ಅವರವರ ಪ್ರಕೃತಿಗೆ ಅನುಸರಿಸಿ ಸುಖ, ಸಂತೋಷ
Team Udayavani, Mar 18, 2021, 6:20 AM IST
ಸಂತಸ ಅಥವಾ ಮನಸಿನ ತೃಪ್ತಿ ಅಂದರೆ ಇದಮಿತ್ತಂ ಅಂತ ಹೇಳಬರುವುದಿಲ್ಲ. ಕೆಲವರಿಗೆ ಹಣ ಕೂಡಿ ಹಾಕಿ ಹಾಕಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸುವ ಆಸೆ ಯಾದರೆ? ಇನ್ನೂ ಕೆಲವರಿಗೆ ದೊಡ್ಡ ಸಾಧನೆ ಮಾಡದೆ ಪ್ರಚಾರ ಗಿಟ್ಟಿಸುವ ಗೀಳು. ಮತ್ತೆ ಕೆಲವರಿಗೆ ದೊಡ್ಡ ರಾಜಕಾರಣಿಗಳ ಸಂಗ ಮಾಡಿ ಅವರಿಗೆ ಭೋಪರಾಕು ಹಾಕುವುದೇ ಜೀವನದ ಸುಂದರ ಕ್ಷಣಗಳು. ತಿಂಡಿಪೋತರಿಗೆ ಪುಗಸಟ್ಟೆ ಹೊಟ್ಟೆ ತುಂಬಾ ತಿಂದು ತೇಗುವುದೆ ಗಮ್ಮತ್ತು. ಇನ್ನೂ ಕೆಲವು ಮಂದಿ ಚಿತ್ರಕಲೆ, ಗಾಯನ, ನೃತ್ಯ ಇತ್ಯಾದಿಗಳನ್ನು ಸುಖದ ತಾಣವಾಗಿ, ಹವ್ಯಾಸವಾಗಿ ಬೆಳೆಸಿಕೊಳ್ಳುತ್ತಾರೆ.
ಇದಲ್ಲದೆ ಇನ್ನೊಂದು ಅಪರೂಪದ ಗುಂಪು ಕೂಡ ಇದೆ. ಇವರು ಸಂತಸವನ್ನು ಅರಸಿ ಬಡಬಗ್ಗರ, ದೀನ ದಲಿತರ ಸೇವೆಯಲ್ಲಿ ತಮ್ಮ ಜೀವನದಲ್ಲಿ ಸಾರ್ಥಕ್ಯ ಕಾಣುತ್ತಾರೆ. ಆದರೆ ಈ ಕೊನೆಯ ವರ್ಗ ಮಾತ್ರ ಅಪರೂಪದ ಮತ್ತು ಅತೀ ಕಡಿಮೆ ಸಂಖ್ಯೆಯಲ್ಲಿರುವವರು. ಇವರಿಗೆ ಹಣಬಲ ಬೇಕೆಂದೇನೂ ಇಲ್ಲ. ಆದರೆ ತಮ್ಮೊಂದಿಗೆ ಸಹಕರಿಸುವ, ಸ್ಪಂದಿಸುವ ಜನಬಲವೇ ಇವರ ಆಸ್ತಿ.
ಹಾಗೆ ಲೋಕದಲ್ಲಿ ಜನರ ಸುಖ ಸಂತೋಷ ಅಳೆಯುವುದು ಅವರವರ ಪ್ರಕೃತಿಗೆ ಅನುಸರಿಸಿ ಎನ್ನದೆ ವಿಧಿ ಇಲ್ಲ.
ಆದರೆ ಇದಕ್ಕೆಲ್ಲ ವಿಪರೀತವಾಗಿ ನಾನು, ನನ್ನದು ಎಂದು ಬಗೆದು ಲೋಕ ಮುಳುಗಿದರೆ ನನಗೇನು ಎಂಬ ಭಾವ ಮೆರೆಯುವ ಸ್ವಕೇಂದ್ರಿತ, ಸ್ವಜನ ಹಿತ ಬಯಸುವ, ಸಮಾಜದ ಋಣ ನಾನೇಕೆ ತೀರಿಸಲಿ ಎಂದು ಅಹಂಕಾರದ ಮೂಟೆ ಹೊತ್ತು ಜೀವಿಸುವ ವರ್ಗ ಮಾತ್ರ ಅದೇನು ಸುಖದಿಂದ ಬಾಳುತ್ತದೋ ತಿಳಿಯದು. ಕೊನೆಗೆ ನಂದ ರಾಯನ ಬದುಕು ನರಿ, ನಾಯಿ ತಿಂದು ಹೋಯಿತು ಅಂದ ಹಾಗೆ ಇವರ ಬದುಕು.
