ತಗ್ಗದ ಮಳೆ; ತ್ವರಿತ ಪರಿಹಾರಕ್ಕೆ ಸರ್ವ ಕ್ರಮ: ಸಿಎಸ್ಗೆ ಸಿಎಂ ಪೂರ್ಣಾಧಿಕಾರ
Team Udayavani, Aug 8, 2020, 6:35 AM IST
ಭಾರೀ ಮಳೆಗೆ ಜೋಡುಪಾಲದಲ್ಲಿ ರಸ್ತೆ ಕುಸಿತ ಉಂಟಾಗಿರುವುದು.
ಬೆಂಗಳೂರು: ರಾಜ್ಯದ ಕಾವೇರಿ ಕೊಳ್ಳ ಭಾಗ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಆಶ್ಲೇಷಾ ಮಳೆಯಬ್ಬರ ಮುಂದುವರಿದಿದ್ದು,
ನದಿ ತಟ ದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳು ವಂತೆ ಸೂಚಿಸಲಾಗಿದೆ. ಅಗತ್ಯ ತುರ್ತು ಕ್ರಮ ಕೈಗೊಳ್ಳಲು ರಾಜ್ಯ ಮುಖ್ಯ ಕಾರ್ಯದರ್ಶಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪೂರ್ಣ ಅಧಿಕಾರ ನೀಡಿದ್ದಾರೆ.
ಮಣಿಪಾಲ ಆಸ್ಪತ್ರೆಯಲ್ಲಿದ್ದೇ ಪರಿಸ್ಥಿತಿಯ ಪೂರ್ಣ ಮಾಹಿತಿ ಪಡೆದಿರುವ ಸಿಎಂ, ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವ ಅಗತ್ಯ ತುರ್ತು ಕ್ರಮ ಕೈಗೊಳ್ಳಲು ತಮ್ಮ ಒಪ್ಪಿಗೆಗೆ ಕಾಯದೆ ಮುಂದು ವರಿಯಬಹುದು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರಿಗೆ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಕಾರ್ಯತತ್ಪರ ರಾಗಿರುವ ವಿಜಯಭಾಸ್ಕರ್, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಉಂಟಾಗಿರುವ ನಷ್ಟದ ಅಂದಾಜು ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಶುಕ್ರವಾರ ಅನಾಹುತ ನಡೆದ ತಲಕಾವೇರಿಗೆ ಭೇಟಿ ನೀಡಿದ್ದರು. ಅವರಿಗೆ ದೂರವಾಣಿ ಕರೆ ಮಾಡಿದ ಸಿಎಂ, ಕೊಡಗಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು.
ಮೈಸೂರು ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಶುಕ್ರವಾರ ಸಂಜೆ ಕೆಆರ್ಎಸ್ ಮತ್ತು ಕಬಿನಿ ಜಲಾಶಯದಿಂದ ನೀರು ಬಿಡಲಾಗಿದೆ. ಆಲಮಟ್ಟಿ ಜಲ ವಿದ್ಯುದಾಗಾರದ ಎಲ್ಲ ಆರು ಘಟಕಗಳಿಂದ 39 ಸಾವಿರ ಕ್ಯುಸೆಕ್ ಸೇರಿ ಒಟ್ಟು 1.80 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.
