40% ಕಮಿಷನ್ ಪ್ರಕರಣ ಮುಚ್ಚಲು ಸರ್ಕಾರ ಹೊರಟಿದೆ: ಡಿ.ಕೆ ಸುರೇಶ್
ಮಕ್ಕಳ ಪೌಷ್ಠಿಕಾಂಶ ವಿಚಾರದಲ್ಲೂ ರಾಜಕೀಯ ತರಬೇಡಿ
Team Udayavani, Jul 15, 2022, 1:14 PM IST
ಬೆಂಗಳೂರು: ಸಂತೋಷ್ ಪಾಟೀಲ್ 40% ಕಮಿಷನ್ ಧ್ವನಿ ಎತ್ತಿ, ಆತ್ಮಹತ್ಯೆ ಮಾಡಿಕೊಂಡರು. ಈ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ಆಗುತ್ತಿಲ್ಲ. ಸರ್ಕಾರ ಈ ಪ್ರಕರಣವನ್ನು ಮುಚ್ಚಲು ಹೊರಟಿದೆ ಎಂದು ಸಂಸದ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ಸಂತೋಷ್ ಪಾಟೀಲ್ ಪತ್ನಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ನಾವು ಪದೇ ಪದೇ ಹೇಳುತ್ತಿದ್ದೇವೆ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದ ತನಿಖೆ ಮಾಡಬೇಕು. ಸಂತೋಷ್ ಪಾಟೀಲ್ ಪತ್ನಿ ಅಷ್ಟೇ ಅಲ್ಲ, ಕಂಟ್ರಾಕ್ಟರ್ ಅಸೋಸಿಯೇಷನ್ ಕೂಡ ದೂರು ಕೊಟ್ಟಿತ್ತು. ಕೇಂದ್ರ ಸರ್ಕಾರ ತನಿಖೆ ಮಾಡಬೇಕಿತ್ತು, ಐಟಿ, ಇಡಿ, ಸಿಬಿಐ ಸಂಸ್ಥೆ ಮಧ್ಯಪ್ರವೇಶ ಮಾಡಬೇಕಿತ್ತು ಆದರೆ ಬಿಜೆಪಿ ನಾಯಕರು ಪ್ರಕರಣ ಮುಚ್ಚಲು ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್ ಐ ಪ್ರಕರಣದಲ್ಲೂ ತನಿಖೆ ಆಗುತ್ತಿಲ್ಲ, ಈ ಪ್ರಕರಣದ ಬಗ್ಗೆ ತನಿಖೆಯಾಗಬೇಕು. ಯಾರ್ಯಾರು ಇದರಲ್ಲಿಇದ್ದಾರೆ ಎಂಬುದು ತನಿಖೆಯಾಗಬೇಕು. ರಾಜ್ಯದ ಯುವಕರು ನಿಮಗೆ ರಕ್ಷಣೆ ಕೊಡುತ್ತಾರೆ. ಸರ್ಕಾರ ಒತ್ತಡಕ್ಕೆ ಮಣಿಯಬಾರದು. ಯಾರೇ ಆಗಲಿ ಒತ್ತಡ ಹಾಕಿದರೆ ಸುಮ್ಮನಿರಬೇಡಿ ರಾಜ್ಯದ ಪೊಲೀಸರು ಇಲಾಖೆ ಗೌರವವನ್ನು ಉಳಿಸಬೇಕು. ಆರೋಪಿ ಸ್ಥಾನದಲ್ಲಿ ಇದ್ದೀರಿ ಎಂದು ಅನ್ಯತಾ ಭಾವಿಸಬೇಡಿ ಎಂದರು.
ಮೊಟ್ಟೆ ವಿತರಣೆ ಬೇಡ ಎಂಬ ಕೇಂದ್ರದ ನಿಲುವು ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ಬಡ ಮಕ್ಕಳ ಆಹಾರಕ್ಕೆ ಕಣ್ಣು ಹಾಕಿದೆ. ಬಿಜೆಪಿ ಅಜೆಂಡಾ ಮುಂದೆ ತರುತ್ತಿದೆ. ಮಕ್ಕಳ ಪೌಷ್ಠಿಕಾಂಶ ವಿಚಾರದಲ್ಲೂ ರಾಜಕೀಯ ತರಬೇಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಂಟ್ವಾಳ: ರಸ್ತೆಗೆ ಬಿದ್ದ ಮರ; ಆಟೋ- ಮಾರುತಿ 800 ಜಖಂ
ರಾಜ್ಯದಲ್ಲಿ ಅತಿವೃಷ್ಠಿ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ತೀವ್ರ ಮಳೆಯಾಗುತ್ತಿದೆ . ಕಳೆದ ಬಾರಿ ಆಗಿರುವ ನಷ್ಟಕ್ಕೆ ಪರಿಹಾರ ಕೊಡುತ್ತಿಲ್ಲ. ಇಲ್ಲ ಸಲ್ಲದ ಸಬೂಬುಗಳನ್ನು ಹೇಳುತ್ತಾರೆ. ಅವರಿಗೆ ರೈತರನ್ನು ಕಂಗಾಲು ಮಾಡಬೇಕು ಅಷ್ಟೇ. ಅವರಿಗೆ ಬೇಕಾಗಿರುವುದು ಕಮಿಷನ್. ಒಎಂಆರ್ ಶೀಟ್ ತಿದ್ದುವುದಷ್ಟೇ ಗೊತ್ತಿದೆ. ರೈತರ ಪಂಪ್ ಸೆಟ್, ಮನೆಗಳು ಬಿದ್ದಿವೆ, ಅದಕ್ಕೆ ಪರಿಹಾರ ಇಲ್ಲ ಅಂತ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಈಗ ಇವರು ಎಲ್ಲಿಂದ ಪರಿಹಾರ ನೀಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.