ಘಾಜಿಪುರ ಗಡಿ ಉದ್ವಿಗ್ನ : ಪ್ರತಿಭಟನ ಸ್ಥಳ ಬಿಡುವಂತೆ ಉ.ಪ್ರದೇಶ ಸರಕಾರ ಆದೇಶ
Team Udayavani, Jan 29, 2021, 6:45 AM IST
ಹೊಸದಿಲ್ಲಿ:ಕೆಂಪುಕೋಟೆ ಬಳಿಯ ಹಿಂಸಾಚಾರದ ಬೆನ್ನಲ್ಲೇ ಉತ್ತರ ಪ್ರದೇಶ ಸರಕಾರವು ಘಾಜಿಪುರ ಗಡಿಯಿಂದ ಪ್ರತಿಭಟನ ನಿರತ ರೈತರನ್ನು ತೆರವುಗೊಳಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಜಮಾವಣೆಯಾಗಿದ್ದಾರೆ.
ಉತ್ತರ ಪ್ರದೇಶ ಸರಕಾರ ಕಠಿನ ನಿಲುವು ತಾಳಿದ್ದು, ರೈತರನ್ನು ಗುರುವಾರ ರಾತ್ರಿಯೇ ತೆರವು ಮಾಡಲು ಮುಂದಾಗಿದೆ. ಐಪಿಸಿ ಸೆಕ್ಷನ್ 133ರ ಪ್ರಕಾರ ರೈತರಿಗೆ ನೋಟಿಸ್ ನೀಡಲಾಗಿದೆ. ಇಲ್ಲಿ ನೀರು ಮತ್ತು ವಿದ್ಯುತ್ ಸರಬರಾಜು ಕಡಿತ ಮಾಡಲಾಗಿದೆ. ರೈತ ನಾಯಕ ರಾಕೇಶ್ ಟಿಕಾಯತ್ ಬಂಧನಕ್ಕೂ ಪೊಲೀಸರು ಮುಂದಾಗಿದ್ದು, ನೋಟಿಸ್ ನೀಡಿದ್ದಾರೆ.
ರೈತ ಸಂಘಟನೆಗಳಲ್ಲಿ ಬಿರುಕು
ಈ ನಡುವೆ ಘಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರಾಕೇಶ್ ಟಿಕಾಯತ್ ಅವರ ಸಹೋದರ ನರೇಶ್ ಟಿಕಾಯತ್ ಗುರುವಾರ ರಾತ್ರಿಯೇ ಪ್ರತಿಭಟನೆ ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಗುರುವಾರ ಬೆಳಗ್ಗೆಯೇ ಭಾರತೀಯ ಕಿಸಾನ್ ಯೂನಿಯನ್ (ಲೋಕ್ ಶಕ್ತಿ) ಕೂಡ ಪ್ರತಿಭಟನೆಯಿಂದ ಹಿಂದೆ ಸರಿದಿದೆ.
ಸಿಂಘು ಗಡಿಯಲ್ಲಿ ಜನರ ಪ್ರತಿಭಟನೆ
ಸಿಂಘು ಗಡಿಯಲ್ಲಿ ಹಿಂದೂ ಸೇನೆ ಎಂಬ ಸಂಘಟನೆ ರೈತರಿಗೆ 24 ತಾಸುಗಳ ಗಡುವು ನೀಡಿದ್ದು, ಇದರೊಳಗೆ ಅಲ್ಲಿಂದ ತೆರಳಬೇಕು ಎಂದಿದೆ. ಈ ನಡುವೆ ಪೊಲೀಸರು ಸಿಂಘು ಗಡಿ ಬಳಿ ಜೆಸಿಬಿ ಬಳಸಿ ರಸ್ತೆ ಅಗೆದಿದ್ದಾರೆ. ಹರಿಯಾಣದ ಕರ್ನಾಲ್ನಲ್ಲೂ ಸ್ಥಳ ತೆರವು ಮಾಡುವಂತೆ ರೈತರಿಗೆ ಪೊಲೀಸರು ಸೂಚಿಸಿದ್ದಾರೆ.