ಉಗ್ರರಿಬ್ಬರ ಅಂತ್ಯಕ್ರಿಯೆಯ ವೇಳೆ ಗುಂಡಿನ ದಾಳಿ: ಐವರು ಬಲಿ
Team Udayavani, Oct 13, 2021, 12:11 PM IST
ಕಾಂಗ್ ಪೊಕ್ಪಿ : ಮಣಿಪುರದ ಬಿ ಗಾಂನೊಮ್ ಪ್ರದೇಶದಲ್ಲಿ ಉಗ್ರರು ಮಂಗಳವಾರ ಗುಂಡಿನ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದು, ಕನಿಷ್ಠ ಐವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದ ಉಗ್ರರಿಬ್ಬರ ಅಂತ್ಯಕ್ರಿಯೆಯ ಸಲುವಾಗಿ ಜನರು ಗುಂಪು ಸೇರಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಪಕ್ಕದ ಗುಡ್ಡದಲ್ಲಿರುವ ಹಳ್ಳಿಗಳಿಗೆ ಓಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಕುಕಿ ರಾಷ್ಟ್ರೀಯ ವಿಮೋಚನಾ ಸೇನೆಯ(ಕೆಎನ್ಎಲ್ಎ) ಉಗ್ರರು ದಾಳಿ ನಡೆಸಿದ್ದು, ಮೂವರ ಶವಗಳನ್ನು ಪತ್ತೆ ಹಚ್ಚಲಾಗಿದ್ದು , ಇನ್ನಿಬ್ಬರು ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಐಜಿಪಿ ಲುನ್ಸೆಹ್ ಕಿಪ್ಜೆನ್ ತಿಳಿಸಿದ್ದಾರೆ.
ಅಕ್ಟೋಬರ್ 9ರಂದು ಅಸ್ಸಾಂ ರೈಫಲ್ಸ್, ಕಮಾಂಡೋಗಳು ಕಾರ್ಯಾಚರಣೆ ನಡೆಸಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದವು. ಈ ಕಾರ್ಯಾಚರಣೆಯ ಬಳಿಕ ಉಗ್ರರು ಹೊಂಚು ದಾಳಿ ನಡೆಸಿದ್ದಾರೆ.