ಅಂಗವಿಕಲ ಸರ್ಕಾರಿ ನೌಕರರ ವರ್ಗಾವಣೆಗೆ ನೀತಿ: ಸರಕಾರಕ್ಕೆ ಹೈಕೋರ್ಟ್ ನೋಟಿಸ್
Team Udayavani, Jul 19, 2022, 9:32 PM IST
ಬೆಂಗಳೂರು: ಅಂಗವಿಕಲ ಸರಕಾರಿ ನೌಕರರ ನಿಯೋಜನೆ ಮತ್ತು ವರ್ಗಾವಣೆಗೆ ಸಂಬಂಧಿಸಿ “ಸಮಗ್ರ ವರ್ಗಾವಣೆ ನೀತಿ’ ರೂಪಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾ| ಜೆ.ಎಂ. ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ವಾದ ಮಂಡಿಸಿ, ಸರಕಾರದಿಂದ ನೇಮಕಗೊಳ್ಳುವ ಅಂಗವಿಕಲರಿಗೆ ಅವರ ಸ್ವಂತ ಸ್ಥಳ ಅಥವಾ ಜಿಲ್ಲೆಯಲ್ಲಿ ನಿಯೋಜಿಸಲು ಆದ್ಯತೆ ನೀಡಬೇಕು ಎಂದು 1990ರಲ್ಲಿ ಕೇಂದ್ರ ಸರಕಾರ ಹೇಳಿದೆ.
ಸರಕಾರಿ ನೌಕರರ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿ-2014ರಲ್ಲಿ ಅಂಗವಿಕಲ ನೌಕರರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016ರ ಸೆಕ್ಷನ್ 20 (5) ಪ್ರಕಾರ ಅಂಗವಿಕಲ ನೌಕರರ ನಿಯೋಜನೆ ಮತ್ತು ವರ್ಗಾವಣೆಗೆ ಸರಕಾರ ನೀತಿ ರೂಪಿಸಬಹುದು ಎಂದು ಹೇಳಲಾಗಿದೆ.
ಅಂಗವಿಕಲ ಸರ್ಕಾರಿ ನೌಕರರ ನಿಯೋಜನೆ ಮತ್ತು ವರ್ಗಾವಣೆಗೆ ಸಮಗ್ರ ನೀತಿ ರೂಪಿಸುವಂತೆ 2020ರ ಆ. 4ರಂದು ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದೆ. ಅದಾಗ್ಯೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ ಎರಡು ವಾರಗಳಲ್ಲಿ ನಿಲುವು ತಿಳಿಸುವಂತೆ ಸರಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿತು. ಜತೆಗೆ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.