವು. ಆಶೀರ್ವದಿಸಿದ ಹೊಸ ಬೆಂಕಿಯಿಂದ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲನ್ನು ಹಚ್ಚಿ ಮೆರವಣಿಗೆಯಲ್ಲಿ ಕೊಂಡೊಯ್ದು ಚರ್ಚ್ನಲ್ಲಿ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಹಳೆ ಒಡಬಂಡಿಕೆಯ ದೇವರ ವಾಕ್ಯವನ್ನು ಪಠಿಸಿದ ಬಳಿಕ ಧರ್ಮಗುರುಗಳು ಹೊಸ ನೀರಿನ ಆಶೀರ್ವಚನ ನಡೆಸಿ, ಭಕ್ತರ ಮೇಲೆ ಹೊಸ ನೀರನ್ನು ಪ್ರೋಕ್ಷಿಸಿದರು. ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ಧರ್ಮಗುರುಗಳು ವಿವರಿಸಿದರು.