ಐಎಂಎ ವಂಚನೆ ಕೇಸ್ : ಮಾಚಿ ಸಚಿವ ರೋಶನ್ ಬೇಗ್ಗೆ 14 ದಿನ ನ್ಯಾಯಾಂಗ ಬಂಧನ
Team Udayavani, Nov 22, 2020, 9:30 PM IST
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಉರುಳಿನಲ್ಲಿ ಇದೇ ಮೊದಲ ಬಾರಿಗೆ ರಾಜಕಾರಣಿಯೊಬ್ಬರೂ ಸಿಲುಕಿಕೊಂಡಿದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮಾಜಿ ಸಚಿವ ರೋಶನ್ ಬೇಗ್ ಅವರನ್ನು ಬಂಧಿಸಿದೆ.
ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ರೋಶನ್ ಬೇಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದೇ ಆರೋಪದಲ್ಲಿ ರೋಶನ್ ಬೇಗ್ ಬಂಧನವಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆನ್ನಲ್ಲೇ, ಮನ್ಸೂರ್ ಖಾನ್ ಆರೋಪಿಸಿದ್ದ ಇನ್ನೂ ಹಲವು ರಾಜಕಾರಣಿಗಳಿಗೆ ಸಿಬಿಐ ತನಿಖೆ ಬಿಸಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಪ್ರಕರಣ ಸಂಬಂಧ ರೋಶನ್ ಬೇಗ್ ಅವರನ್ನು ಭಾನುವಾರ ಹಲವು ಗಂಟೆಗಳ ಕಾಲ ಸಿಬಿಐ ವಿಚಾರಣೆ ನಡೆಸಿದೆ.ವಿಚಾರಣೆ ವೇಳೆ ಹಗರಣದಲ್ಲಿ ರೋಶನ್ ಬೇಗ್ ಕೂಡ ಭಾಗಿಯಾಗಿರುವುದು ಕಂಡು ಬಂದಿದ್ದರಿಂದ ತನಿಖಾ ತಂಡ ಅವರನ್ನು ಬಂಧಿಸಿದೆ. ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಧೀಶರು ಆರೋಪಿ ರೋಶನ್ ಬೇಗ್ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ :ಕೋರ್ಟ್ನಲ್ಲಿ ಟ್ರಂಪ್ಗೆ ಮುಖಭಂಗ! ಪೆನ್ಸಿಲ್ವೇನಿಯಾ ಮರು ಎಣಿಕೆಗೆ ಆಗ್ರಹಿಸಿದ್ದ ಅರ್ಜಿ ವಜಾ
ಭಾನುವಾರ ಸಂಜೆ ಸಿಬಿಐ ಅಧಿಕಾರಿಗಳು ರೋಶನ್ ಬೇಗ್ರನ್ನು ಪರಪ್ಪನ ಅಗ್ರಹಾರ ಜೈಲಿಗೆ ತಂದೊಪ್ಪಿಸಿದರು. ಆರೋಪಿ ರೋಶನ್ ಬೇಗ್ರನ್ನು ವಶಕ್ಕೆ ಪಡೆದ ಜೈಲು ಅಧಿಕಾರಿಗಳು ಅವರನ್ನು ನಿಯಮಗಳ ಅನ್ವಯ ಕ್ವಾರಂಟೈನ್ ಕೊಠಡಿಯಲ್ಲಿ ಇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐಎಂಎ ಮುಖ್ಯಸ್ಥ ಮನ್ಸೂರ್ ಅಲಿಖಾನ್, ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಬಳಿಕ ಅಜ್ಞಾತ ಸ್ಥಳದಿಂದ ಆಡಿಯೋ ಮಾಡಿ ಹರಿಬಿಟ್ಟಿದ್ದ ಮನ್ಸೂರ್ ಖಾನ್ ತಮ್ಮ ಬಳಿಯಿಂದ ರೋಶನ್ ಬೇಗ್ 400 ಕೋಟಿ ರೂ. ಪಡೆದು ಹಿಂತಿರುಗಿಸಿಲ್ಲ. ಅವರು ನನಗೆ ವಂಚನೆ ಮಾಡಿದ್ದಾರೆ ಜನರಿಂದ ಸಂಗ್ರಹಿಸಿದ್ದ ಹಣ ಅವರಿಗೆ ನೀಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದರು. ಈ ಆರೋಪವನ್ನು ರೋಶನ್ಬೇಗ್ ತಳ್ಳಿ ಹಾಕಿದ್ದರು.
ಇದನ್ನೂ ಓದಿ :ಉದ್ಯೋಗಕ್ಕಾಗಿ ತಂದೆಯನ್ನೆ ಭೀಕರವಾಗಿ ಹತ್ಯೆಗೈದ ನಿರುದ್ಯೋಗಿ ಮಗ !
ಅಷ್ಟೇ ಅಲ್ಲದೆ ಮನ್ಸೂರ್ ಖಾನ್ ತನ್ನ ಆಡಿಯೋದಲ್ಲಿ ರೋಶನ್ ಬೇಗ್ ಮಾತ್ರವಲ್ಲದೆ ಹಲವು ರಾಜಕೀಯ ನಾಯಕರ ಹೆಸರುಗಳು ಹಾಗೂ ಅಧಿಕಾರಿಗಳಿಗೆ ಹಣ ನೀಡಿದ್ದಾಗಿ ಉಲ್ಲೇಖೀಸಿದ್ದರು.
ಎಸ್ಐಟಿ ವಿಚಾರಣೆ ಎದುರಿಸಿದ್ದ ಬೇಗ್!
ಐಎಂಎ ವಂಚನೆ ಕೇಸ್ ಬಗ್ಗೆ ಮೊದಲು ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ರೋಶನ್ ಬೇಗ್ಗೆ ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೆ ಗೈರಾಗಿದ್ದರು ಕಳೆದ ವರ್ಷ ಜುಲೈ 19ರಂದು ರೋಶನ್ ಬೇಗ್ ನೆರೆರಾಜ್ಯಕ್ಕೆ ತೆರಳಲು ಬೆಂಗಳೂರು ಏರ್ಪೋರ್ಟ್ಗೆ ತೆರಳಿದ್ದರು. ಈ ವೇಳೆ ಎಸ್ಐಟಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿತ್ತು.
ಮುಂದೆ ಯಾರು ಟಾರ್ಗೆಟ್!
ಐಎಂಎ ವಂಚನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಳಿಕ ಸಿಬಿಐ ಹಂತ ಹಂತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಮೊದಲಿಗೆ ಮನ್ಸೂರ್ ಖಾನ್, ಬೆಂಗಳೂರು ನಗರದ ಜಿಲ್ಲಾಧಿಕಾರಿ ಆಗಿದ್ದ ಬಿ.ಎಂ ವಿಜಯ್ ಶಂಕರ್, ಉಪವಿಭಾಗಾಧಿಕಾರಿ ಎಲ್.ಸಿ ನಾಗರಾಜ್ ಸೇರಿ ಹಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಎರಡನೇ ಹಂತದಲ್ಲಿ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಹಾಗೂ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ದ ತನಿಖೆ ನಡೆಸಲು ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಇತ್ತೀಚೆಗೆ ಆರೋಪಿ ಅಧಿಕಾರಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದು ತನಿಖೆ ಮುಂದುವರಿಸಿದೆ.