ಕಾಂಗ್ರೆಸ್ ಭಿನ್ನಮತ ಸ್ಫೋಟ: ಬ್ಯಾನರ್ ನಲ್ಲಿ ಮಾಜಿ ಸಚಿವರ ಫೋಟೋ ಮಾಯ
Team Udayavani, Nov 29, 2021, 3:36 PM IST
ಗಂಗಾವತಿ:ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪರಿಷತ್ ಚುನಾವಣೆ ಕಾಂಗ್ರೆಸ್ ಪ್ರಚಾರ ಸಭೆಯ ಬ್ಯಾನರ್ ನಲ್ಲಿ ಮಾಜಿ ಸಚಿವ ಎಂ ಮಲ್ಲಿಕಾರ್ಜುನ ನಾಗಪ್ಪ ಅವರ ಪೋಟೊ ಮಾಯವಾಗಿದ್ದ ರಿಂದ ಅವರು ಕಾಂಗ್ರೆಸ್ ಪರ ಪ್ರಚಾರ ಸಭೆಯಿಂದ ದೂರ ಉಳಿದಿದ ಘಟನೆ ಜರುಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿಯ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ನಡುವೆ ಕಾಂಗ್ರೆಸ್ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ಇದ್ದು ಎಂಎಲ್ಸಿ ಚುನಾವಣೆಯ ಪ್ರಚಾರ ಸಭೆಯ ಆಯೋಜನೆಯನ್ನು ಇಕ್ಬಾಲ್ ಅನ್ಸಾರಿ ಅವರ ಆಪ್ತರು ಮಾಡಿದ್ದರಿಂದ ಮಾಜಿ ಸಚಿವ ಮಲ್ಲಿಕಾರ್ಜುನಾಗಪ್ಪ ಅವರ ಫೋಟೋವನ್ನು ಬ್ಯಾನರ್ ನಲ್ಲಿ ಹಾಕಿಸಿಲ್ಲ ಎನ್ನಲಾಗುತ್ತಿದೆ.
ಮಲ್ಲಿಕಾರ್ಜುನಾಗಪ್ಪ ಈ ಹಿಂದೆ ಹಲವು ಬಾರಿ ತಾವು ಸಹ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದರು.
ಕಾಂಗ್ರೆಸ್ ಪ್ರಚಾರ ಸಭೆಯ ಬ್ಯಾನರ್ ನಲ್ಲಿ ಮಲ್ಲಿಕಾರ್ಜುನಾಗಪ್ಪ ಪೋಟೊ ಇಲ್ಲದ ಕಾರಣ ಮಲ್ಲಿಕಾರ್ಜುನಾಗಪ್ಪ ಹಾಗೂ ಅವರ ಬೆಂಬಲಿಗರು ಸಭೆಯಿಂದ ದೂರ ಉಳಿದಿದ್ದರು . ಗಂಗಾವತಿಯ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಜೀವಂತವಾಗಿದೆ ಎಂದು ಸಾಬೀತಾದಂತಾಗಿದೆ.
ಎಲ್ಲರ ಸಹಕಾರ
ರಾಯಚೂರು ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳ ಹಿರಿಯ ಕಾಂಗ್ರೆಸ್ ಮುಖಂಡರು ಮಾಜಿ ಸಚಿವರು ಶಾಸಕರು ಸಂಸದರು ಒಗ್ಗಟ್ಟಾಗಿ ತಮ್ಮನ್ನು ಬೆಂಬಲಿಸುತ್ತಿದ್ದಾರೆ.ಮಲ್ಲಿಕಾರ್ಜುನ ನಾಗಪ್ಪ ಅವರ ಫೋಟೋ ಬ್ಯಾನರ್ ನಲ್ಲಿ ಇಲ್ಲದಿರುವ ಬಗ್ಗೆ ತಮಗೆ ಗೊತ್ತಿಲ್ಲ ಆದರೂ ಮಲ್ಲಿಕಾರ್ಜುನ ನಾಗಪ್ಪ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು ಪಕ್ಷ ಅಧಿಕಾರದಲ್ಲಿರಲಿ ಬಿಡಲಿ ಯಾವಾಗಲೂ ಅವರು ಕಾಂಗ್ರೆಸ್ ಪಕ್ಷದ ಜೊತೆ ಇದ್ದಾರೆ ತಮಗೂ ಸಹ ಆಶೀರ್ವಾದ ಮಾಡಿದ್ದಾರೆ.ಕಾರ್ಯಕ್ರಮ ಆಯೋಜನೆ ಮಾಡಿದ್ದು ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪದಾಧಿಕಾರಿಗಳು ಫೋಟೋ ಮಿಸ್ ಆಗಿರುವ ಬಗ್ಗೆ ತಮಗೆ ತಿಳಿದಿಲ್ಲ. ಸಭೆಯ ನಂತರ ಮಲ್ಲಿಕಾರ್ಜುನಾಗಪ್ಪ ಅವರಂತೆ ತಾವೂ ಸಹ ನೋ ಮಾತನಾಡಿ ಅವರ ಮನೆಗೆ ಹೋಗಿ ಬರುವುದಾಗಿ ಅಭ್ಯರ್ಥಿ ಶರಣೇಗೌಡ ಪಾಟೀಲ್ ಬಯ್ಯಾಪುರ್ ಉದಯವಾಣಿಗೆ ತಿಳಿಸಿದ್ದಾರೆ.