ಸಾಗರೋತ್ತರ ಕನ್ನಡಿಗರೊಂದಿಗೆ ಈಶ್ವರ್ ಖಂಡ್ರೆ ಸಂವಾದ
Team Udayavani, Jul 25, 2020, 11:11 PM IST
ಬೆಂಗಳೂರು: ವಿವಿಧ ದೇಶಗಳಲ್ಲಿ ನೆಲೆಸಿರುವ ಸಾಗರೋತ್ತರ ಕನ್ನಡಿಗರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಂವಾದ ನಡೆಸಿದರು.
ಜಗತ್ತಿನ ವಿವಿಧ ದೇಶಗಳಾದ ಅಮೆರಿಕ, ಜರ್ಮನಿ, ಯುಎಇ, ಇಟಲಿ, ಆಸ್ಟ್ರೇಲಿಯಾ ದೇಶಗಳಲ್ಲಿ ವಾಸವಾಗಿರುವ ಕನ್ನಡಿಗರೊಂದಿಗೆ ಗೂಗಲ್ ಮೀಟ್ನಲ್ಲಿ ಸಂವಾದ ನಡೆಸಿದ ಅವರು, ವಿದೇಶಗಳಿಗೆ ತೆರಳಿ ಅಲ್ಲಿಯೂ ಕನ್ನಡವನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ. ಇದುವರೆಗೂ ಇಲ್ಲಿ ಕಲಿತು ವಿದೇಶಗಳಿಗೆ ತೆರಳುವವರನ್ನು ಸ್ವಾರ್ಥಿಗಳು, ಅಥವಾ ಪ್ರತಿಭಾ ಪಲಾಯನ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಪ್ರತಿಭಾ ಫಲಶ್ರುತಿ ಎಂದು ಹೇಳಬಹುದು ಎಂದು ಹೇಳಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿ ನಾಡಿನ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುತ್ತಿರುವುದು ಮೆಚ್ಚುವ ಸಂಗತಿ. ನಾಡಿನಿಂದ ಹೊರ ಹೋದವರಿಗೆ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಾಗುತ್ತದೆ. ಅದಕ್ಕೆ ಸಾಗರೋತ್ತರ ಕನ್ನಡಿಗರ ಒಕ್ಕೂಟವೇ ಸಾಕ್ಷಿ. ವಿದೇಶಗಳಲ್ಲಿಯೂ ಕನ್ನಡಿಗರು ಸಂಘಟನೆ ಮಾಡಿಕೊಂಡು ನಾಟಕ, ಸಂಗೀತ, ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದು, ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದಾಗ ಸಹಾಯ ಹಸ್ತ ಚಾಚುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಸಂವಾದದಲ್ಲಿ ಸಾಗರೋತ್ತರ ಕನ್ನಡಿಗರ ಸಂಘದ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ, ಗೋಪಾಲ ಕುಲಕರ್ಣಿ, ರವಿ ಮಹದೇವ, ಹನುಮೇಗೌಡ ಪಾಲ್ಗೊಂಡಿದ್ದರು.