ನಮ್ಮ ಗಳಿಕೆ ಎಂಬುದು ಸಮಾಜ ಒದಗಿಸಿದ್ದು. ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿ ಧನ ಸಂಪತ್ತು ಲಭ್ಯವಾಗುವುದು ಸುಳ್ಳಲ್ಲ. ದೇವರು ಕೆಲವೊಂದು ಮಂದಿಗೆ ಅದೇಕೋ ಉದಾರತೆ ತೋರುತ್ತಾನೆ. ಆ ಸಂದರ್ಭದಲ್ಲಿ ವ್ಯಕ್ತಿ ಅಹಂಕಾರ ಮೆರೆಯುವುದು ಸರಿಯಲ್ಲ. ತನ್ನ ಆವಶ್ಯಕತೆಗೆ ತಕ್ಕಷ್ಟು ತನ್ನದು ಉಳಿದದ್ದು ಸಮಾಜಕ್ಕೆ ಸಲ್ಲ ಬೇಕಾದದ್ದು ಎಂಬ ಮನೋಧರ್ಮ ತನ್ನದಾಗಿಸಿಕೊಂಡರೆ ಆತನ ಸಂತಸದ ಕ್ಷಣಗಳು ಹೆಚ್ಚುತ್ತವೆ. ಬಾಯಾರಿದವನಿಗೆ ನೀರು, ಹಸಿದವನಿಗೆ ಒಂದು ಹಿಡಿ ಅನ್ನ, ರೋಗದಿಂದ ಬಳಲುವ ವ್ಯಕ್ತಿಗೆ ತಕ್ಕ ಚಿಕಿತ್ಸೆ ಇತ್ಯಾದಿ ಕರ್ಮಗಳನ್ನು ಮಾಡಿ ಅದರಲ್ಲಿ ತನ್ನ ಜೀವನದ ಸಾರ್ಥಕ್ಯ ಭಾವ ಮೆರೆಯುವ ಜನರು ನಿಜವಾಗಿಯೂ ಧನ್ಯರು. ತಮ್ಮ ಬದುಕು ತಮಗಾಗಿಯೇ ಅಲ್ಲ. ಸಹಜೀವಿಗಳಿಗೂ ಅದರಲ್ಲಿ ಹಕ್ಕು ಇದೆ ಎಂಬ ಮನಸ್ಸು ನಿಜ ಅರ್ಥದಲ್ಲಿ ಶ್ರೀಮಂತಿಕೆ. ಈ ತರದ ಸಮಾಜಮುಖೀ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಬಾಳುವ ಮಂದಿ ನಿಜವಾಗಿಯೂ ದೇವರಿಗೆ ಪೂಜೆ ಪುನಸ್ಕಾರ ಮಾಡದಿದ್ದರೂ “ಮಾನವ ಸೇವೆ ಮಾಧವ ಸೇವೆ’ ಎಂಬ ಧರ್ಮ ಅನುಸರಿಸುವ ಮಹಾನ್ ಚೇತನಗಳು. ಇವರೇನೂ ತಮ್ಮ ಸತ್ಕಾರ್ಯಗಳಿಗೆ ಪ್ರತಿಯಾಗಿ ಏನೇನೂ ಅಪೇಕ್ಷೆ ಇಟ್ಟುಕೊಳ್ಳುವ ಜಾಯಮಾನದವರಲ್ಲ. ತಮ್ಮ ಕಾಯಕ ನೆರವೇರಿಸಿ ಅದರಲ್ಲೇ ತೃಪ್ತಿ, ಸಂತಸ ಪಡುವ ಮನೋಧರ್ಮದ ಶ್ರೀಮಂತರು.
ಮನುಷ್ಯ ಜೀವನದ ಉದ್ದೇಶ ಏನೆಂದು ಅರಿತು, ಸಂತೃಪ್ತಿ-ಸಂತೋಷಗಳ ನಿರ್ವಚ ನವನ್ನು ಆವಿಷ್ಕರಿಸಿದ ವ್ಯಕ್ತಿ ಹುಟ್ಟಿದ್ದು ನಿಜವಾಗಿಯೂ ಸಾರ್ಥಕ. ಯಾವುದು ಸರಿಯೋ ಅದನ್ನು ಆರಿಸಿ ತಮ್ಮ ಜೀವನಕ್ಕೆ ಅರ್ಥ ಕಂಡುಕೊಳ್ಳಿ. ಅರ್ಥವತ್ತಾಗಿ ಜೀವಿಸಲು ಕಲಿಯಿರಿ, “ಅರ್ಥ’ ಹೊತ್ತು ಹೊತ್ತು, ಬಳಲಿ ಕೊನೆಯಲ್ಲಿ ನಾಲ್ಕು ಜನಕ್ಕೆ ಹೊರುವ ಕಾಯಕ ಸಿಗದಂತೆ ಜೀವನಕ್ಕೆ ವಿದಾಯ ಹೇಳಬೇಡಿ.
– ಬಿ. ನರಸಿಂಗ ರಾವ್, ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!