ಲಂಡನ್ ನಿಂದ ನಾಯಿಮರಿ ತರಿಸಿಕೊಡುವುದಾಗಿ ಹಣ ಪಡೆದು ವಂಚನೆ
Team Udayavani, Jan 19, 2021, 12:03 PM IST
ಬೆಂಗಳೂರು: ಲಂಡನ್ನಿಂದ ಭಾರತಕ್ಕೆ ವಾಪಾಸ್ ಬರುವ ವೇಳೆ ಪ್ರೀತಿಯಿಂದ ಸಾಕಿದ್ದ ನಾಯಿಮರಿಯನ್ನು ಜತೆ ಕರೆತರಲು
ಇಚ್ಛಿಸಿದ್ದ ಮಹಿಳೆಗೆ “ನಾಯಿ ಮರಿ’ ತರಿಸಿ ಕೊಳ್ಳಲು ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಮಾಡಿಸಿ ಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬ ಹಣ ಪಡೆದು ವಂಚಿಸಿರುವ ಘಟನೆ ಪ್ರಕರಣ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಕೃಷ್ಣ ಜಯಪ್ರಕಾಶ್ ಎಂಬುವವರು ನೀಡಿರುವ ದೂರು ಆಧರಿಸಿ ಹೇಮಚಂದ್ರ ರಿಷ್ಯನಾತ್ ಎಂಬುವವರ ವಿರುದ್ಧ ವಂಚನೆ, ಒಳಸಂಚು ಆರೋಪ ದನ್ವಯ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೃಷ್ಣಜಯಪ್ರಕಾಶ್ ಜೆ.ಪಿನಗರದಲ್ಲಿ ವಾಸವಿದ್ದು ಅವರ ಪತ್ನಿ ರಂಜಿತಾ ಅವರು ಲಂಡನ್ನಲ್ಲಿ ಉದ್ಯೋಗದಲ್ಲಿದ್ದಾರೆ. ಪತ್ನಿ
ರಂಜಿತಾ ಅವರು ಭಾರತಕ್ಕೆ ಆಗಮಿಸಲು ನಿರ್ಧರಿಸಿ ತಮ್ಮ ಜತೆ ಸಾಕಿಕೊಂಡಿದ್ದ “ಕಾಕರ್ ಸ್ಪೇನಿಯಲ್’ ನಾಯಿ ಮರಿ ತರಲು
ನಿರ್ಧರಿಸಿದ್ದರು. ಹೀಗಾಗಿ ಅವರು ಲಂಡನ್ ನಿಂದ ನಾಯಿ ಮರಿ ಬೆಂಗಳೂರಿಗೆ ತರಿಸಿಕೊಂಡು ಪತಿಗೆ ವಿಳಾಸಕ್ಕೆ ತಲುಪಿಸಲು ಇಂದಿರಾ ನಗರದ ಪೆಟ್ಟೋರಾಮ ಸಾಕುಪ್ರಾಣಿಗಳ ಮಾರಾಟ ಹಾಗೂ ಸಾಗಾಟ ಕೇಂದ್ರದ ರಿಷ್ಯನಾತ್ ಅವರನ್ನು ಸಂಪರ್ಕಿಸಿದ್ದರು.
ಹೀಗಾಗಿ, ಲಂಡನ್ನಿಂದ ನಾಯಿಮರಿ ತರಿಸಿಕೊಳ್ಳಲು ಏರ್ಪೋರ್ಟ್ನಲ್ಲಿ ಬೇಕಾದ ನಿರಪೇಕ್ಷಣಾ ಪತ್ರ ಸೇರಿ ಕಾನೂನು ಪ್ರಕ್ರಿಯೆಗಳನ್ನು ಮಾಡಿಸಿ ಕೊಡುವುದಾಗಿ ರಿಷ್ಯನಾತ್ ತಿಳಿಸಿದ್ದರು. ಇದಕ್ಕಾಗಿ ರಂಜಿತಾ ಅವರಿಂದ 50 ಸಾವಿರ ರೂ. ಹಣ ಕೂಡ ಪಡೆದುಕೊಂಡಿದ್ದರು. ಅದರಂತೆ 2020ರ ನವೆಂಬರ್ 5ರಂದು ಲಂಡನ್ನಲ್ಲಿ ನಾಯಿಮರಿ ಕಳುಹಿಸಿಕೊಡಲು ರಿಷ್ಯನಾತ್ ತಿಳಿಸಿದ್ದರು.
ಹೀಗಾಗಿ ರಂಜಿತಾ ಅವರು ನಾಯಿ ಮರಿ ಕಳುಹಿಸಿಕೊಡಲು ಅಲ್ಲಿನ ಏರ್ಪೋರ್ಟ್ಗೆ ಹೋದಾಗ ನಾಯಿ ಮರಿ ಸ್ವೀಕರಿಸಲು ಬೆಂಗಳೂರಿನ ಏರ್ಪೋರ್ಟ್ನಲ್ಲಿ ಕ್ವಾರಂಟೈನ್ ಅಧಿಕಾರಿಗಳಿಂದ ಎನ್ಒಸಿ ಪಡೆದಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಆ ದಿನ
ನಾಯಿಮರಿ ತೆಗೆದುಕೊಂಡು ಬರಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸ್ವಂತ ಖರ್ಚಿನಿಂದ ಪುನಃ ರಂಜಿತಾ ಅವರು ತಮ್ಮ ಪತಿಯ ಸಹಾಯದ ಮೂಲಕ ಎನ್ಓಸಿ ಪಡೆದು ಮೂರು ದಿನಗಳು ಬಿಟ್ಟು ಅವರೇ ನಾಯಿಮರಿಯನ್ನು ತೆಗೆದುಕೊಂಡು ಬಂದಿದ್ದಾರೆ.
“ರಿಷ್ಯನಾತ್ ಎನ್ಓಸಿ ಪಡೆಯದೇ ಇದ್ದುದ್ದರಿಂದ ತಮಗೆ ಅಂದಿನ ವಿಮಾನ ಪ್ರಯಾಣ ರದ್ದಾಗಿದ್ದಲ್ಲದೆ. ಮುಂಚಿತವಾಗಿ
ಹಾಕಿಕೊಂಡಿದ್ದ ಯೋಜನೆಗಳೆಲ್ಲವೂ ವಿಫಲವಾದವು. ಹೀಗಾಗಿ ಆತನಿಂದ 2 ಲಕ್ಷ ರೂ. ಕೂಡ ನಷ್ಟ ಆಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.