ಶಿವಮೊಗ್ಗದಲ್ಲಿ
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರೀ ಮಳೆ ಸುರಿದಿದ್ದು, ಹಲವೆಡೆ ಮನೆಗಳು ಕುಸಿದಿವೆ. ಯಲವಟ್ಟಿ ಕೆರೆ ಕೋಡಿ ಒಡೆದು ಸುಮಾರು 35 ಎಕರೆ ಪ್ರದೇಶ ಕೃಷಿಭೂಮಿಗೆ ನೀರು ನುಗ್ಗಿದೆ. ಸಾಗರ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಶಿವಮೊಗ್ಗ ತಾಲೂಕುಗಳಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಡ್ಯಾಂಗೆ 6 ಟಿಎಂಸಿ ಅಡಿ ನೀರು
ತುಂಗಭದ್ರಾ ಜಲಾಶಯಕ್ಕೆ ಶುಕ್ರವಾರ ಒಂದೇ ದಿನ 6 ಟಿಎಂಸಿ ಅಡಿ ನೀರು ಹರಿದು ಬಂದಿದ್ದು, ಒಳ ಹರಿವಿನ ಪ್ರಮಾಣ 81 ಸಾವಿರ ಕ್ಯುಸೆಕ್ನಷ್ಟು ಹೆಚ್ಚಾಗಿದೆ. ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.82 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ. ದೇವದುರ್ಗ-ಕಲಬುರಗಿ ರಸ್ತೆ ಸಂಪರ್ಕ ಸಂಚಾರ ಸ್ಥಗಿತವಾಗಿದೆ.
ಚಿಕ್ಕಮಗಳೂರಿನಲ್ಲಿ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಿಗೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಅಡಿಕೆ ತೋಟ, ಭತ್ತದ ಗದ್ದೆಗಳು ಜಲಾವೃತಗೊಂಡಿವೆ. 54ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಮೂಡಿಗೆರೆ ತಾಲೂಕು ಕಳಸ ಸಮೀಪದ ಬಲಿಗೆ ಗ್ರಾಮದ ರಸ್ತೆ ಮೇಲೆ ಬೃಹತ್ ಬಂಡೆಗಲ್ಲು ಬಿದ್ದ ಪರಿಣಾಮ ಕಳಸ, ಚಿಕ್ಕನಕುಡಿಗೆ, ಬಲಿಗೆ, ಮೆಣಸಿನಹಾಡ್ಯ ಗ್ರಾಮಗಳ ಸಂಪರ್ಕ ತಾತ್ಕಾಲಿಕ ಕಡಿತಗೊಂಡಿದೆ. ಹೆಮ್ಮಕ್ಕಿ ಗ್ರಾಮದಲ್ಲಿ ಗುಡ್ಡ ಕುಸಿದು ಹೆಮ್ಮಕ್ಕಿ, ಹಿರೇಬೈಲು ಸೇರಿ ಐದಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಭದ್ರಾನದಿ ಉಕ್ಕಿ ಹರಿದಿದ್ದು, ಬಾಳೆ ಹೊನ್ನೂರು -ಕಳಸ ಸಂಪರ್ಕ ಕಡಿತ ಗೊಂಡಿದೆ. ನದಿಪಾತ್ರದ ಜನರನ್ನು ಸ್ಥಳಾಂತರಿಸಲಾಗಿದೆ. ಹೆಬ್ಟಾಳೆ ಸೇತುವೆ ಪದೇಪದೆ ಮುಳುಗುತ್ತಿದೆ.
ತುಂಗಾನದಿ ಉಕ್ಕಿ ಹರಿದಿದ್ದು, ಶೃಂಗೇರಿ ಶಾರದಾಂಬೆ ದೇವಾ ಲಯದ ಭೋಜನ ಶಾಲೆಗೆ ನೀರು ನುಗ್ಗಿದೆ. ನರಸಿಂಹವನಕ್ಕೆ ಸಾಗುವ ತೂಗುಸೇತುವೆ ಬಂದ್ ಆಗಿದೆ. ಕಪ್ಪೆ ಶಂಕರ ನದಿ ನೀರಿನಲ್ಲಿ ಮುಳು ಗಿದೆ. ಗಾಂಧಿ ಮೈದಾನ ಮತ್ತು ಕುರು ಬಗೆರೆಯ ಮನೆಗಳಲ್ಲಿ ಸಿಲುಕಿದ್ದ 15 ಜನರನ್ನು ಅಗ್ನಿಶಾಮಕ ದಳದ ಸಿಬಂದಿ ಸುರಕ್ಷಿತ ಪ್ರದೇಶಕ್ಕೆ ಕರೆತಂದಿದ್ದಾರೆ. ಚಿಕ್ಕಮಗಳೂರು ತಾಲೂಕು ಅಂಡವಾನೆ ಗ್ರಾಮದ ಶಂಕರ (40) ಅವರು ಗದ್ದೆಯಲ್ಲಿ ಜಾರಿ ಬಿದ್ದು ಮೃತ ಪಟ್ಟಿದ್ದಾರೆ. ಇದು ಮಳೆಯಿಂದಾದ ಜಿಲ್ಲೆಯ ಎರಡನೆಯ ಸಾವಾಗಿದೆ.
