ಗುಡ್ಡಮ್ಮಾಡಿ : ಬಾವಿಗೆ ಬಿದ್ದು ವ್ಯಕ್ತಿ ಸಾವು, ಸಹೋದರ ಪಾರು
Team Udayavani, May 27, 2020, 5:08 PM IST
ಕುಂದಾಪುರ: ಮನೆ ಸಮೀಪದ ಬಾವಿಗೆ ಆಯ ತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯಲ್ಲಿ ಸಂಭವಿಸಿದೆ.
ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯ ನಿವಾಸಿ ವಾಲ್ಟರ್ ಡಿ’ ಅಲ್ಮೇಡಾ (52) ಮೃತ ವ್ಯಕ್ತಿ. ಇವರನ್ನು ಕಾಪಾಡಲು ಬಾವಿಗಿಳಿದ ಸಹೋದರ ಅಲ್ಬನ್ ಡಿ’ಅಲ್ಮೇಡಾ ಅವರು ಕೂಡ ಅಸ್ವಸ್ಥಗೊಂಡಿದ್ದು, ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ವಾಲ್ಟರ್ ಡಿ’ಅಲ್ಮೇಡಾ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸುಮಾರು 25 ಅಡಿ ಆಳದ 5 ಅಡಿ ಅಗಲವಿರುವ ಬಾವಿಗೆ ಆಯತಪ್ಪಿ ವಾಲ್ಟರ್ ಡಿ’ ಅಲ್ಮೇಡಾ ಬಿದ್ದಿದ್ದು, ಇಕ್ಕಟ್ಟಾದ ಬಾವಿ ಇದಾಗಿದ್ದರಿಂದ ಒಳಗೆ ಆಮ್ಲಜನಕದ ಕೊರತೆ ಇತ್ತು. ಇದರಿಂದ ವಾಲ್ಟರ್ ಬಾವಿಯೊಳಗೆ ಅಸ್ವಸ್ಥಗೊಂಡಿದ್ದರಿಂದ ಕೂಡಲೇ ಮೇಲೆ ಬರಲು ಸಾಧ್ಯವಾಗಿಲ್ಲ. ಕಾಪಾಡಲು ಇಳಿದ ಅಲ್ಬನ್ ಕೂಡ ಅಸ್ವಸ್ಥಗೊಂಡಿದ್ದು, ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬಂದಿ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಮೇಲಕ್ಕೆತ್ತಿದ್ದು ಕೂಡಲೇ ಆಂಬುಲೆನ್ಸ್ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ವಾಲ್ಟರ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಲಾಕ್ಡೌನ್ಗಿಂತ ಮುನ್ನ ಇವರಿಬ್ಬರು ಕೂಡ ಹೊರ ಜಿಲ್ಲೆಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದು, ಸಹೋದರರಿಬ್ಬರು ಕೂಡ ಪರಿಶ್ರಮಿಗಳಾಗಿದ್ದರು. ಊರಿಗೆ ಬಂದಿದ್ದ ಇವರು ಕೂಲಿ ಕೆಲಸ ಮಾಡುತ್ತಿದ್ದರು.
ಸ್ಥಳಕ್ಕೆ ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಸಿಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಹ ಠಾಣಾಧಿಕಾರಿ ಕೊರಗ ನಾಗ ಮೊಗೇರ, ಪ್ರಮುಖ ಅಗ್ನಿಶಾಮಕ ಸಿಬಂದಿಯಾದ ಪ್ರದೀಪ್ ನಾಯ್ಕ, ಬಿ. ಸುಂದರ, ಫೈರ್ಮನ್ ಆಶಾ, ಪಿ. ಗೋಪಾಲ, ಮಹೇಶ್ ಶೆಟ್ಟಿ, ಪದ್ಮನಾಭ ಕಾಂಚನ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.