ನಾನು ಹಿಂದೆ ಕಸ ಸಂಗ್ರಹಿಸುವ ಗುತ್ತಿಗೆ ಪಡೆದು ವ್ಯಾಸಂಗ ಮಾಡಿದವ:ಎಚ್ ಡಿಕೆ
ಆನೆ ಹೋಗುತ್ತಿದ್ರೆ ನಾಯಿ ಬೊಗಳುತ್ತೆ : ಜಮೀರ್ ವಿರುದ್ಧ ಕಿಡಿ
Team Udayavani, Oct 24, 2021, 3:23 PM IST
ಮೈಸೂರು : ”ಆನೆ ಹೋಗುತ್ತಿದ್ರೆ ನಾಯಿ ಬೊಗಳುತ್ತದೆ” ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಭಾನುವಾರ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಡಿಕೆ, ಹಣಗಳಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ”ನಾನು ಹಿಂದೆ ನಾನು ಹಿಂದೆ ಬಿಬಿಎಂಪಿ ನಾಲ್ಕು ವಾರ್ಡ್ಗಳಲ್ಲಿ ಟ್ರಾಕ್ಟರ್ ಮೂಲಕ ಕಸ ಸಂಗ್ರಹಿಸುವ ಗುತ್ತಿಗೆ ಪಡೆದು ವ್ಯಾಸಂಗ ಮಾಡಿತ್ತಿದ್ದೆ.ಅಂದಿನ ವಿಪಕ್ಷ ನಾಯಕ ನಾಗೇಗೌಡರು ಅಧಿವೇಶನದಲ್ಲಿ ಪ್ರಸ್ತಾಪಿಸಿದರು, ನಮ್ಮ ತಂದೆ ಕೂಡಲೇ ಬೈದು ಕಸ ಸಂಗ್ರಹ ಗುತ್ತಿಗೆ ಮಾಡದಂತೆ ಹೇಳಿದರು. . ಬಳಿಕ ಮೈಸೂರಿಗೆ ಬಂದು ಚಿತ್ರವಿತರಕನಾಗಿ ಕೆಲಸ ಆರಂಭಿಸಿದೆ.ಅಂದು ನಾನು ಹಣಗಳಿಸಬಹುದಾಗಿದ್ದರೆ ಎಷ್ಟೂ ಗಳಿಸಬಹುದಿತ್ತು.ಉತ್ತರ ಕೊಡಲು ಅವರು ಅನ್ಫಿಟ್.ಆನೆ ಹೋಗುತ್ತಿದ್ರೆ ನಾಯಿ ಬೊಗಳುತ್ತವೆ.ಅವರಿಗೆಲ್ಲಾ ತಲೆ ಕೆಡಿಸಿಕೊಳ್ಳೋಕೆ ಆಗುತ್ತದಾ” ಎಂದು ಕಿಡಿ ಕಾರಿದರು.
”ಜೆಡಿಎಸ್ನಲ್ಲಿ ದೊಡ್ಡ ಮಟ್ಟದ ನಾಯಕರಿಲ್ಲ, ಕಾರ್ಯಕರ್ತರೇ ನಮಗೆ ಲೀಡರ್ಗಳು.90 ವರ್ಷದ ದೇವೆಗೌಡರು ಮತ್ತು ನಾನು ಇಬ್ಬರೇ ಹೋರಾಟ ಮಾಡುತ್ತಿದ್ದೇವೆ. ನಾಳೆ ಮತ್ತೆ ಎರಡು ದಿನಗಳ ಕಾಲ ಸಿಂಧಗಿ, ಹಾನಗಲ್ ಉಪ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ” ಎಂದರು.
”ಬಿಜೆಪಿಯ ಬಿ ಟೀಂ ಅಂತ ಜೆಡಿಎಸ್ ವಿರುದ್ದ ಕಾಂಗ್ರೆಸ್ ಟೀಕೆ ಮಾಡುತ್ತಿದೆ.ಜೆಡಿಎಸ್ ಮುಳುಗೇ ಹೋಯ್ತು ಅಂತ ಹೇಳುತ್ತಾರೆ. ಹಿಂದಿನ ಬೆಳವಣಿಗೆಯನ್ನ ನೋಡಿದರೆ ಜೆಡಿಎಸ್ ಎಂತೆಂಥಹ ಸವಾಲುಗಳನ್ನ ಎದುರಿಸಿದೆ” ಎಂದರು.
”ಕಾಂಗ್ರೆಸ್ ಜೊತೆ ಸೇರಿ ಸಮ್ಮಿಶ್ರ ಸರಕಾರ ರಚಿಸಿದ ಪರಿಣಾಮ ನಮ್ಮ ಪಕ್ಷ ನೆಲ ಕಚ್ಚುವಂತಾಗಿದೆ.ಇದರಲ್ಲೇನು ಎರಡು ಮಾತಿಲ್ಲ,ಪಕ್ಷವನ್ನ ನೆಲ ಕಚ್ಚಿಸಲು ಹೊರಟಿದ್ಧಾರೆ.ಜೆಡಿಎಸ್ನ ಮುಳುಗಿಸುತ್ತೇನೆ ಅಂತ ಹೊರಟವರ ಸ್ಥಿತಿ ಏನಾಗಿದೆ ಅಂತ ಇತಿಹಾಸ ಇದೆ” ಎಂದರು.
ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ”ಹಾನಗಲ್, ಸಿಂಧಗಿಯಲ್ಲಿ ಸಾಲಮನ್ನಾ ಯೋಜನೆಯನ್ನ ನೆನಪಿಸಿಕೊಳ್ತಾರೆ.ನಾವೆಲ್ಲಾ ಬೆಂಬಲ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ರು ಅಂತ ಸಿದ್ದರಾಮಯ್ಯ ಹೇಳಿದ್ದಾರೆ.ಆದರೆ ಸಾಲ ಮನ್ನಾ ಮಾಡಲು ಅವರೇನು ಸಹಕಾರ ಕೊಡಲಿಲ್ಲ. ನನಗೆ ಹಲವಾರು ಷರತ್ತುಗಳನ್ನ ವಿಧಿಸಿ ಬಜೆಟ್ಗೆ ಸಹಕಾರ ಕೊಡಲಿಲ್ಲ” ಎಂದರು.
”ಬಿಜೆಪಿಯವರು ಸ್ವಚ್ಚ ಭಾರತ ಅಂತಾರೆ. ಆದ್ರೆ ಉತ್ತರ ಕರ್ನಾಟಕದಲ್ಲಿ ಜನ ಚೊಂಬು ಹಿಡಿದು ಬಹಿರ್ದೆಸೆಗೆ ಹೋಗುವುದು ತಪ್ಪಿಲ್ಲ” ಎಂದರು.