ನಿಲ್ಲದ ಮಳೆ
ಶಿರಸಿ, ಯಲ್ಲಾಪುರದಲ್ಲಿ ಮಳೆ ಜೋರಾಗಿಯೇ ಇದೆ. ಜಲಾಶಯಗಳ ಹಿನ್ನೀರು ಪ್ರದೇಶದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಜಲಾಶಯ ಭರ್ತಿಯಾಗದಂತೆ ಕದ್ರಾದಿಂದ 64,968 ಕ್ಯುಸೆಕ್ ಮತ್ತು ಕೊಡಸಳ್ಳಿ ಯಿಂದ 39,317 ಕ್ಯುಸೆಕ್ ನೀರು ಹೊರಬಿಡಲಾಗಿದೆ. ಕಾಳಿ ನದಿ ತುಂಬಿ ಹರಿಯುತ್ತಿದೆ.
ಸಂಪರ್ಕ ಬಂದ್
ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಮಹಾರಾಷ್ಟ್ರ ದಲ್ಲಿ ಮುಂದುವರಿದಿದ್ದು, ಕೃಷ್ಣಾ ನದಿಯಲ್ಲಿ ಒಳಹರಿವು ಏರಿಕೆ ಕಂಡಿದೆ. ಮಹಾರಾಷ್ಟ್ರದ ಅಂಬೋಲಿ ಪ್ರದೇಶದಲ್ಲಿ ಮಳೆ ಜೋರಾಗಿದೆ.
ಚಾರ್ಮಾಡಿ: 2 ದಿನ ಸಂಚಾರ ನಿಷೇಧ
ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರ ಆಲೇಕಾನ್ ಜಲಪಾತ ಸಮೀಪದ ತಿರುವಿನಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಎರಡು ದಿನ ಸಂಚಾರ ನಿಷೇ ಧಿಸಲಾಗಿದೆ. ಹೆದ್ದಾರಿ ಪ್ರಾ ಧಿಕಾರದ ಕಾರ್ಯಪಾಲಕ ಅಭಿಯಂತರ ಅರ್ಚನಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಭಾಗಮಂಡಲ: ಕಾರ್ಯಾಚರಣೆ ಸ್ಥಗಿತ
ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ಕಡೆ ಮತ್ತೆ ಭೂಕುಸಿತ ಉಂಟಾಗಿದೆ. ಪ್ರವಾಹ ಪರಿಸ್ಥಿತಿ ಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ ನೂರಾರು ಮನೆಗಳು ಜಲಾವೃತಗೊಂಡಿವೆ. ತಲಕಾವೇರಿ ಯಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾದ ಐವರ ಪತ್ತೆ ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಉಡುಪಿ, ದ.ಕ. ಸಹಿತ 11 ಜಿಲ್ಲೆಗಳಿಗೆ ತಲಾ 5 ಕೋ.ರೂ.: ಆರ್. ಅಶೋಕ್
ಪ್ರಾಕೃತಿಕ ವಿಕೋಪ ನಿರ್ವಹಣೆಗಾಗಿ ಉಡುಪಿ, ದಕ್ಷಿಣ ಕನ್ನಡ ಸಹಿತ ರಾಜ್ಯದ 11 ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ತಲಾ 5 ಕೋ.ರೂ. ಬಿಡುಗಡೆ ಮಾಡ ಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಉಡುಪಿಯಲ್ಲಿ ಹೇಳಿದ್ದಾರೆ.