ಇರಿಸು ಮುರಿಸು ಆಗುತ್ತದೆ ಎಂದು ಈಶ್ವರಪ್ಪ ರಾಜೀನಾಮೆ : ಸಿಎಂ ಸ್ಪಷ್ಟನೆ
ಕಾಂಗ್ರೆಸ್ ನಾಯಕರ ಬೇಡಿಕೆಗಾಗಿ ರಾಜೀನಾಮೆ ನೀಡಿಲ್ಲ, ವರಿಷ್ಠರ ಒತ್ತಡವೂ ಇರಲಿಲ್ಲ
Team Udayavani, Apr 14, 2022, 7:09 PM IST
ಬೆಂಗಳೂರು: ಈಶ್ವರಪ್ಪ ಅವರು ಬಹಳಷ್ಟು ಜನರಿಗೆ ಇರಿಸು ಮರಿಸು ಆಗುತ್ತದೆ ಎಂಬ ಕಾರಣಕ್ಕೆ ಸ್ವಂತ ನಿರ್ಧಾರದಿಂದ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, ನನ್ನ ಹತ್ತಿರ ಇಂದು ಸಾಯಂಕಾಲ ಮಾತನಾಡಿದ್ದರು. ಬಹಳಷ್ಟು ಯೋಚನೆ ಮಾಡಿ, ನನಗೆ ನೈತಿಕತೆ ಇದೆ. ಎಳ್ಳಿನ ಕಾಳಿನಷ್ಟು ತಪ್ಪಿಲ್ಲ , ಈಗ ಈ ವಿಚಾರವನ್ನು ಇಟ್ಟುಕೊಂಡು ಮುಂದುವರಿದರೆ ಬಹಳಷ್ಟು ಜನರಿಗೆ ಇರಿಸು ಮುರಿಸು ಆಗುತ್ತದೆ. ಆದಷ್ಟು ಬೇಗನೆ ಇದರ ತನಿಖೆ ಮುಗಿಸಿ, ಸತ್ಯ ಹೊರಗೆ ಬರುತ್ತದೆ. ಎಲ್ಲಾ ಆರೋಪಗಳಿಂದ ಮುಕ್ತನಾಗಿ ಹೊರಗೆ ಬರುತ್ತೇನೆ ಎಂದು ಅವರು ಹೇಳಿದ್ದರು. ಆ ಪ್ರಕಾರವೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅವರು ನಾಳೆ ಸಂಜೆ ಭೇಟಿಯಾಗಿ ರಾಜೀನಾಮೆ ಕೊಡಲಿದ್ದಾರೆ ಎಂದರು.
ಇದನ್ನೂ ಓದಿ : ರಾಜೀನಾಮೆ ನಮಗೆ ಮುಖ್ಯವಲ್ಲ, ಮೊದಲು ಈಶ್ವರಪ್ಪ ಬಂಧನವಾಗಬೇಕು: ಡಿಕೆಶಿ
ಕಾಂಗ್ರೆಸ್ ನಾಯಕರ ಬೇಡಿಕೆಯಿಂದ ರಾಜೀನಾಮೆ ಕೊಟ್ಟಿಲ್ಲ ಅವರ ನೈತಿಕತೆಯಿಂದ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಹೈಕಮಾಂಡ್ ಒತ್ತಡವೂ ಇರಲಿಲ್ಲ ನಾವು ನಡೆದ ವಿದ್ಯಮಾನ ವರಿಷ್ಠರಿಗೆ ತಿಳಿಸಿದ್ದೇವೆ, ಸ್ವ ನಿರ್ಣಯದಿಂದ ಈಶ್ವರಪ್ಪ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸಿಎಂ ಹೇಳಿದರು.